
ನವದೆಹಲಿ : ತೀವ್ರ ಗದ್ದಲ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಸಂಸತ್ತಿನ ಮಳೆಗಾಲದ ಅಧಿವೇಶನದ ಕಾರ್ಯಕಲಾಪ, ಸೋಮವಾರದಿಂದ ಮರಳಿ ಹಳಿಗೆ ಬರುವ ನಿರೀಕ್ಷೆ ಇದೆ. ಪಹಲ್ಗಾಂ ದಾಳಿ, ಆಪರೇಷನ್ ಸಿಂದೂರ ವಿಚಾರ ಸಂಸತ್ತಿನ ಮುಂದೆ ಚರ್ಚೆಗೆ ಬರಲಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿರುಸಿನ ಚರ್ಚೆ ನಡೆಯುವ ಸಾಧ್ಯತೆ ಇದೆ.
ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸಂಸತ್ತಿನಲ್ಲಿ ಮಾತನಾಡಲಿದ್ದು, ಪ್ರಧಾನಿ ಮೋದಿ ಅವರು ಅಗತ್ಯ ಬಿದ್ದಾಗ ಮಧ್ಯಪ್ರವೇಶಿಸಲಿದ್ದಾರೆ. ಇನ್ನು ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಮಾತಿನ ಬಾಣ ಬಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲೆತ್ನಿಸಲಿದ್ದು, ಎಸ್ಪಿಯ ಅಖಿಲೇಶ್ ಯಾದವ್, ಇತರರು ಇದಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ.
16 ಗಂಟೆ ಚರ್ಚೆ:
ಆಪರೇಷನ್ ಸಿಂದೂರ ಕುರಿತು ಸೋಮವಾರದಿಂದ ಲೋಕಸಭೆ, ಮಂಗಳವಾರದಿಂದ ರಾಜ್ಯಸಭೆಯಲ್ಲಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಈಗಾಗಲೇ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಎರಡೂ ಸದನಗಳಲ್ಲಿ ನಿರಂತರ ತಲಾ 16 ಗಂಟೆಗಳಷ್ಟು ಸುದೀರ್ಘ ಚರ್ಚೆಗೆ ಒಪ್ಪಿಗೆ ನೀಡಲಾಗಿದೆ. ಪ್ರತಿಪಕ್ಷಗಳು ಪಹಲ್ಗಾಂ ದಾಳಿಯಲ್ಲಿ ಗುಪ್ತಚರ ವೈಫಲ್ಯ ಆರೋಪ, ಭಾರತ ಮತ್ತು ಪಾಕ್ ಕದನ ವಿರಾಮ ಕುರಿತ ಡೊನಾಲ್ಡ್ ಟ್ರಂಪ್ ಹೇಳಿಕೆ ಪ್ರಸ್ತಾಪಿಸಲು ಈಗಾಗಲೇ ಸಿದ್ಧತೆ ನಡೆಸಿವೆ.
ತರೂರ್ ನಡೆ ಕುತೂಹಲ:
ಕಾಂಗ್ರೆಸ್ನಲ್ಲಿದ್ದರೂ ಆಪರೇಷನ್ ಸಿಂದೂರವನ್ನು ಬೆಂಬಲಿಸಿದ್ದ, ವಿದೇಶಕ್ಕೆ ಕಳುಹಿಸಿಕೊಟ್ಟ ಸರ್ವಪಕ್ಷ ನಿಯೋಗವೊಂದರ ನೇತೃತ್ವವನ್ನೂ ವಹಿಸಿದ್ದ ಸಂಸದ ಶಶಿ ತರೂರ್ ನಡೆ ಚರ್ಚೆ ವೇಳೆ ತೀವ್ರ ಕುತೂಹಲ ಮೂಡಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.