ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ನಂಗೊತ್ತಿಲ್ಲ: ಸಿದ್ದರಾಮಯ್ಯ

Published : Aug 12, 2022, 05:05 AM IST
ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ನಂಗೊತ್ತಿಲ್ಲ:  ಸಿದ್ದರಾಮಯ್ಯ

ಸಾರಾಂಶ

‘ನನಗೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವಾಗ ಖಚಿತ ಮಾಹಿತಿ ಇತ್ತು. ಈಗ ಬಸವರಾಜ ಬೊಮ್ಮಾಯಿ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಅವರದ್ದೇ ಪಕ್ಷದ ನಾಯಕರು ಹೇಳಿರುವುದರಿಂದ ನಮ್ಮ ಪಕ್ಷದವರು ಟ್ವೀಟ್‌ ಮಾಡಿರಬಹುದು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರು (ಆ.12): ‘ನನಗೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವಾಗ ಖಚಿತ ಮಾಹಿತಿ ಇತ್ತು. ಈಗ ಬಸವರಾಜ ಬೊಮ್ಮಾಯಿ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಅವರದ್ದೇ ಪಕ್ಷದ ನಾಯಕರು ಹೇಳಿರುವುದರಿಂದ ನಮ್ಮ ಪಕ್ಷದವರು ಟ್ವೀಟ್‌ ಮಾಡಿರಬಹುದು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತ ಪಕ್ಷದ ಟ್ವೀಟ್‌ನಿಂದ ಅಂತರ ಕಾಯ್ದುಕೊಂಡಿರುವ ಅವರು, ‘ಬಿಜೆಪಿಯ ನಾಯಕರ ಹೇಳಿಕೆಯಿಂದ ನಮ್ಮ ಪಕ್ಷದವರು ಟ್ವೀಟ್‌ ಮಾಡಿರಬೇಕು. ನಾನಂತೂ ಟ್ವೀಟ್‌ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರನ್ನು ಬದಲಿಸುವಾಗ ನನಗೆ ಮಾಹಿತಿ ಇತ್ತು. ಆದರೆ ಈಗ ಮಾಹಿತಿ ಇಲ್ಲ. ಸುರೇಶ್‌ಗೌಡ ಯಾವ ಪಕ್ಷದವರು? ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದವರು ಹಾಗೂ ಮಾಜಿ ಶಾಸಕರು. ಜತೆಗೆ ಕೇಂದ್ರದ ಮಾಜಿ ಸಚಿವರೂ ಆಗಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಹೀಗಾಗಿಯೇ ನಮ್ಮ ಪಕ್ಷದವರು ಟ್ವೀಟ್‌ ಮಾಡಿರಬೇಕು’ ಎಂದು ಸಮರ್ಥಿಸಿಕೊಂಡರು.

ಬಿಜೆಪಿಗರ ಢೋಂಗಿತನದ ರಾಷ್ಟ್ರಭಕ್ತಿ ಬೇಡ: ಸಿದ್ದರಾಮಯ್ಯ

ದೇಶದ ಆರ್ಥಿಕ ಸ್ಥಿತಿ ಹಾಳು ಮಾಡುತ್ತಿರುವ ಬಿಜೆಪಿ: ಕಾಂಗ್ರೆಸ್‌ನ ನಮ್ಮ ಪೂರ್ವಿಕರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಈ ದೇಶದ ಸ್ವಾತಂತ್ರ್ಯ, ಸಂವಿಧಾನ ಉಳಿಸುವ ಕೆಲಸ ಮಾಡಬೇಕಿದೆ. ದೇಶದ ಆರ್ಥಿಕ ಪರಿಸ್ಥಿತಿ ಹಾಳು ಮಾಡುತ್ತಿರುವ ಕೇಂದ್ರ, ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳನ್ನ ಕಿತ್ತೊಗೆಯಲು ಈ ಅಮೃತ ಮಹೋತ್ಸವದ ದಿನ ಜನತೆ ಶಪಥ ಮಾಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ಕಾಂಗ್ರೆಸ್‌ ಗುರುವಾರ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವದ ಪಾದಯಾತ್ರೆ ಸಮಾರೋಪದಲ್ಲಿ ಮಾತನಾಡಿ, 62 ವರ್ಷಗಳ ಸುರ್ದೀಘ ಕಾಲ ಕಾಂಗ್ರೆಸ್‌ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದೆ ಎಂದರು

