
ಬೆಂಗಳೂರು(ಜ.16): ರಾಜ್ಯ ಕಾಂಗ್ರೆಸ್’ಗೆ ಕಾಯಕಲ್ಪ ನೀಡಲು ಕೊನೆಗೂ ಹೈಕಮಾಂಡ್ ಮುಂದಾಗಿದೆ. ಶೀಘ್ರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗಬೇಕು ಎಂಬ ಕೈ ಹಿರಿಯ ನಾಯಕರ ಒತ್ತಾಯದ ಮೇರೆಗೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿದ್ದು, ಅಧಿಕೃತ ಘೊಷಣೆಯೊಂದೇ ಬಾಕಿ ಇದೆ.
ಸಿದ್ದರಾಮಯ್ಯ ಆ್ಯಂಡ್ ಟೀಂ ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೆ ಎಷ್ಟೇ ಎಡತಾಕಿದ್ರೂ ಫಲ ಸಿಕ್ಕಿಲ್ಲ. ಎಂ.ಬಿ ಪಾಟೀಲ್’ಗೆ ಮಣೆ ಹಾಕಿ ಎಂಬ ಮಾಜಿ ಸಿಎಂ ಪಟ್ಟು ಫಲ ನೀಡಿಲ್ಲ.
ಡಿಕೆಶಿಗೆ ಕೆಪಿಸಿಸಿ ಗಾದಿ: ಸಿದ್ದು ಕೋಪ ಶಮನಕ್ಕೂ ಇದೆ ಹಾದಿ!
ನಿರೀಕ್ಷೆಯಂತೆಯೇ ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಚುಕ್ಕಾಣಿ ನೀಡಲು ಹೈಕಮಾಂಡ್ ನಿರ್ಧರಿಸಿದ್ದು, ನಾಳೆ(ಜ.17) ಘೋಷಣೆಯಾಗುವ ಸಾಧ್ಯತೆ ಇದೆ.
ಡಿಕೆಶಿಗೆ ಮಣೆ ಹಾಕಿದ್ದು ಯಾಕೆ?:
ಹೈಕಮಾಂಡ್ ಡಿಕೆಶಿಗೆ ಯಾಕೆ ಮಣೆ ಹಾಕಿದರು ಅಂತ ನೋಡುವುದಾದರೆ, ಡಿ.ಕೆ ಶಿವಕುಮಾರ್ ಪರ ಮಿಸ್ತ್ರಿ ಸೇರಿದಂತೆ ಎಐಸಿಸಿ ನಾಯಕರು ಬ್ಯಾಟ್ ಬೀಸಿದ್ದರು. ಜೊತೆಗೆ ಇತ್ತೀಚೆಗೆ ಸಾಂಪ್ರದಾಯಿಕ ಒಕ್ಕಲಿಗ ಮತಗಳು ಜೆಡಿಎಸ್ ಪಾಲಾಗುತ್ತಿವೆ.
ಅದನ್ನು ತಡೆದು ಒಕ್ಕಲಿಗರ ಮತಗಳನ್ನು ಕಾಂಗ್ರೆಸ್’ನಲ್ಲೇ ಉಳಿಯುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಹಿಡಿತ ಸಾಧಿಸಲು ಹವಣಿಸ್ತಿದೆ. ಕೇಸರಿ ಬಳಗದ ಕನಸಿಗೆ ಕೊಳ್ಳಿ ಇಟ್ಟು, ಕಾಂಗ್ರೆಸ್’ನ್ನು ಬಲಪಡಿಸಲು ಡಿಕೆಶಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತಿದೆ ಹೈಕಮಾಂಡ್.
ಹೈಕಮಾಂಡ್ ಎದುರು ಲಿಂಗಾಯತ ಲೀಡರ್’ಶಿಪ್ ವಾದ ಮಂಡಿಸಿದ್ದ ಸಿದ್ದರಾಮಯ್ಯ, ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಡಿಕೆಶಿಗೆ ಮಣೆ ಹಾಕೋದೇ ಆದರೆ, ನಾಲ್ವರು ಕಾರ್ಯಾಧ್ಯಕ್ಷರನ್ನಾದರೂ ನೇಮಿಸಲು ಸಿದ್ದು ಟೀಂ ಪ್ಲಾನ್ ಮಾಡಿತ್ತು.
ಮಾಜಿ ಸಿಎಂ ತಂತ್ರ ಸಕ್ಸಸ್ ಆದ್ರೆ, ಈಶ್ವರ್ ಖಂಡ್ರೆ ಸ್ಥಾನ ಉಳಿಯಲಿದೆ. ವಾಲ್ಮೀಕಿ ಸಮುದಾಯದ ಸತೀಶ್ ಜಾರಕಿಹೊಳಿಗೂ ಅದೃಷ್ಟ ಒಲಿಯಬಹುದು.
ಇಕ್ಕಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್: ಪಾರಾಗಲು ಸಿದ್ದರಾಮಯ್ಯ ಕೊಟ್ರು 2 ಪ್ಲಾನ್!
ಡಿಕೆಶಿಯನ್ನು KPCC ಅಧ್ಯಕ್ಷ ಪಟ್ಟದ ಮೇಲೆ ಕೂರಿಸಿ, ವಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯರನ್ನ ಮುಂದುವರಿಸುವ ಪ್ಲಾನ್ ಹೈಕಮಾಂಡ್ನದ್ದು. ಆದರೆ, ನಾಲ್ವರು ಕಾರ್ಯಾಧ್ಯಕ್ಷರನ್ನ ನೇಮಿಸಿ ಡಿಕೆಶಿಯನ್ನು ಕಟ್ಟಿ ಹಾಕಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.