
ಬೆಂಗಳೂರು (ಮೇ 19): ರಾಜ್ಯದ 2023ರ ಹೊಸ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಸ್ಪೀಕರ್ (ವಿಧಾನಸಭಾ ಅಧ್ಯಕ್ಷ) ಆಗುವ ಸರ್ಹತೆ ಇಲ್ಲವೆಂದು ಅನಿಸುತ್ತದೆ ಎಂದು ಸ್ವತಃ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದು, ಪ್ರಮಾಣವಚನ ಸ್ವೀಕಾರ ಮಾತ್ರ ಬಾಕಿಯಿದೆ. ಆದರೆ, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಯಾರ ಬಳಿಯೂ ಸ್ಪಷ್ಟ ಉತ್ತರಗಳಿಲ್ಲ. ಸಚಿವ ಸಂಪುಟದಲ್ಲಿ ನಾನು ಇರುವ ಬಗ್ಗೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ರಾಜ್ಯದ ಸಚಿವ ಸಂಪುಟದಿಂದ ಹಿರಿಯರನ್ನು ಕೈ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಗೋನಾಲದ ಗಡೇ ದುರ್ಗಾದೇವಿ ಭವಿಷ್ಯ: 9 ಮಂದಿ ಹಿಂದಿಕ್ಕಿ ಡಿ.ಕೆ.ಶಿವಕುಮಾರ್ ಶೀಘ್ರ ಸಿಎಂ ಆಗ್ತಾರೆ
ಸ್ಪೀಕರ್ ಆಗುವ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ: ಈಗಾಗಲೇ ರಾಜ್ಯದಲ್ಲಿ ನಾನು 8 ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಈ ಬಾರಿ ಏನು ಮಾಡುತ್ತಾರೆ, ಏನು ಇಲ್ಲ ಅನ್ನೋದು ಅವರಿಗೆ ಬಿಟ್ಟ ವಿಚಾರವಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಸ್ಪೀಕರ್ ಆಗುವ ಅರ್ಹತೆ ನನಗೆ ಇಲ್ಲವೆಂದು ಅನಿಸುತ್ತದೆ. ಅದು ಬಹಳ ದೊಡ್ಡ ಹುದ್ದೆಯಾಗಿದ್ದು, ಸರ್ಕಾರದಲ್ಲಿಯೇ ಅತ್ಯಂತ ಜವಾಬ್ದಾರಿ ಹುದ್ದೆಯಾಗಿದೆ. ಇದರ ಬಗ್ಗೆ ನನ್ನ ಜೊತೆ ಯಾರು ಚರ್ಚೆಯೂ ಮಾಡಿಲ್ಲ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮಾಧ್ಯಮಗಳಿಗೆ ನವದೆಹಲಿಯಲ್ಲಿ ಮಾಹಿತಿ ನೀಡಿದರು.
ಯಾರ ಬಣಕ್ಕೆ ಹೆಚ್ಚು ಸಚಿವ ಸ್ಥಾನ ಸಿಗಲಿದೆ:
ಸಚಿವ ಸಂಪುಟದಲ್ಲಿ ಯಾವ ಬಣಕ್ಕೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ. ನೂತನ ಸಚಿವ ಸಂಪುಟ ರಚನೆಯಲ್ಲೂ ಸಂಧಾನ ಸೂತ್ರ ಬಳಕೆಯಾಗುತ್ತಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಕ್ಯಾಬಿನೇಟ್ ಲಿಸ್ಟ್ ಫೈನಲ್ ಮಾಡೋಕೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು ನಡೆಸಿದೆ. ಕ್ಯಾಬಿನೇಟ್ನಲ್ಲಿ ಸ್ಥಾನ ಪಡೆಯಲು ಶಾಸಕರಿಂದ ಭಾರೀ ಲಾಬಿ ನಡೆಯುತ್ತಿದೆ. ಸಚಿವ ಸಂಪುಟ ರಚನೆಯಲ್ಲೂ ಸಿದ್ದು, ಡಿಕೆಶಿ ಮಧ್ಯೆ ಪೈಪೋಟೆ ನಡೆಯುತ್ತಿದೆಯಾ?. ಬೆಂಬಲಿಗರಿಗೆ ಮಂತ್ರಿಗಿರಿ ಕೊಡಿಸಲು ಉಭಯ ನಾಯಕರು ಪಟ್ಟು ಹಿಡಿಯುತ್ತಾರಾ ಎಂಬುದಕ್ಕೆ ಸಧ್ಯದಲ್ಲೇ ಉತ್ತರ ಸಿಗಲಿದೆ.
ನೂತನ ಸಚಿವ ಸ್ಥಾನಕ್ಕೆ ಭರ್ಜರಿ ಲಾಬಿ: ರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿರುವ ಹಲವು ಶಾಸಕರು ಇದೀಗ ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಡಾ.ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ ಸೇರಿದಂತೆ ವಿವಿಧ ಶಾಸಕರು ಗುರುವಾರ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಸ್ಥಾನದ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
GOVT FORMATION IN KARNATAKA: ಯಾರಾರಿಗೆ ಸಿಗಲಿದೆ ಸಚಿವಗಿರಿ? ಸೋತರೂ ಶೆಟ್ಟರ್ ಕೈ ಹಿಡಿಯಲಿದೆ ಲಕ್!
ಉಪಮುಖ್ಯಮಂತ್ರಿ ಒಬ್ಬರೇ ಎನ್ನುವುದು ಸೂಕ್ತವಲ್ಲ: ಡಾ.ಜಿ. ಪರಮೇಶ್ವರ್, ಮುಖ್ಯಮಂತ್ರಿ ಯಾರಾಗಬೇಕೆಂಬ ತೀರ್ಮಾನದಿಂದ ಮೂರು ದಿನಗಳಿಂದ ಇದ್ದ ಗೊಂದಲ ಬಗೆಹರಿದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಅಭಿನಂದಿಸುತ್ತೇನೆ. ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದು, ಬೇಗ ಕಾಂಗ್ರೆಸ್ ಸರ್ಕಾರ ರಚಿಸಿ ಆಡಳಿತ ಪ್ರಾರಂಭಿಸಬೇಕು ಎಂದರು. ಸರ್ಕಾರದಲ್ಲಿ ಒಂದೇ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೀರ್ಮಾನ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೋ ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕೆನ್ನುವುದು ಸೂಕ್ತವಲ್ಲ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕಾಗುತ್ತದೆ. ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಆಗಿದ್ದೆ. ಆದರೆ, ನಮ್ಮ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಮುಂದಿನ ದಿನಗಳಲ್ಲಿ ಏನು ಮಾಡುತ್ತಾರೆ ನೋಡೋಣ. ಸಚಿವ ಸಂಪುಟ ವಿಸ್ತರಣೆಯಲ್ಲಿ ನ್ಯಾಯ ಹೇಗೆ ಕೊಡ್ತಾರೆ ನೋಡೋಣ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿ. ಹೈಕಮಾಂಡ್ನವರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.