ಪ್ರಜಾಪ್ರಭುತ್ವ ಉಳಿಸಬೇಕು: ಬಿಜೆಪಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲು ಸಾಧ್ಯವಿಲ್ಲ. ಸಂವಿಧಾನ ಉಳಿಯದೇ ಹೋದರೆ ನಾವು ಯಾರೂ ಉಳಿಯುವುದಿಲ್ಲ. ಅಂಬೇಡ್ಕರ್‌ ಬರೆದ ಸಂವಿಧಾನದ ಅಶಯಗಳು ಈಡೇರಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಂದಾಗಿಯೇ ಬಡವರು ಬ್ಯಾಂಕ್‌ ಮೆಟ್ಟಿಲು ಹತ್ತಲಿಕ್ಕೆ ಸಾಧ್ಯವಾಯಿತು. ಆದರೆ ಬ್ಯಾಂಕುಗಳ ಖಾಸಗೀಕರಣದ ಜೊತೆಗೆ ವಿಲೀನಗೊಳಿಸಲು ಬಿಜೆಪಿ ಹೊರಟಿದೆ ಎಂದು ಟೀಕಿಸಿದರು.

ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತವಾಗಿಲ್ಲ. ಜನ ಸಾಮಾನ್ಯರು ನೆಮ್ಮದಿಯಿಂದ ಬದುಕು ಪರಿಸ್ಥಿತಿ ಇದೆಯೆ, ರಸಗೊಬ್ಬರ ಸಿಗುತ್ತಿಲ್ಲ. ಪೆಟ್ರೋಲ್‌ ಡೀಸೆಲ್‌ ಗ್ಯಾಸ್‌ ದರ ಎರಡುಪಟ್ಟು ಜಾಸ್ತಿ ಆಗಿದೆ. ದೇಶಕ್ಕೆ ಮೋದಿ ಏನು ತಂದಿದ್ದಾರೆ. ಕಪ್ಪು ಹಣ ತರುತ್ತೇವೆಂದು, ಭ್ರಷ್ಟಾಚಾರ ತಡೆಯುತ್ತೇವೆಂದರು. ನೋಟು ಅಮಾನ್ಯೀಕರಣ ಮಾಡಿದರು. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಶ ಅಲ್ಲ ಇದು ಸಬ್‌ ಕಾ ದೇಶ ನಾಶ ಹೋಗಯಾ ಅಂತ ಸಿದ್ದರಾಮಯ್ಯ ಗೇಲಿ ಮಾಡಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ: ಬಡವರಿಗೆ ಕೊಟ್ಟಅಕ್ಕಿ ಕಿತ್ತುಕೊಂಡರು. ನಾವು 7 ಕೆಜಿ ಅಕ್ಕಿ ಕೊಟ್ಟವು. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ. ಎಷ್ಟೇ ದುಡ್ಡು ಖರ್ಚು ಆಗಲಿ. ಯಾರು ಹಸಿವಿನಿಂದ ಮಲಗಬಾರದು. ಭೂ ಸುಧಾರಣೆ ಕಾನೂನು ತಿದ್ದುಪಡಿ ತಂದು ಯಾವುದೇ ಶ್ರೀಮಂತರಿಗೆ ಎಷ್ಟುಬೇಕಾದರೂ ಜಮೀನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಸರ್ಕಾರ ಇರಬೇಕಾ, ಈ ಸರ್ಕಾರ ಯಾರ ಪರವಾಗಿದೆ. ಶ್ರೀಮಂತರ ಪರವಾಗಿ, ಶೇ.40 ಕಮಿಷನ್‌ ಕೊಡುವರ ಪರವಾಗಿ ಇರುವ ಸರ್ಕಾರ ಬಿಜೆಪಿ ಎಂದು ಕಟುವಾಗಿ ಟೀಕಿಸಿದರು.

ಅಂಬಾನಿ, ಅದಾನಿ ಕೈಗೆ ಚಿನ್ನದ ಖಜಾನೆ ನೀಡಲು ಕೇಂದ್ರ ಸಿದ್ಧತೆ: ಸಿದ್ದರಾಮಯ್ಯ ಕಿಡಿ

ಪಕ್ಷದ ಜಿಲ್ಲಾಧ್ಯಕ್ಷ ಕೆಶವರೆಡ್ಡಿ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ವಿಧಾನ ಪರಿಷತ್ತು ವಿಪಕ್ಷ ನಾಯಕ ಬಿ.ಕೆ.ಹರಿಸಪ್ರಸಾದ್‌, ಜಿಲ್ಲೆಯ ಉಸ್ತುವಾರಿ ವಿ.ಎಸ್‌.ಉಗ್ರಪ್ಪ, ಶಾಸಕರಾದ ಎನ್‌.ಎಚ್‌.ಶಿವಶಂಕರರೆಡ್ಡಿ, ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ, ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ, ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌, ಕೆಪಿಸಿಸಿ ಕಾರ್ಯದರ್ಶಿ ಉದಯಶಂಕರ್‌, ಮಾಜಿ ಶಾಸಕ ಎಸ್‌.ಎಂ ಮುನಿಯಪ್ಪ, ಎನ್‌.ಸಂಪಂಗಿ, ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