
ಬೀದರ್ (ಜು.2) ದೇಶವನ್ನು ಅಸ್ಥಿರಗೊಳಿಸಲು 18 ರಾಜಕೀಯ ಪಕ್ಷಗಳು ಕೂಡಿಕೊಂಡು ಹುನ್ನಾರ ನಡೆಸುತ್ತಿರುವುದಲ್ಲದೆ ಕೀಳು ಮಟ್ಟದ ಯೋಚನೆ ಇಟ್ಟುಕೊಂಡಿದ್ದಾರೆ, ಅಂತಹವರಿಗೆ ಅವಕಾಶ ನೀಡಬಾರದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕರೆ ನೀಡಿದರು.
ಅವರು ಶನಿವಾರ ನಗರದ ಎಸ್ಆರ್ಎಸ್ ಫಂಕ್ಷನ್ ಹಾಲ್ನಲ್ಲಿ ಸಂಪರ್ಕ್ ಸೇ ಸಮರ್ಥನ್(Sampark Se Samarthan) ಎಂಬ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿ, ವಿವಿಧ ಪಕ್ಷಗಳು ಮೋದಿ ವಿರುದ್ಧ ತಂತ್ರ ರೂಪಿಸುತ್ತಿದ್ದು, ಮೋದಿ ಹಠಾವೋ ಎಂದು ಒಂದು ವೇದಿಕೆಗೆ ಬರುತ್ತಿದ್ದಾರೆ. ಸಮಾಜ ಒಡೆಯುವ ರಾಜಕೀಯ ಮಾಡುವವರಿಗೆ ಅವರನ್ನೇ ಹಟಾವೋ ಮಾಡುವ ಶಕ್ತಿಯನ್ನು ದೇಶದ ಮಹಿಳೆಯರು ಪ್ರದರ್ಶಿಸುವ ಅವಶ್ಯಕತೆ ಇದೆ ಎಂದರು.
ಮೋದಿ ನೇತೃತ್ವದಲ್ಲಿ ಕೇಂದ್ರ ಮಂತ್ರಿ ಮಂಡಲ ಸಭೆ: ಬಿ.ವೈ. ರಾಘವೇಂದ್ರಗೆ ಒಲಿಯಲಿದೆಯಾ ಮಂತ್ರಿ ಪಟ್ಟ ?
ಕಳೆದ 9 ವರ್ಷಗಳಿಂದ ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡಿ, ಮಹಿಳೆಯರನ್ನು ಕೇಂದ್ರಿಕರಿಸಿಯೇ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ದುಷ್ಟಶಕ್ತಿಗಳು ನನ್ನನ್ನು ನಾಶ ಮಾಡಲು ಪ್ರಯತ್ನಿಸಿದ್ದರೂ ದೇಶದ ಸಹೋದರಿಯರ ಆಶೀರ್ವಾದ ನನ್ನ ಬೆನ್ನಿಗೆ ಇದೆ ಎಂದು ಹೇಳುತ್ತಾರೆ.
ದೇಶದಲ್ಲಿ ಮಹಿಳಾ ಶಕ್ತಿಯ ಪರಿಣಾಮ ಇಡೀ ವಿಶ್ವವೇ ನೋಡುತ್ತಿದ್ದು, ಮಹಿಳೆಯರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಮಾತೃ ಯೋಜನೆಯಡಿ 5 ಸಾವಿರ ರು. ನೀಡಲಾಗುತ್ತಿದೆ. ದೇಶದ ಪ್ರತಿ ಮನೆಗೆ ಶೌಚಾಲಯ ನಿರ್ಮಿಸುವ ಮೂಲಕ ಮಹಿಳೆಯರಿಗೆ ಗೌರವ ತಂದುಕೊಟ್ಟಿದ್ದಾರೆ ಎಂದರು.
ಪ್ರತಿ ಮನೆಗೆ ಜಲ ಜೀವನ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಡ ಜನರಿಗೆ ಉಚಿತ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ 68 ಸಾವಿರ ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿಯವರೆಗೆ 500 ಕೋಟಿಗೂ ಹೆಚ್ಚು ಹಣ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ಬಂದಿದೆ. ಹೀಗೆ ಅನೇಕ ಯೋಜನೆಗಳಿಂದ ಜನರಿಗೆ ಲಾಭವಾಗಿದೆ ಎಂದು ವಿವರಿಸಿದು.
