Belagavi Session: ಅಧಿವೇಶನ ಸಭಾಂಗಣದ ಬಾಗಿಲು ಮುಚ್ಚಿ ಸಾವರ್ಕರ್‌ ಫೋಟೋ ಅನಾವರಣ

By Sathish Kumar KHFirst Published Dec 19, 2022, 12:04 PM IST
Highlights

ಸುವರ್ಣಸೌಧದ ಅಧಿವೇಶನ ಸಭಾಂಗಣದ ನಾಲ್ಕು ಬಾಗಿಲುಗಳನ್ನು ಮುಚ್ಚಿ ವೀರ್‌ ಸಾವರ್ಕರ್‌ ಫೋಟೋ ಅನಾವರಣ. 
ಸಾವರ್ಕರ್‌ ಫೋಟೊ ಅಳವಡಿಕೆ ವಿಚಾರದಲ್ಲಿ ಕಾಂಗ್ರೆಸ್‌ ನಡೆಯಿಂದ ಬಿಜೆಪಿ ಅಜೆಂಡಾಕ್ಕೆ ಹಿನ್ನಡೆ?
ಸಾವರ್ಕರ್‌ ಫೋಟೋ ಅನಾವರಣ ಮಾಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಬಿಎಸ್‌ ಯಡಿಯೂರಪ್ಪ

ಬೆಳಗಾವಿ (ಡಿ.19): ರಾಜ್ಯ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭಿಸುವ ಮುನ್ನ ಬೆಳಗಾವಿಯ ಸುವರ್ಣಸೌಧದ ಅಧಿವೇಶನ ಸಭಾಂಗಣದ ನಾಲ್ಕು ಬಾಗಿಲುಗಳನ್ನು ಮುಚ್ಚಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವೀರ್‌ ಸಾವರ್ಕರ್‌ ಫೋಟೋ ಅನಾವರಣ ಮಾಡಿದರು. 

ಇನ್ನು ಅಧಿವೇಶನ ಸಭಾಂಗಣದ ಸುತ್ತಲೂ ಸಾವರ್ಕರ್‌ ಫೋಟೋ ಅಳವಡಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಸಭಾಂಗಣದ ನಾಲ್ಕು ದಿಕ್ಕಿನ ಬಾಗಿಲುಗಳನ್ನು ಬಂದ್‌ ಮಾಡುವಂತೆ ಸ್ಪೀಕರ್‌ ಕಾಗೇರಿ ಅವರು ಸೂಚನೆ ನೀಡಿದರು. ಅದರಂತೆ, ಬಾಗಿಲು ಮುಚ್ಚಿ ಫೋಟೋ ಅನಾವರಣ ಮಾಡಲಾಯಿತು. ಈ ವೇಳೆ ಸಚಿವರಾದ ಜೆ.ಸಿ‌ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಬೈರತಿ ಬಸವರಾಜ್, ಪ್ರಭು ಚೌವ್ಹಾಣ್ ಉಪಸ್ಥಿತರಿದ್ದರು.

ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ: ವೀರ ಸಾವರ್ಕರ್ ಫೋಟೋ ಅಳವಡಿಕೆಯ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ವಿಧಾನಸಭೆಯಲ್ಲಿ ಭಾವಚಿತ್ರಗಳ ಅನಾವರಣವಾಗಲಿದ್ದು, ಕಾಂಗ್ರೆಸ್ ಈ ಬಗ್ಗೆ ಅಪಸ್ವರ ಎತ್ತಿದೆ. ಎಲ್ಲ ಮಹನೀಯರುಗಳ ಭಾವಚಿತ್ರವನ್ನು ಅಳವಡಿಸುವ ಬಗ್ಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪತ್ರದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ವಿಧಾನಸಭೆಯಲ್ಲಿ ಭಾವಚಿತ್ರ ಅನಾವರಣಗೊಳಿಸುವುದು ಸ್ಪೀಕರ್ ರವರ ವಿವೇಚನೆಗೆ ಬಿಟ್ಟಿರುವ ವಿಚಾರ. ವಿರೋಧಪಕ್ಷದ ನಾಯಕರು ಹಾಗೂ ಸ್ಪೀಕರ್ ರೊಂದಿಗೂ ಈ ವಿಚಾರದ ಬಗ್ಗೆ ಮಾತಾನಾಡಲಾಗುವುದು ಎಂದರು.

Belagavi Session: ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೋ: ಕಾಂಗ್ರೆಸ್‌ನಲ್ಲಿ ಮೂಡದ ಒಮ್ಮತ

ಜನರಿಗೆ ಪರಿಹಾರ ಒದಗಿಸುವ ಅಧಿವೇಶನ- ಸಿಎಂ ಬೊಮ್ಮಾಯಿ: ಇಂದಿನಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚಿಸಿ, ಜನರಿಗೆ ಪರಿಹಾರ ಒದಗಿಸುವ ಅಧಿವೇಶನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದು ಸುವರ್ಣ ವಿಧಾನಸೌಧಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯವನ್ನು ಮುನ್ನಡೆಸುವ ದಿಸೆಯಲ್ಲಿ ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ. ಹಲವಾರು ಕಾನೂನುಗಳ ರಚನೆಗಳ ಉದ್ದೇಶದಿಂದ ಕಲಾಪ ನಡೆಸಲಾಗುತ್ತಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಉತ್ತರಿಸಿ, ಸಮುದಾಯಕ್ಕೆ ಮೀಸಲಾತಿ ನೀಡಲು ಯಾವುದೇ ಗಡುವು ನಿಗದಿಪಡಿಸಿಲ್ಲ. ಹಿಂದುಳಿದ ವರ್ಗಗಳ ಆಯೋಗದಿಂದ ಶೀಘ್ರದಲ್ಲಿ ವರದಿ ಬರುವ ವಿಶ್ವಾಸವಿದೆ ಎಂದರು.

