ಕುಮಾರಸ್ವಾಮಿಯಿಂದ ಸೂಟ್‌ಕೇಸ್‌ ರಾಜಕಾರಣ: ಜಮೀರ್‌ ಅಹ್ಮದ್‌

By Kannadaprabha NewsFirst Published Oct 27, 2021, 12:47 PM IST
Highlights

*  ಮೋದಿ ಸಾಹೇಬ್ರೆ ಅಚ್ಚೆ ದಿನ್‌ ಬೇಡ
*  ಕಾಂಗ್ರೆಸ್‌ ಗೆದ್ದು ರಾಹುಲ್‌ ಗಾಂಧಿ ಪ್ರಧಾನಿಯಾಗ್ತಾರೆ
*  ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತೇ ಇಲ್ಲ. ಬರೀ ವೋಟಿಗಾಗಿ ಜಾತಿ ಸಭೆ 
 

ಹುಬ್ಬಳ್ಳಿ(ಅ.27):  ಅಲ್ಪಸಂಖ್ಯಾತರನ್ನು ಬಲಿ ಕೊಡುವುದೇ ಕುಮಾರಸ್ವಾಮಿ ಕೆಲಸ ಎಂದು ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಜಮೀರ್‌ ಅಹ್ಮದ್‌(Zameer Ahmed Khan), ಬಿಜೆಪಿಗೆ ಅನುಕೂಲವಾಗಲೆಂದು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸೂಟ್‌ಕೇಸ್‌ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಕ್ಕೆ ಮುಸ್ಲಿಂ(Mulsim) ಅಭ್ಯರ್ಥಿಗಳನ್ನು ನಿಲ್ಲಿಸಿ, ಆರ್‌ಎಸ್‌ಎಸ್‌ಗೆ(RSS) ಬೈಯುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೆ ಬೈಯ್ದರೆ ಅಲ್ಪಸಂಖ್ಯಾತರ(Minorities) ಮತಗಳೆಲ್ಲ ಜೆಡಿಎಸ್‌ಗೆ(JDS) ಬಂದು, ಬಿಜೆಪಿ(BJP) ಗೆಲುವಿಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಸೂಟ್‌ಕೇಸ್‌(Suitcase) ಪಡೆದರೆ ಸಾಲದು, ಆರ್‌ಎಸ್‌ಎಸ್‌ಗೆ ಬೈಯುವ ಕೆಲಸವೂ ಆಗಬೇಕು ಎಂದು ಬಿಜೆಪಿಯೇ ಹೇಳಿರಬಹುದು ಎಂದರು. ಈ ಸೂಟ್‌ಕೇಸ್‌ ಪದ್ಧತಿ ಬಗ್ಗೆ ನಾನು ಹೇಳುತ್ತಿಲ್ಲ. ದೇವೇಗೌಡ್ರ ಮೊಮ್ಮಗ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ ಎಂದರು.

ಚುನಾವಣೆ(Election) ಸಂದರ್ಭದಲ್ಲಿ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಇಂತಹದ್ದೇ ರಾಜಕೀಯ(Politics) ಮಾಡುತ್ತಿದೆ. ಮುಸ್ಲಿಂ ಅಭ್ಯರ್ಥಿಯನ್ನು ಬಲಿ ಕೊಡುತ್ತಿದೆ. ಹಾನಗಲ್‌ನಲ್ಲಿ(Hanagal) ಅಭ್ಯರ್ಥಿ ಪರ ಕುಮಾರಸ್ವಾಮಿ(HD Kumaraswamy) ಒಂದು ದಿನ ಪ್ರಚಾರ ನಡೆಸಿ, ಮೈಸೂರಿಗೆ ಹೋದರು. ಪಕ್ಷದ ಅಭ್ಯರ್ಥಿಯ ಗೆಲುವು ಮುಖ್ಯವಾಗಿದ್ದರೆ ಅಲ್ಲೇ ಇದ್ದು ಅ. 27ರ ವರೆಗೆ ಪ್ರಚಾರ ನಡೆಸುತ್ತಿದ್ದರು. ಇದರಿಂದಲೇ ಅರಿವಾಗುತ್ತದೆ ಅವರ ರಾಜಕೀಯದ ಹಿನ್ನೆಲೆ ಎಂದು ಟೀಕಿಸಿದರು.

