
ಬೆಂಗಳೂರು, (ಜೂನ್.02): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಆರ್.ಎಸ್.ಎಸ್ ಕಂಡರೆ ನನಗೆ ಭಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಹೇಳಿಯನ್ನು ಉದಾಹಾರಣೆ ಇಟ್ಟುಕೊಂಡು ಸಿದ್ದರಾಂಯ್ಯ ಅವರು ಮತ್ತೆ ಆರ್ಎಸ್ಎಸ್ ವಿರುದ್ಧ ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಡಿ.ವಿ.ಸದಾನಂದ ಗೌಡ ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ . ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ RSS ಕಂಡರೆ ಭಯ ಇದೆ. ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು ಎನ್ನಲಾಗುತ್ತಿದೆ. ಡಿ.ವಿ.ಸದಾನಂದಗೌಡರು ಯಾಕೆ ತನ್ನ ಮಾತೃ ಸಂಸ್ಥೆಯ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು ಎಂದು ಹೇಳಿದ್ದಾರೆ.
'ಆರ್ಎಸ್ಎಸ್ ಟೀಕಿಸೋದನ್ನ ಸಿದ್ದರಾಮಯ್ಯ ನಿಲ್ಲಿಸದಿದ್ದರೆ ಪರಿಸ್ಥಿತಿ ಸರಿಯಿರಲ್ಲ'
ಆರ್.ಎಸ್.ಎಸ್ ಬಗೆಗಿನ ಭಯದ ಕಾರಣದಿಂದಾಗಿಯೇ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಆರ್.ಎಸ್.ಎಸ್ ಮೇಲೆ ದೇಶದ ಮೊದಲ ಗೃಹಸಚಿವ ವಲ್ಲಭಭಾಯಿ ಪಟೇಲ್ ಅವರು ನಿಷೇಧ ಹೇರಿದ್ದು ಎನ್ನುವುದು ನೆನಪಿರಲಿ. ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ಈ ಸಮುದಾಯಗಳಂತೆ ನನಗೂ ಆರ್.ಎಸ್.ಎಸ್ ಬಗ್ಗೆ ಭಯ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಮೀಸಲಾತಿ, ಭೂಸುಧಾರಣೆಯಂತಹ ಬಹುಸಂಖ್ಯೆಯ ಹಿಂದೂಗಳೇ ಫಲಾನುಭವಿಗಳಾಗಿರುವ ಸಾಮಾಜಿಕ ನ್ಯಾಯದ ಕಾನೂನುಗಳನ್ನೇ ವಿರೋಧಿಸುವ ಆರ್.ಎಸ್.ಎಸ್ ಬಗ್ಗೆ ಭಯವಲ್ಲದೆ ಪ್ರೀತಿ ಇರಲು ಸಾಧ್ಯವೇ? ತಮ್ಮ ಮಕ್ಕಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ ಸಮುದಾಯದ ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರ್.ಎಸ್.ಎಸ್ ಬಗ್ಗೆ ಭಯ ಸಹಜ ಅಲ್ಲವೇ ಸದಾನಂದ ಗೌಡರೇ? ಎಂದು ಪ್ರಶ್ನಿಸಿದ್ಧಾರೆ.
ಯಾವುದೇ ವ್ಯಕ್ತಿ-ಸಿದ್ದಾಂತ- ಸಂಸ್ಥೆ ಇತರರಲ್ಲಿ ಗೌರವ ಹುಟ್ಟಿಸಬೇಕೇ ಹೊರತು ಭಯ ಹುಟ್ಟಿಸುವುದಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಬೇಕಾದವರು ಭಯವನ್ನು ಉತ್ಪಾದಿಸುವವರೇ ಹೊರತು ಭಯ ಪಡುವವರಲ್ಲ. ಆರ್.ಎಸ್.ಎಸ್ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಯಾಕೆ ಅಲ್ಲಿ ಹಿಂದುಗಳೇ ಆಗಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಲ್ಲ?ಎನ್ನುವ ನನ್ನ ಸರಳ ಪ್ರಶ್ನೆಗೆ ಯಾಕೆ, ಯಾರೂ ಉತ್ತರಿಸುತ್ತಿಲ್ಲ? ಎಂದು ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
ಡಿವಿ ಸದಾನಂದಗೌಡ ಹೇಳಿದ್ದೇನು?
ಆರ್ಎಸ್ಎಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ ಈ ವಾರ್ ಬದಲಾಗಿದೆ. ನಿನ್ನೆಯಿಂದ ಇದು ಬದಲಾಗಿದ್ದು ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ ಎಂಬಂತಾಗಿದೆ. ಅವರಿಗೆ ಬೇರೆ ವಿಚಾರಗಳು ಇಲ್ಲ. ಸಿದ್ದರಾಮಯ್ಯ ಸದಾ ಆರ್ಎಸ್ಎಸ್ ಸ್ಮರಣೆಯಲ್ಲೇ ಇರುತ್ತಾರೆ. ಅವರಿಗೆ ಸದಾ ಆರ್ ಎಸ್ ಎಸ್ ಮಾತ್ರ ಕಾಣಿಸುತ್ತಿದೆ. ಹಾಗಾಗಿ ಆರ್ ಎಸ್ ಎಸ್ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಸದಾನಂದಗಡ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.