
ದೇವರಾಜು ಕಪ್ಪಸೋಗೆ
ಚಾಮರಾಜನಗರ (ಮೇ.19): 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಪದೇ ಪದೇ ಭೇಟಿ ನೀಡುವ ಮೂಲಕ ಮುಖ್ಯಮಂತ್ರಿ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಢ್ಯ ತೊಡೆದು ಹಾಕಿದ್ದ ಸಿದ್ದರಾಮಯ್ಯ ಅವರು ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯೆಂದರೆ ಅವರಿಗೆ ಪಂಚಪ್ರಾಣ. ಜಿಲ್ಲೆಯಿಂದ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಅವರಿಗೆ ಹೆಚ್ಚಿನ ಬಲ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರು ಸಹ ಜಿಲ್ಲೆಯ ಜನಪ್ರತಿನಿಧಿಗಳು ಕೇಳಿದ್ದೆಲ್ಲ ನೀಡುತ್ತಾ ಬಂದಿದ್ದಾರೆ.
ಹಿಂದೆ ಮುಖ್ಯಮಂತಿಯಾಗಿದ್ದ ವೇಳೆ 17 ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಆಗಮಿಸಿ ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದರು. ಚಾಮರಾಜನಗರ ಪಟ್ಟಣದ ಅಭಿವೃದ್ಧಿಗಾಗಿಯೇ 50 ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದರು. ಈಗ ಮತ್ತೇ ಮುಖ್ಯಮಂತ್ರಿಯಾಗುತ್ತಿದ್ದು, ಗಡಿ ಜಿಲ್ಲೆ ಅಭಿವೃದ್ಧಿಗೆ ಶುಕ್ರದೆಸೆ ಆರಂಭವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ವರುಣ ವಿಧಾನಸಭೆ ಬರಲಿದ್ದು ಜೊತೆಗೆ ಚಾಮರಾಜನಗರ ಅವಿಭಜಿತ ಮೈಸೂರು ಜಿಲ್ಲೆಯಲ್ಲಿದ್ದರಿಂದ ಗಡಿಜಿಲ್ಲೆ ಕಂಡರೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೌಢ್ಯಕ್ಕೆ ತಲೆ ಕೆಡಿಸಿಕೊಳ್ಳದ ಸಿದ್ದು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ವೇಳೆ 17 ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟು 5 ವರ್ಷ ಆಡಳಿತ ನಡೆಸಿ ಗಡಿ ಜಿಲ್ಲೆಗೆ ಅಂಟಿದ್ದ ಮೌಢ್ಯಕ್ಕೆ ಎಳ್ಳುನೀರು ಬಿಟ್ಟಿದ್ದರು.
ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಮೊದಲ ಬಾರಿ ಡಿಸಿಎಂ ಹುದ್ದೆ!
ಆಗ ಚಾಮರಾಜನಗರಕ್ಕೆ ಭೇಟಿ ನೀಡಿದಷ್ಟು ಅಧಿಕಾರ ಹೆಚ್ಚುತ್ತದೆ ಎಂದು ಪದೇ ಪದೇ ಹೇಳುತ್ತಿದ್ದರು. ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವುದು ಚಾಮರಾಜನಗರ ಅಭಿವೃದ್ಧಿ ವೇಗ ಪಡೆಯಲಿದೆ ಎಂಬುದು ಜನರ ಪಕ್ಷಾತೀತ ಅಭಿಪ್ರಾಯವಾಗಿದೆ. ಕೊಯಮತ್ತೂರಿನಲ್ಲಿ ರೋಡ್ ಶೋ ಮಾಡಿದ್ದರು. ಗಡಿ ಚಾಮರಾಜನಗರ ಜಿಲ್ಲೆಯ ಜನತೆಯ ವಲಸೆ ತಪ್ಪಿಸುವ ಸಲುವಾಗಿ ಬಹು ನಿರೀಕ್ಷೆಯಿಂದ ಆರಂಭಿಸಲಾದ ಚಾಮರಾಜನಗರ ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರದಿದ್ದಾಗ ಕೈಗಾರಿಕೆಗಳನ್ನು ಸೆಳೆಯಲು ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ತಮಿಳುನಾಡಿನ ಕೊಯಮತ್ತೂರಿನಲ್ಲಿ ರೋಡ್ ಶೋ ನಡೆಸಿ ಗಮನ ಸೆಳೆದಿದ್ದರು.
ಆಗ ಆರಂಭಿಕ ಯಶ ಕಂಡಿದ್ದ ಸಿದ್ದರಾಮಯ್ಯ 300 ಕೈಗಾರಿಕೋದ್ಯಮಿಗಳು ಸುಮಾರು 12 ಸಾವಿರ ಕೋಟಿ ರು. ಹೂಡಿಕೆ ಮಾಡಲು ಆಸಕ್ತಿ ತೋರಿದ್ದರು. ಆದರೆ, ನಂತರ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕಿದ್ದರು. ಈಗ ಮತ್ತೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿರುವುದರಿಂದ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆ ಗರಿಗೆದರಿದೆ. ಹಿಂದಿನ ಅವಧಿಯಲ್ಲಿ ಮೆಡಿಕಲ್ ಕಾಲೇಜು, ಚಾಮುಲ್ ಸ್ಥಾಪನೆ ಮಾಡುವ ಅಭಿವೃದ್ಧಿಗೆ ಮುನ್ನಡಿ ಬರೆದಿದ್ದರು. ಕಾನೂನು ಕಾಲೇಜು ಮಂಜೂರು ಮಾಡಿದ್ದರೂ ಸ್ಧಾಪನೆಯಾಗಿಲ್ಲ.
ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ
ಈ ಶೈಕ್ಷಣಿಕ ವರ್ಷದಲ್ಲಿ ಸ್ಧಾಪನೆ ಮಾಡಲು ಮುಂದಾಗಬೇಕಿದೆ. ಜೊತೆಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಜಿಲ್ಲಾ ಸಹಕಾರ ಬ್ಯಾಂಕ್ ಸ್ಥಾಪನೆಗೂ ಮುಂದಾಗಬೇಕಿದೆ. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರದ ಮೌಢ್ಯ ತೊಡೆದು ಹಾಕಿದ್ದ ಸಿದ್ದರಾಮಯ್ಯ ಈಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದು ಗಡಿಜಿಲ್ಲೆ ನಿರೀಕ್ಷೆಗಳು ಬೆಟ್ಟದಷ್ಟಾಗಿದೆ. ಹಿಂದಿನ ರೀತಿಯಲ್ಲೂ ಈ ಬಾರಿಯೂ ಅಭಿವೃದ್ಧಿಯ ಹೊಳೆ ಹರಿಸಲಿದ್ದಾರೆ ಎಂಬುದು ಗಡಿ ಜಿಲ್ಲೆಯ ಜನರ ಆಶಾಭಾವನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.