2023ಕ್ಕೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ - ಸಿದ್ದರಾಮಯ್ಯ ಸಿಎಂ : ನನಗೆ ಉಸ್ತುವಾರಿ

ಅಧಿಕಾರ ಕೊಡಿ ಎಂದಿದ್ದೆ:

ಬರೀ ಅಲ್ಪಸಂಖ್ಯಾತರಿಗಷ್ಟೇ ಅಲ್ಲ ಯಡಿಯೂರಪ್ಪಗೂ(BS Yediyurappa) ಮೋಸ ಮಾಡಿದ್ದಾರೆ. ಬಿಎಸ್‌ವೈಗೆ ಅಧಿಕಾರ ಬಿಟ್ಟು ಕೊಡಿ ಎಂದು ನಾನು ಎಚ್‌ಡಿಕೆಗೆ ಹೇಳಿದ್ದೆ. ಎಚ್‌.ಡಿ. ರೇವಣ್ಣ ಎಲ್ಲಿ ಉಪ ಮುಖ್ಯಮಂತ್ರಿ ಆಗುತ್ತಾರೋ ಎಂದು ಅಧಿಕಾರ ಬಿಟ್ಟು ಕೊಡಲಿಲ್ಲ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ಸ್ವಂತ ಸಹೋದರನ ಏಳಿಗೆಯನ್ನೇ ಸಹಿಸುವುದಿಲ್ಲ. ಇನ್ನು ನಮ್ಮ ಏಳ್ಗೆಯನ್ನು ಸಹಿಸುತ್ತಾರಾ? ಎಂದು ಪ್ರಶ್ನಿಸಿದರು. ಸೋಲುವ ಸಮಯದಲ್ಲಿ ಕುರಿ ಬಲಿ ಕೊಟ್ಟಹಾಗೆ ಅಲ್ಪಸಂಖ್ಯಾತರನ್ನು ಬಲಿಕೊಡುವವರು ಅವರು ಎಂದರು.

ಸಿದ್ದರಾಮಯ್ಯ(Siddaramaiah) ಅಲ್ಪಸಂಖ್ಯಾತರಿಗೆ ಒಳ್ಳೆಯ ಯೋಜನೆ ನೀಡಿದ್ದಾರೆ. ಆದರೆ, ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದು. ನನ್ನ ರಾಜಕೀಯ ಗುರುಗಳು ದೇವೇಗೌಡರು(HD Devegowda) ಮತ್ತು ಸಿದ್ದರಾಮಯ್ಯ. ದೇವೇಗೌಡರು ಶೇ. 100 ಸೆಕ್ಯೂಲರ್‌(Secular). ಅವರ ಒಂದು ಗುಣವೂ ಕುಮಾರಸ್ವಾಮಿಗಿಲ್ಲ ಎಂದರು. ಕುಮಾರಸ್ವಾಮಿ ಯಾರು ಅಂತಾನೇ ಜನರಿಗೆ ಗೊತ್ತಿರಲಿಲ್ಲ. ನಾನೇ ಮಾಜಿ ಪ್ರಧಾನಮಂತ್ರಿ(Prime Minister) ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು ಎಂದರು.

ಜಮೀರ ಅಹ್ಮದ ಬಸ್‌ ಚಾಲಕನಾಗಿದ್ದ ಎಂದು ಎಚ್‌ಡಿಕೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೌದು ನಾನು ಬಸ್‌ ಚಾಲಕನಾಗಿ, ಮಾಲೀಕನೂ ಆಗಿದ್ದೆ. ಆದರೆ, ಅವರ ಹಾಗೆ ಕಸ ಹೊಡೆಯುತ್ತಿರಲಿಲ್ಲ. ಟ್ರಾನ್ಸ್‌ಪೋರ್ಟ್‌(Transport) ಲೆಕ್ಕ ನೀಡಲು ನಮ್ಮ ಕಚೇರಿಗೆ ಅಲೆದಾಡುತ್ತಿದ್ದರು. ಅವರಿಗೆ ಕುಳಿತುಕೊಳ್ಳಲು ಜಾಗವಿಲ್ಲದ ಸಂದರ್ಭದಲ್ಲಿ ಜಾಗ ನೀಡಿ ನಾನು ಸಾಕಿದ್ದೇನೆ. ನನ್ನಿಂದಲೇ ಅನುಕೂಲ ಪಡೆದು ಈಗ ದೊಡ್ಡವರಾಗಿದ್ದಾರೆ. ಈಗ ತಮ್ಮನ್ನು ತಾವು ಆನೆ ಎಂದುಕೊಂಡು ನನ್ನನ್ನು ಟೀಕಿಸುತ್ತಾರೆ. ಅವರನ್ನು ಆನೆ ಮಾಡಿದ್ದೇ ನಾನು ಎಂದ ಅವರು, ಈಗ ನನ್ನ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ಕೀಳಾಗಿ ಮಾತನಾಡಬಾರದು. ನನ್ನ ಪಾಡಿಗೆ ನಾನು ಇದ್ದೇನೆ. ನಿಮ್ಮ ಪಾಡಿಗೆ ನೀವು ಇರಿ. ನನ್ನ ಕೆಣಕಿದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.

