
ಶಿವಮೊಗ್ಗ, (ಸೆ.21): 2023ರ ವಿಧಾನಸಭಾ ಚುನಾವಣೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆಗಲೇ ಜೆಡಿಎಸ್ ಭರ್ಜರಿ ತಯಾರಿ ನಡೆಸಿದೆ.
ಹೌದು...ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಈಗಲೇ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಗುಬ್ಬಿ ಶಾಸಕ ಶ್ರೀನಿವಾಸ್ ಜೆಡಿಎಸ್ ತೊರೆಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಉದ್ಯಮಿ ನಾಗರಾಜು ಎನ್ನುವ ಹೊಸ ಅಭ್ಯರ್ಥಿಯನ್ನು ಕುಮಾರಸ್ವಾಮಿ ಹುಟ್ಟುಹಾಕಿದ್ದಾರೆ.
ಚುನಾವಣೆಗೂ ಮುನ್ನ ಆಪರೇಷನ್ ಪಾಲಿಟಿಕ್ಸ್, ಜೆಡಿಎಸ್ ತೊರೆಯಲು ಹೊರಟವರಿಗೆ ಎಚ್ಡಿಕೆ ಶಾಕ್..!
ಅದರಂತೆ ಇಂದು (ಸೆ.21) ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಭದ್ರಾವತಿಯ ಗೋಣಿಬೀಡಿನಲ್ಲಿ ಅಪ್ಪಾಜಿ ಗೌಡರ ಪುತ್ಥಳಿ ಅನಾವರಣ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಶಾರದಾ ಅಪ್ಪಾಜಿಗೌಡ ಸ್ಪರ್ಧಿಸಲಿದ್ದಾರೆ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದರು.
ಭದ್ರಾವತಿ ಕ್ಷೇತ್ರದ ಜನರ ಹಾಗೂ ಅಪ್ಪಾಜಿಗೌಡರ ಬೆಂಬಲಿಗರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಈಗಾಗಲೇ ಕ್ಷೇತ್ರದ ಜನರೇ ತಮ್ಮ ಅಭ್ಯರ್ಥಿ ಯಾರೆಂದು ನಿರ್ಧರಿಸಿದ್ದಾರೆ. ಹಾಗೆಯೇ ಸಹೋದರಿ ಶಾರದಾ ಅಪ್ಪಾಜಿಗೌಡರನ್ನು ಮುಂದಿನ ಅಭ್ಯರ್ಥಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ತಿಂಗಳ 27 ರಂದು ಬೆಂಗಳೂರಿನಲ್ಲಿ ಕಾರ್ಯಾಗಾರ ಮಾಡುತ್ತಿದ್ದು, 140 ಅಭ್ಯರ್ಥಿಗಳ ಮೊದಲ ಹಂತದ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ. ಅಲ್ಲಿ ಎಲ್ಲಾ ವಿಷಯವನ್ನು ಚರ್ಚೆ ಮಾಡುತ್ತೇವೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಮಂಡನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಚ್ ಡಿಕೆ, ಬಿಜೆಪಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿಧೇಯಕ ಜಾರಿಗೆ ತರಲು ಹೊರಟಿದೆ. ಬಿಜೆಪಿ ಪಕ್ಷ ಒಂದು ಕಡೆ ಹಿಂದುತ್ವದ ಹೆಸರು ಹೇಳುತ್ತಾರೆ. ಮತ್ತೊಂದು ಕಡೆ ಅವರದ್ದೇ ಸರ್ಕಾರದಲ್ಲಿ ದೇವಸ್ಥಾನವನ್ನು ಒಡೆಯುತ್ತಾರೆ. ವಿಧೇಯಕ ತರಲು ಹೊರಟಿರುವ ಮೊದಲೇ ಎಚ್ಚೇತ್ತುಕೊಳ್ಳಬೇಕಿತ್ತು. ವಿಧೇಯಕದ ಮೂಲಕ ಮತ್ತೊಂದು ಡ್ರಾಮಾ ಪ್ರಾರಂಭಿಸಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.