
ಬೆಂಗಳೂರು, (ಜ.04): ಮೇಕೆದಾಟು ಅಣೆಕಟ್ಟು ಯೋಜನೆ (Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಪಾದಯಾತ್ರೆ ಪಾಲ್ಗೊಳ್ಳುವಂತೆ ಜನಜಾಗೃತಿ ಸಭೆಗಳನ್ನ ಮಾಡುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪರೋಕ್ಷವಾಗಿ ಹುಳಿ ಹಿಂಡಿದೆ.
ಹೌದು... ಮೇಕೆದಾಟು ಪಾದಯಾತ್ರೆ(Mekedatu Padayatra) ನಿಲ್ಲಿಸಲು ಸಿದ್ದರಾಮಯ್ಯನವರೇ ಸರ್ಕಾರಕ್ಕೆ ರಹಸ್ಯ ಮನವಿ ಮಾಡಿದ್ದಾರೆ ಎಂದು ಬಿಜೆಪಿ(BJP) ಗಂಭೀರ ಆರೋಪ ಮಾಡಿದೆ.
Mekedatu Project: ಪಾದಯಾತ್ರೆಗೆ ಹಲವು ಹಂತದ ತಯಾರಿ, ಡಿಕೆಶಿ ನೇತೃತ್ವದಲ್ಲಿ ತಯಾರಿ
ಮುಖ್ಯಮಂತ್ರಿ ಬದಲಾವಣೆಗೆ ಈ ಷಡ್ಯಂತ್ರ, ಸಿಎಂ ವಿರುದ್ಧ ಹೋರಾಟ ಮಾಡಿ ಎಂದು ಬಿಜೆಪಿಯವರೇ ನಮಗೆ ಹೇಳುತ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಡಿಕೆಶಿ ಅವರೇ ಬಾಯಿಗೆ ಬಂದಂತೆ ಮಾತನಾಡುವುದು ಸುಲಭ. ಮುಖ್ಯಮಂತ್ರಿ ಬದಲಾವಣೆಗೆ ಈ ಷಡ್ಯಂತ್ರ, ಸಿಎಂ ವಿರುದ್ಧ ಹೋರಾಟ ಮಾಡಿ ಎಂದು ಬಿಜೆಪಿಯವರೇ ನಮಗೆ ಹೇಳುತ್ತಿದ್ದಾರೆ ಎಂದು ಯಾಕೆ ಸುಳ್ಳು ಹೇಳುತ್ತೀರಿ? ಎಂದು ಪ್ರಶ್ನಿಸಿದೆ.
ಪಾದಯಾತ್ರೆ ನಿಲ್ಲಿಸಿ ಎಂದು ಸಿದ್ದರಾಮಯ್ಯನವರೇ ಸರ್ಕಾರಕ್ಕೆ ರಹಸ್ಯ ಮನವಿ ಮಾಡಿದ್ದಾರೆ ಎಂಬುದು ನಿಮಗೆ ಗೊತ್ತೇ? ಡಿಕೆಶಿ & ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿ ಸಿಎಂ ಆಗಬಹುದೆನ್ನುವ ಭ್ರಮೆಯಲ್ಲಿದ್ದಾರೆ. ತಾನು ಬಳ್ಳಾರಿ ಪಾದಯಾತ್ರೆ ಮಾಡಿ ಸಿಎಂ ಆದೆ, ಈಗ ಡಿಕೆಶಿ ಮೇಕೆದಾಟು ಪಾದಯಾತ್ರೆ ಮಾಡಿ ಸಿಎಂ ಆಗಬಹುದೆಂಬ ಆತಂಕ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಹೀಗಾಗಿ ಪಾದಯಾತ್ರೆಯ ತಡೆಗಾಗಿ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಮೇಕೆದಾಟು ಪಾದಯಾತ್ರೆ ಯಾರಿಗಾಗಿ? ಜನತೆಗಾಗಿಯೋ ಅಥವಾ ಕಾಂಗ್ರೆಸ್ ನಾಯಕರ ಮೇಲಾಟಕ್ಕೋ? ಈ ಪಾದಯಾತ್ರೆ 2023 ರ ಚುನಾವಣೆಗಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ಬಲಪ್ರದರ್ಶನಕ್ಕೆ ಆಯೋಜಿಸಿರುವ ಒಂದು ನಾಟಕ ಅಷ್ಟೇ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಿಂದ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಒಟ್ಟು 10 ದಿನಗಳ ಕಾಲ ಪಾದಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಪಾದಯಾತ್ರೆ ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗುತ್ತಿದೆ.
ಪಾದಯಾತ್ರೆಗೆ ಕೊರೋನಾ ಅಡ್ಡಿ?
ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಮೇಲೆ ಕೊರೊನಾ ಸೋಂಕಿನ ಕರಿನೆರಳು ಬೀಳಲಿದೆಯಾ ಎಂಬ ಆತಂಕ ಇದೀಗ ಶುರುವಾಗಿದೆ.
ರಾಜ್ಯದಲ್ಲಿ ಸ್ಫೋಟವಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪ್ರಕರಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದೇ ವೇಳೆ ಪಾದಯಾತ್ರೆ ನಡೆಸಿದರೆ ಕೊರೊನಾ ಹರಡಲು ರಹದಾರಿ ಮಾಡಿಕೊಟ್ಟಂತಾಗುವುದಿಲ್ಲವೆ? ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ನಾವು ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿಯೇ ಮಾಡುವುದಾಗಿ ಹೇಳುತ್ತಲೇ ಬರುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.