ಹೋಟೆಲ್‌ನಲ್ಲಿ ಮಧ್ಯರಾತ್ರಿ ಕುಮಾರಸ್ವಾಮಿ ರಹಸ್ಯ ಸಭೆ: ಹಳೇ ಫೈಲ್ ಓಪನ್

ಜಾತಿ ಸಭೆ:

ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತೇ ಇಲ್ಲ. ಬರೀ ವೋಟಿಗಾಗಿ ಜಾತಿ(Caste) ಸಭೆ ಮಾಡುತ್ತಿದೆ ಎಂದ ಅವರು, ಉದಾಸಿ ರೈಟ್‌ ಪರ್ಸನ್‌ ಆದರೆ, ರಾಂಗ್‌ ಪಾರ್ಟಿಯಲ್ಲಿದ್ದರು. ಅವರ ಕುಟುಂಬಕ್ಕೆ ಬಿಜೆಪಿ ಟಿಕೆಟ್‌ ಕೊಡಬೇಕಿತ್ತು. ಉದಾಸಿ ಕುಟುಂಬಕ್ಕೆ ಟಿಕೆಟ್‌ ನೀಡದ ಕಾರಣಕ್ಕೆ ಅವರು ಸೋಲುತ್ತಾರೆ. ಹಾನಗಲ್‌ನಲ್ಲಿ ಶ್ರೀನಿವಾಸ ಮಾನೆ ಗೆಲವು ನಿಶ್ಚಿತ ಎಂದು ನುಡಿದರು. ಸಿಂದಗಿಯಲ್ಲೂ ಕಾಂಗ್ರೆಸ್‌(Congress) ಗೆಲವು ಖಚಿತ. ಎರಡು ಕ್ಷೇತ್ರದಲ್ಲಿ ಜೆಡಿಎಸ್‌ ಲೆಕ್ಕಕ್ಕೆ ಇಲ್ಲ ಎಂದರು.

ಮೋದಿ ಸಾಹೇಬ್ರೆ ಅಚ್ಚೆ ದಿನ್‌ ಬೇಡ:

ಮೋದಿ(Narendra Modi) ಸಾಹೇಬ್ರೆ ನಮಗೆ ಅಚ್ಚೆ ದಿನ್‌ ಬೇಡ ಹಳೆ ದಿನಗಳನ್ನೇ ಕೊಟ್ಟು ಬಿಡಿ ಎಂದು ಜಮೀರ್‌ ಅಹ್ಮದ ಮನವಿ ಮಾಡಿದರು. ಮೋದಿ ಅಧಿಕಾರಕ್ಕೇರುವಾಗ ಉತ್ತಮ ಆಡಳಿತ ನೀಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅಚ್ಛೇ ದಿನ್‌(Achche Din) ಎನ್ನುತ್ತಲೇ ಅತ್ಯಂತ ಕೆಟ್ಟದಿನ ಕೊಟ್ಟಿದ್ದಾರೆ. ಈಗ ಹಳೆ ದಿನಗಳೇ ಇರಲಿ ಎನ್ನುವಂತಾಗಿದೆ. ತೈಲ ದರ .100 ದಾಟಿದೆ. ಬಿಜೆಪಿ ಆಡಳಿತದಿಂದ ಜನತೆ ರೋಸಿ ಹೋಗಿದ್ದು, ಮುಂದಿನ ಬಾರಿ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಆಗ ಕಾಂಗ್ರೆಸ್‌ ಗೆದ್ದು ರಾಹುಲ್‌ ಗಾಂಧಿ(Rahul Gandhi) ಪ್ರಧಾನಿಯಾಗ್ತಾರೆ ಎಂದರು.
 

click me!