
ಹೊನ್ನಾವರ (ಏ.12): ನಿಷ್ಠಾವಂತ ಕಾರ್ಯಕರ್ತರ ತ್ಯಾಗ, ಬಲಿದಾನದಿಂದ ಬಿಜೆಪಿ ಬೆಳೆದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸೈನಿಕರಿಗೆ ಸ್ಥೈರ್ಯವನ್ನು ತುಂಬುವ ಮೂಲಕ ದೇಶದ ಭದ್ರತೆಗೆ ಒತ್ತು ನೀಡಿದ್ದಾರೆ ಎಂದು ಬಿಜೆಪಿ ಉತ್ತರಕನ್ನಡ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಬಿಜೆಪಿ ಹೊನ್ನಾವರ ಮಂಡಳದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೊಸ ಸಂಸತ್ ಭವನ, ಮಹಿಳೆಯರಿಗೆ ಮೀಸಲಾತಿ, ಉಜ್ವಲ ಗ್ಯಾಸ್, ಆಯುಷ್ಮಾನ ಭಾರತ, ಕಿಸಾನ್ ಸಮ್ಮಾನ್, ಜನೌಷಧಿ ಕೇಂದ್ರ ಸ್ಥಾಪನೆ ಮುಂತಾದ ಹಲವು ಯೋಜನೆಗಳ ಮೂಲಕ ಮೋದಿಯವರು ದೇಶದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಮಾತನಾಡಿ, ಉತ್ತಮ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕು. ಆ ಮೂಲಕ ದೇಶದ ಭದ್ರತೆಗೆ ಕೊಡುಗೆಯನ್ನು ನೀಡಬೇಕು ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಳೆದ ೧೦ ವರ್ಷಗಳಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು, ಮೋದಿ ಅವರು ವಿಶ್ವನಾಯಕ ಎನಿಸಿಕೊಂಡಿದ್ದಾರೆ. ಅತ್ಯಂತ ಪ್ರಾಮಾಣಿಕ, ಸರಳ, ಸಜ್ಜನಿಕೆಯ ರಾಜಕಾರಣಿ ವಿಶ್ವೇಶ್ವರ ಹೆಗಡೆ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೀರೀಟಕ್ಕೆ ನಮ್ಮ ಜಿಲ್ಲೆಯಿಂದ ಒಂದು ಗರಿಯನ್ನು ನೀಡೋಣ ಎಂದರು.
ದೇಶಕ್ಕಿಂತ ಕಾಂಗ್ರೆಸ್ಸಿಗರು ಅಭಿವೃದ್ಧಿಯಾಗಿದ್ದೆ ಹೆಚ್ಚು: ಮಾಜಿ ಸಚಿವ ಹಾಲಪ್ಪ ಆಚಾರ್
ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ್ ನಾಯ್ಕ, ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ, ಗಣಪತಿ ಬಿ.ಟಿ., ಎಂ.ಜಿ. ನಾಯ್ಕ, ಕೆ.ಜಿ. ನಾಯ್ಕ ಅಣಜಿಬೈಲ್, ಗೋವಿಂದ ನಾಯ್ಕ, ಈಶ್ವರ ನಾಯ್ಕ, ರಾಜೇಶ ಭಂಡಾರಿ, ಶಿವಾನಂದ ಹೆಗಡೆ, ದೀಪಕ ನಾಯ್ಕ, ಜಿ.ಜಿ. ಶಂಕರ, ಜಿ.ಜಿ. ಭಟ್ಟ, ವೆಂಕಟೇಶ ನಾಯಕ, ಜೆಡಿಎಸ್ ಮುಖಂಡರಾದ ಟಿ.ಟಿ. ನಾಯ್ಕ ಮೂಡ್ಕಣಿ, ಪಿ.ಎಸ್. ಭಟ್ ಉಪ್ಪೋಣಿ ಇತರರಿದ್ದರು. ಮಂಡಲದ ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.