
ನವದೆಹಲಿ: ಮಹಾರಾಷ್ಟ್ರದ ಶಿವಸೇನೆಯಲ್ಲಿ ಬಂಡಾಯ ಎದ್ದಿದ್ದ 16 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿ ಸೇರಿದಂತೆ 2 ತೀರ್ಪುಗಳನ್ನು ಗುರುವಾರ ಸುಪ್ರೀಂಕೋರ್ಟ್ ನೀಡಲಿದೆ. 16 ಶಾಸಕರು ಅನರ್ಹಗೊಂಡರೆ ಮಹಾರಾಷ್ಟ್ರ ಸರ್ಕಾರ ಬೀಳಬಹುದು ಎನ್ನಲಾಗುತ್ತಿದ್ದರೂ, ನಮ್ಮ ಬಳಿ ಬಹುಮತ ಸಾಬೀತು ಮಾಡಲು ಶಾಸಕರಿದ್ದಾರೆ ಎಂದು ಆಡಳಿತ ಪಕ್ಷಗಳ ನಾಯಕರು ಹೇಳಿದ್ದಾರೆ.
ಶಿವಸೇನೆಯಲ್ಲಿ ಉಂಟಾದ ಬಿಕ್ಕಟ್ಟಿನ ಬಳಿಕ ಪಕ್ಷವನ್ನು ತೊರೆದು ಬಿಜೆಪಿ ಜತೆ ಕೈಜೋಡಿಸಿದ ಏಕನಾಥ ಶಿಂಧೆ ಬಣದ 16 ಶಾಸಕರನ್ನು ಅನರ್ಹ ಮಾಡಬೇಕು ಎಂದು ಠಾಕ್ರೆ ಬಣ ಕೋರಿತ್ತು. ಆದರೆ ಇದಕ್ಕೆ ಶಿಂಧೆ ಆಕ್ಷೇಪಿಸಿದ್ದರು. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದಲ್ಲದೇ ಮಹಾರಾಷ್ಟ್ರ ಸರ್ಕಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ಕುರಿತು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಮಾ.16ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದರ ತೀರ್ಪು ಗುರುವಾರ ಪ್ರಕಟವಾಗಲಿದೆ. ಇದೇ ವೇಳೆ, ದಿಲ್ಲಿ ಸರ್ಕಾರದಲ್ಲಿ ಉಪರಾಜ್ಯಪಾಲರ ಮಾತು ಅಂತಿಮವೇ ಅಥವಾ ಚುನಾಯಿತ ರಾಜ್ಯ ಸರ್ಕಾರದ ಮಾತು ಅಂತಿಮವೇ ಎಂಬ ವ್ಯಾಜ್ಯದ ಬಗ್ಗೆ ಕೂಡ ಗುರುವಾರ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದೆ.
‘ಮಹಾ’ ಬಿಜೆಪಿಗೆ ಅಜಿತ್ ಪವಾರ್ ಹಾಗೂ 40 ಶಾಸಕರ ಬೆಂಬಲ? ಎನ್ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..
ಸರ್ಕಾರ ಸೇಫ್:
ಒಂದು ವೇಳೆ 16 ಶಾಸಕರ ಅನರ್ಹತೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದರೆ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿಂಧೆ ಬಣ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಬೀಳಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನ್ಕುಳೆ ಹಾಗೂ ಸ್ಪೀಕರ್ ರಾಹುಲ್ ನಾರ್ವೇಕರ್, ಶಾಸಕರು ಅನರ್ಹರಾದರೂ ಸರ್ಕಾರ ಸುರಕ್ಷಿತವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಹುಮತ ಸಾಬೀತಿಗೆ ಸೂಚಿಸಿದರೆ ನಮ್ಮ ಬಳಿ 184 ಮತಗಳಿವೆ. ಅಷ್ಟೇ ಅಲ್ಲದೇ ಮುಂದಿನ ಬಾರಿಯೂ ಇದೇ ಮೈತ್ರಿಕೂಟ ಸರ್ಕಾರ ರಚನೆ ಮಾಡುತ್ತದೆ ಎಂದು ಬಾವನ್ಕುಳೆ ಹೇಳಿದ್ದಾರೆ. ಇದೇ ವೇಳೆ, ಸುಪ್ರೀಂಕೋರ್ಟ್ ತೀರ್ಪು ಮೈಲಿಗಲ್ಲಿನದ್ದಾಗಲಿದೆ ಎಂದು ಶಿವಸೇನೆ (ಯುಬಿಟಿ) ವಕ್ತಾರ ಸಂಜಯ ರಾವುತ್ ಹೇಳಿದ್ದಾರೆ.
ಮತ್ತೊಂದು ಕ್ಷಿಪ್ರ ರಾಜಕೀಯ ಕ್ರಾಂತಿಗೆ ಸಾಕ್ಷಿಯಾಗಲಿದೆಯಾ ಮಹಾರಾಷ್ಟ್ರ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.