ದೇಶದಲ್ಲಿ ಸುಮಾರು 81 ಕೋಟಿ ಜನರು ಒಂದಿಲ್ಲ ಒಂದು ಯೋಜನೆಯ ಲಾಭ ಪಡೆದಿದ್ದಾರೆ. ಹೀಗಾಗಿ ಈ ಸರ್ಕಾರಕ್ಕೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು, ದೇಶದ ಭವಿಷ್ಯ ನಿರ್ಮಾಣದ ಚಿಂತನೆ ಮಾಡುವ ನರೇಂದ್ರ ಮೋದಿ ಅವರಿಗೆ ಅವಕಾಶ ನೀಡುವ ಅಗತ್ಯತೆ ಇದೆ ಎಂದರು.
ಇದಕ್ಕೂ ಮುನ್ನ ಪಕ್ಷದ ವಿಭಾಗೀಯ ಸಂಚಾಲಕ ಈಶ್ವರಸಿಂಗ್ ಠಾಕೂರ ಮಾತನಾಡಿ, ಕಾಂಗ್ರೆಸ್ನವರ ಸುಳ್ಳು ಗ್ಯಾರಂಟಿ ಯೋಜನೆಗೆ ಮರುಳಾಗಬೇಡಿ, ಅವರು ಹೇಳೊದೊಂದು ಮಾಡೋದೊಂದು. ನಮ್ಮ ಕೇಂದ್ರ ಸರ್ಕಾರ ದೇಶದ 140 ಕೋಟಿ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಹೀಗಾಗಿ ಬರುವ ದಿನಗಳಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರಿಗೆ ಅಧಿಕಾರ ನೀಡುವ ಮೂಲಕ ಫಲಾನುಭವಿಗಳು ಕೇಂದ್ರದ ಯೋಜನೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕೆಂದರು.
ದಂಗೆ ಹತ್ತಿಕ್ಕಿದ ಕ್ರಮಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ಗೆ ಪ್ರಧಾನಿ ಮೋದಿ ಮೆಚ್ಚುಗೆ
ಪಕ್ಷದ ಜಿಲ್ಲಾಧ್ಯಕ್ಷ ಶಿವನಾಂದ ಮಂಠಾಳಕರ ಮಾತನಾಡಿ, ದೇಶದ ಜನರ ಅಭಿವೃದ್ಧಿಗಾಗಿ ಮೋದಿ ಅವರು ಸಂಕಲ್ಪ ಮಾಡಿದ್ದಾರೆ. ಎಲ್ಲ ವರ್ಗದ ಜನರು ಮತ್ತೊಮ್ಮೆ ಮೋದಿ ಎಂಬ ಘೋಷವಾಕ್ಯದೊಂದಿಗೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಜ್ ಕಮಿಟಿ ಅಧ್ಯಕ್ಷ ರೌಫೋದ್ದಿನ್ ಕಚೇರಿವಾಲೆ, ಪಕ್ಷದ ಪ್ರಮುಖರಾದ ರಾಜಶೇಖರ ನಾಗಮೂರ್ತಿ, ವಿಜಯಕುಮಾರ ಪಾಟೀಲ್ ಗಾದಗಿ, ಅರಹಂತ ಸಾವಳೆ, ಲುಂಬಣಿ ಗೌತಮ, ನಗರ ಅಧ್ಯಕ್ಷ ಶಶಿಧರ ಹೊಸಳ್ಳಿ, ವೀರು ದಿಗ್ವಾಲ್, ಶ್ರೀಕಾಂತ ಮೋದಿ, ಅಣ್ಣಾರಾವ್, ರಾಜು ಪಾಟೀಲ್, ರಾಜೇಂದ್ರ ಪೂಜಾರಿ ಹಾಗೂ ಸಮಾವೇಶದಲ್ಲಿ ಮಹಿಳಾ ಫಲಾನುಭವಿಗಳು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.