ಸಾವರ್ಕರ್‌ ಭಾವಚಿತ್ರ ಅಳವಡಿಸಿದ್ದಕ್ಕೆ ಅಭಿನಂದನೆ: ಸಾವರ್ಕರ್‌ ಫೋಟೋ ಅಳವಡಿಕೆ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೋ ಅನಾವರಣ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ವರ್ಷದ ಪದ್ದತಿಯಂತೆ ಈ ಬಾರಿ ಚಳಿಗಾಲದ ಅಧಿವೇಶನ  ನಡೆಯುತ್ತಿದೆ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಬೇಕು. ದಯವಿಟ್ಟು ಕಾಂಗ್ರೆಸ್‌ನವರು ಯಾವುದೇ ಧರಣಿ, ಪ್ರತಿಭಟನೆ ಮಾಡದೇ ಸುಗಮ ಕಲಾಪಕ್ಕೆ ಸಹಕಾರ ‌ಕೊಡಬೇಕು ಎಂದು ಹೇಳಿದರು.

 

Assembly session: ಅಸೆಂಬ್ಲಿಯಲ್ಲಿಂದು ಸಾವರ್ಕರ್‌ ಚಿತ್ರ ಅನಾವರಣ?

ಸಾವರ್ಕರ್‌ ಒಬ್ಬರದೇ ಫೋಟೋ ಇಲ್ಲ: ಈ ಕುರಿತು ಸಚಿವ ಅಶ್ವಥ್ ನಾರಯಣ್ ಮಾತನಾಡಿ, ಸಾವರ್ಕರ್‌ ಫೋಟೋ ಅಳವಡಿಕೆ ಬಗ್ಗೆ ಸಭಾಪತಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದ್ದಾರೆ. ಅವರ ಭಾವಚಿತ್ರಗಳನ್ನ ಹಾಕಲು ಎಲ್ಲರ ಸಲಹೆ ತೆಗೆದುಕೊಂಡು ಮಾಡುತ್ತೇನೆ ಎಂದು ಕಳೆದ ಬಾರಿಯೇ ಹೇಳಿದ್ದರು. ಕಾಲಕಾಲಕ್ಕೂ ಈ ರೀತಿ ಭಾವಚಿತ್ರಗಳು ಹಾಕಲಾಗುತ್ತದೆ. ಅಸೆಂಬ್ಲಿಯಲ್ಲಿ ಸಾರ್ವಕರ್ ಅವರದ್ದು ಕೊನೆ ಭಾವಚಿತ್ರ ಅಲ್ಲ. ಇದರ ಜೊತೆಗೆ ಬೇರೆಯವರ ಭಾವಚಿತ್ರಗಳನ್ನ ಹಾಕುತ್ತೇವೆ. ಸಾರ್ವಕರ್ ಫೋಟೋಗೆ ವಿರೋಧಿಸಬಾರದು. ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡುವುದು ಖಂಡನೀಯ ಎಂದು ತಿಳಿಸಿದರು.

ಬಿಜೆಪಿ ಅಜೆಂಡಾಗೆ ಹಿನ್ನಡೆ?: ಸಾವರ್ಕರ್‌ ವಿಚಾರವನ್ನು ಕಾಂಗ್ರೆಸ್‌ ಸೈದ್ಧಾಂತಿಕವಾಗಿ ವಿರೋಧ ಮಾಡುತ್ತಾ ಬಂದಿತ್ತು. ಹೀಗಾಗಿ, ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆಯ ಬಗ್ಗೆ ದೊಡ್ಡದಾಗಿ ಕಾಂಗ್ರೆಸ್‌ ನಾಯಕರು ಗಲಾಟೆ ಮಾಡಲಿದ್ದಾರೆ ಎಂದು ಬಿಜೆಪಿ ಚಿಂತನೆ ಮಾಡಿತ್ತು. ಜೊತೆಗೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದರೆ ಬಿಜೆಪಿ ಇದನ್ನೆ ಚುನಾವಣೆಗೆ ಬಳಸಿಕೊಳ್ಳುವ ಚಿಂತನೆಯನ್ನೂ ಮಾಡಿತ್ತು. ಹಿಂದೂ ಮತಗಳನ್ನು ಪಡೆಯಲು ಕಾಂಗ್ರೆಸ್‌ ವಿರೋಧ ಪ್ರಮುಖ ಅಸ್ತ್ರವಾಗಲಿದೆ ಎಂಬ ನಿಲುವು ಬಿಜೆಪಿ ನಾಯಕರದ್ದಾಗಿತ್ತು. ಆದರೆ,  ಸಿದ್ದರಾಮಯ್ಯ ಅವರು ಸಾವರ್ಕರ್‌ ಫೋಟೋ ಅಳವಡಿಕೆ ವಿರೋಧಿಸಿ ನಾವು ಪ್ರತಿಭಟನೆ ಮಾಡಿಲ್ಲ. ಅವರ ಫೋಟೋ ಜೊತೆಗೆ ಇನ್ನೂ ಹಲವು ನಾಯಕರ ಫೋಟೋ ಅಳವಡಿಸುವಂತೆ ನಾವು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಬಿಜೆಪಿ ಇನ್‌ಸೈಡ್‌ ಅಜೆಂಡಾಗೆ ಕೊಂಚ ಹಿನ್ನಡೆ ಉಂಟಾದಂತೆ ಕಾಣುತ್ತಿದೆ.

click me!