Contractor Santosh Patil suicide case: ಈಶ್ವರಪ್ಪ ಖುಲಾಸೆ ಹಾಸ್ಯಾಸ್ಪದ: ಬೇಳೂರು ಗೋಪಾಲಕೃಷ್ಣ ವ್ಯಂಗ್ಯ

By Kannadaprabha NewsFirst Published Jul 24, 2022, 1:21 PM IST
Highlights

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಖುಲಾಸೆ ಆಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವ್ಯಂಗ್ಯ

ಶಿವಮೊಗ್ಗ (ಜು.24): ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಖುಲಾಸೆ ಆಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು. ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪ್ರಕರಣದಲ್ಲಿ ಆರೋಪ ಕೇಳಿ ಬಂದಿರುವ ವ್ಯಕ್ತಿಯ ತನಿಖೆ ಮಾಡದೇ ಬಿ ರಿಪೋರ್ಚ್‌ ಹಾಕಿರುವುದು ವಿಪರಾರ‍ಯಸ. ಈಶ್ವರಪ್ಪ ಪ್ರಕರಣದಿಂದ ಪಾರಾಗುತ್ತಾರೆ ಎಂದು ಮುಖ್ಯಮಂತ್ರಿ ಪದೇ ಪದೇ ಹೇಳಿಕೆ ನೀಡುತ್ತಿದ್ದರು. ಅವರ ಆಶೀರ್ವಾದದಂತೆ ಈಶ್ವರಪ್ಪನವರು ಪ್ರಕರಣದಿಂದ ಬಚಾವಾಗಿದ್ದಾರೆ ಎಂದು ಟೀಕಿಸಿದರು.

ಈಶ್ವರಪ್ಪಗೆ ಕಂಟಕ ತಪ್ಪಿದ್ದಲ್ಲ:

Latest Videos

ಪ್ರಕರಣದಲ್ಲಿ ಪಾರಾಗಿರಬಹುದು, ಆದರೆ ಮೃತ ಸಂತೋಷನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಈಶ್ವರಪ್ಪಗೆ ಇದರ ಕಂಟಕ ತಪ್ಪಿದ್ದಲ್ಲ. ಈ ಆದೇಶದಿಂದ ಮೃತ ಸಂತೋಷ್‌ ಪಾಟೀಲ್‌ ಆತ್ಮಕ್ಕೆ ಶಾಂತಿ ಸಿಗಲ್ಲ. ಆತನ ಕುಟುಂಬದ ಶಾಪ ಇವರಿಗೆ ತಟ್ಟಲಿದೆ ಎಂದು ಹೇಳಿದರು.

Suicide Case: ಈಶ್ವರಪ್ಪ ಅಂಥವರಲ್ಲ.. ಅಂಥವರಲ್ಲ..: ಮಖಣಾಪೂರ ಸ್ವಾಮೀಜಿ

ಶಿವಮೊಗ್ಗದಲ್ಲಿ ಹರ್ಷ ಎಂಬಾತನ ಹತ್ಯೆ ನಡೆದಾಗ ಈಶ್ವರಪ್ಪ ಅದನ್ನು ವಿಜೃಂಭಿಸಿ ಓಟ್‌ ಬ್ಯಾಂಕ್‌ ಮಾಡಿಕೊಂಡರು. ಆದರೆ, ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಾಗ ಆತ ಹಿಂದೂ ಎಂದು ಇವರಿಗೆ ಅರ್ಥವಾಗಲಿಲ್ಲವೇ? ಆತನೂ ಕೂಡ ಬಿಜೆಪಿ ಕಾರ್ಯಕರ್ತನೇ ಆಗಿದ್ದ. ಹೀಗಿದ್ದೂ ಭ್ರಷ್ಟಾಚಾರದ ಆರೋಪ ತಮ್ಮ ಮೇಲೆ ಬರುತ್ತದೆ ಎಂಬ ಒಂದೇ ಕಾರಣಕ್ಕಾಗಿ ಮೃತ ಸಂತೋಷ್‌ ಕುಟುಂಬಕ್ಕೆ ಈಶ್ವರಪ್ಪ ಕನಿಷ್ಠ ಪಕ್ಷ ಸಾಂತ್ವನದ ನುಡಿಗಳನ್ನು ಆಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಂದಿ ಅಣ್ಣಿ ಹಿಂದೂ ಅಲ್ವಾ:

ಹರ್ಷ ಹತ್ಯೆಗೀಡಾದ ಸಂದರ್ಭದಲ್ಲಿ ಬಿಜೆಪಿಯವರು ಓಟ್‌ ಬ್ಯಾಂಕ್‌ ರಾಜಕಾರಣ ಮಾಡಿದರು. ಹಾಗಾದರೆ ಕೊಲೆಯಾದ ಹರ್ಷ ಮಾತ್ರ ಹಿಂದೂನಾ? ಸಂತೋಷ್‌ ಪಾಟೀಲ್‌, ಹಂದಿ ಅಣ್ಣಿ ಹಿಂದೂಗಳಲ್ವಾ ? ಹರ್ಷನ ಕುಟುಂಬಕ್ಕೆ ನೀಡಿದ್ದ ಪರಿಹಾರವನ್ನು ಇವರ ಕುಟುಂಬಗಳಿಗೂ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದಲ್ಲಿ ಈಗಲೂ ಶೇ.40 ಪರ್ಸೆಂಟ್‌ ಕಮಿಷನ್‌ ವಾಸನೆ ಬರುತ್ತಿದೆ. ಹೀಗಿರುವಾಗ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಸವನಗೌಡ ಪಾಟೀಲ್‌ ಯತ್ನಾಳ್‌, ರೇಣುಕಾಚಾರ್ಯ ಮೊದಲಾದವರು ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಾರೆ. ಅವರ ವಿರುದ್ಧ ವಾಗ್ದಾಳಿ ನಡೆಸಲಿ ಎಂದು ಸವಾಲು ಹಾಕಿದರು.

ಬಿಎಸ್‌ವೈ ಕಡೆಗಣನೆ:

ಬಿಜೆಪಿಯನ್ನು ಕಟ್ಟಿಬೆಳೆಸಿದ ಭೀಷ್ಮ ಯಡಿಯೂರಪ್ಪರನ್ನೇ ರಾಜಕೀಯದಿಂದ ನಿವೃತ್ತಿಗೊಳಿಸುವ ಹುನ್ನಾರ ಅವರ ಪಕ್ಷದಿಂದಲೇ ನಡೆದಿದೆ. ಸಿ.ಟಿ.ರವಿ, ಬಿ.ಎಲ್‌.ಸಂತೋಷ್‌, ಪ್ರಹ್ಲಾದ್‌ ಜೋಶಿ ಮುಂತಾದವರು ಸೇರಿಕೊಂಡು ಯಡಿಯೂರಪ್ಪನವರನ್ನು ಕಡೆಗಾಣಿಸಿದ್ದಾರೆ. ಪಾಪ ಅವರು ಕಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಪದವಿ ತ್ಯಜಿಸಬೇಕಾಗಿ ಬಂತು. ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯಲ್ಲಿ ಒಂದಿಷ್ಟುಅಭಿವೃದ್ಧಿಯಾದರೂ ಆಗಿತ್ತು. ಈಶ್ವರಪ್ಪ ಕೇಸರಿ ಶಾಲು ಹಾಕಿಕೊಂಡು ದೇವಸ್ಥಾನ ಸುತ್ತಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಯಡಿಯೂರಪ್ಪನವರ ಶಾಪ ಈಶ್ವರಪ್ಪ ಕುಟುಂಬವನ್ನು ತಟ್ಟದೆ ಬಿಡುವುದಿಲ್ಲ ಎಂದರು.

MLC Election Karnataka : ಈಶ್ವರಪ್ಪ, ಹಾಲಪ್ಪ ಸಮ್ಮುಖ BJP ಸೇರ್ಪಡೆ : ಸಂಜೆ ಗೋಪಾಲಕೃಷ್ಣ ಸಮ್ಮುಖ ಮರಳಿ ಕೈಗೆ

ಇದೇನಾ ಅಚ್ಛೇದಿನ್‌?:

ಇದುವರೆಗೂ ಅತಿವೃಷ್ಟಿಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ಜನರ ಪರವಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ದೇಶದ ಪ್ರತಿ ಕುಟುಂಬಕ್ಕೂ ಅಡುಗೆ ಅನಿಲ ಸಂಪರ್ಕ ಕೊಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಗಗನಕ್ಕೆ ಏರಿಸಿದ್ದಾರೆ. ಜನರು ಮತ್ತೆ ಸೌದೆ ಬಳಸುವಂತಾಗಿದೆ. ಪ್ರತಿನಿತ್ಯ ಬಳಕೆ ಮಾಡುವ ಅಕ್ಕಿ, ಮೊಸರು ಇವುಗಳಿಗೆಲ್ಲಾ ಜಿಎಸ್‌ಟಿ ಹಾಕಿದ್ದಾರೆ. ಸರ್ಕಾರಕ್ಕೆ ಏನು ಬಂದಿದೆ ನೀವೇ ಹೇಳಿ. ಇದೇ ಏನು ಬಿಜೆಪಿಯವರ ಅಚ್ಚೇ ದಿನ್‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾ ವಕ್ತಾರ ರಮೇಶ್‌ ಶಂಕರಘಟ್ಟ, ಕಾಂಗ್ರೆಸ್‌ ಮುಖಂಡ ವೈ.ಹೆಚ್‌. ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಕೊಲೆಗಡುಕರ ಜಿಲ್ಲೆಯಾಗಿದೆ:

ಇತ್ತೀಚಿನ ದಿನದಲ್ಲಿ ಶಿವಮೊಗ್ಗ ಜಿಲ್ಲೆ ಕೊಲೆಗಡುಕರ ಜಿಲ್ಲೆಯಾಗಿದೆ. ಹಾಡಹಗಲೇ ಪೊಲೀಸ್‌ ಠಾಣೆ ಮುಂದೆಯೇ ಕೊಲೆಯಾಗುತ್ತದೆ. ಇದಕ್ಕೆ ಈಶ್ವರಪ್ಪ ನೇರ ಕಾರಣವಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಸಂಪೂರ್ಣವಾಗಿ ಸೋತಿದ್ದಾರೆ. ಪೊಲೀಸ್‌ ಠಾಣೆಗಳು ಕೂಡ ಬಿಜೆಪಿ ಕಚೇರಿಯಂತಾಗಿವೆ. ಹತ್ಯೆ, ಗಾಂಜಾ ಮಾರಾಟ, ಕಳ್ಳತನ, ದರೋಡೆ, ಅಕ್ರಮ ಮರಳು ದಂಧೆ ಮುಂತಾದ ಅಪರಾಧ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಪೊಲೀಸ್‌ ಇಲಾಖೆ ಜೊತೆಗೆ ಜಿಲ್ಲಾಡಳಿತವೂ ವಿಫಲವಾಗಿದೆ. ಹಾಡಹಗಲೇ ಹರ್ಷ, ಹಂದಿ ಅಣ್ಣಿ ಹತ್ಯೆ ನಡೆದಿದೆ. ಹಾಗಾದರೆ ಶಿವಮೊಗ್ಗದಲ್ಲಿ ಶಾಂತಿ ಎಲ್ಲಿದೆ? ಹರ್ಷನ ರೀತಿಯಲ್ಲಿ ಹಂದಿ ಅಣ್ಣಿ, ಗುರೂಜಿ ಹತ್ಯೆ ನಡೆಯಿತು. ಇದರಲ್ಲೇನಾದರೂ ಅಪ್ಪಿತಪ್ಪಿ ಮುಸಲ್ಮಾನರ ಪಾತ್ರವಿದ್ದಿದ್ದರೆ ಶಿವಮೊಗ್ಗದಲ್ಲಿ ಮತ್ತೆ ಬೆಂಕಿ ಹತ್ತಿ ಉರಿಯುವಂತೆ ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಮುಸಲ್ಮಾನರು ಒಬ್ಬ ಹಿಂದುವಿನ ಹತ್ಯೆ ಮಾಡಿದರೆ, ಮತ್ತೊಬ್ಬರ ಹತ್ಯೆ ಮಾಡೋಣ ಎಂದು ಈಶ್ವರಪ್ಪ ಪ್ರತಿಕಾರದ ಹೇಳಿಕೆ ಕೊಡುತ್ತಾರೆ. ಇದೇ ಏನು ಇವರ ಕೆಲಸ? ಹರ್ಷನ ಹತ್ಯೆ ಪ್ರಕರಣದಲ್ಲಿ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಎಂದು ಆತನ ಸಹೋದರಿಯೇ ಆರೋಪ ಮಾಡಿದ್ದಾರೆ. ಮತ್ತೆಲ್ಲಿದೆ ಇವರ ಸರ್ಕಾರದ ನೀತಿ ನಿಯಮ ಎಂದು ಪ್ರಶ್ನಿಸಿದರು.

click me!