BJP Meeting: ಸಚಿವ ಸ್ಥಾನ ಬಿಡಲು ಸಿದ್ದ, ಬಿಜೆಪಿ ಹಿರಿಯ ನಾಯಕನ ಬಾಯಿಂದಲೇ ಅಚ್ಚರಿ ಹೇಳಿಕೆ

By Suvarna NewsFirst Published Dec 29, 2021, 2:40 PM IST
Highlights

* ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ
* ಈ ಸಭೆ ಮಧ್ಯೆ ಸಚಿವ ಸ್ಥಾನ ತೊರೆಯಲು ಸಿದ್ಧ ಎಂದ ನಾಯಕ
* ಹುಬ್ಬಳ್ಳಿಯಲ್ಲಿ ಹಿರಿಯ ಸಚಿವ ಅಚ್ಚರಿ ಹೇಳಿಕೆ

ಹುಬ್ಬಳ್ಳಿ, (ಡಿ.29): ಸಚಿವ ಸ್ಥಾನ ಧಾರಾಳವಾಗಿ ಬಿಟ್ಟು, ಪಕ್ಷದ ಸಂಘಟನೆಗಾಗಿ ದುಡಿಯಲು ಸಿದ್ದನಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

 ಹುಬ್ಬಳ್ಳಿಯಲ್ಲಿ ಇಂದು(ಬುಧವಾರ) ಸುದ್ದಿಗಾರರ ಜೊತೆ ಮಾತನಾಡಿ ಇಶ್ವರಪ್ಪ, ಸಂಪುಟದಲ್ಲಿ ಹಿರಿಯರನ್ನ ಕೈಬಿಡಬೇಕೆಂದು ರೇಣುಕಾಚಾರ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

ಸಂಪುಟದಿಂದ ನನ್ನನ್ನು ಕೈ ಬಿಡುವುದಿದ್ದರೆ ನಾನು ಸಹ ತಯಾರಿದ್ದೇನೆ. ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಅಧಿಕಾರ ಎಷ್ಟರ ಮಟ್ಟಿಗೆ ಒಳ್ಳೆಯದು ಹಾಗೂ ಕೆಟ್ಟದು ಎನ್ನುವುದು ನನಗೆ ಗೊತ್ತು ಎಂದು ಸ್ಪಷ್ಟಪಡಿಸಿದರು.

BJP Meeting: ಬಿಜೆಪಿ ಕಾರ್ಯಕಾರಣಿ ಸಭೆ ಮಾಹಿತಿ ಬಿಚ್ಚಿಟ್ಟ ಯತ್ನಾಳ್, ಬೊಮ್ಮಾಯಿ ಸೇಫ್...!

ಕಾರ್ಯಕಾರಿಣಿಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಿವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಬಹಳ ದೊಡ್ಡ ಗೆಲುವಾಗಿದೆ. ಇದಕ್ಕಾಗಿ ರಾಜ್ಯದ ಜನರಿಗೆ ವಿಶೇಷ ಅಭಿನಂದನೆ ಸಲ್ಲಿಸಬೇಕು. ಸಿಂದಗಿ ಉಪ ಚುನಾವಣೆ ಅತಿ ಹೆಚ್ಚು ಮತಗಳನ್ನು ಕೊಟ್ಟಿದ್ದಕ್ಕೆ ಜನರಿಗೆ ಧನ್ಯವಾದಗಳು ಎಂದರು.

ಜ. 5 ರಂದು ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಲ್ಲಿ ನಾವು ಮುಂದಿನ ಚುನಾವಣೆಗಳ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.

ರೇಣುಕಾಚಾರ್ಯ ಹೇಳಿದ್ದೇನು?
ಹಿರಿಯ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸಬರಿಗೆ ಅವಕಾಶ ಮಾಡಿಕೊಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ( MP Renukacharya ) ಅವರು, ರಾಜ್ಯದ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿರುವಂತ ಹಿರಿಯ ಸಚಿವರು ರಾಜೀನಾಮೆ ನೀಡಬೇಕು. ನನಗೆ ಸಚಿವ ಸ್ಥಾನ ಸಿಗಲಿ ಎನ್ನುವ ಕಾರಣಕ್ಕಾಗಿ ಹೇಳುತ್ತಿಲ್ಲ. ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕೇಳುತ್ತಾ ಇದ್ದೇನೆ. ಆ ನಿಟ್ಟಿನಲ್ಲಿ ನಿರ್ಧಾರವನ್ನು ಕೈಗೊಳ್ಳಬೇಕು ಎಂದಿದ್ದರು.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಶ್ರೀ & ಮುಖ್ಯಮಂತ್ರಿ ಶ್ರೀ ಅವರ ಉಪಸ್ಥಿತಿಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಅವರು ಪರಿಷತ್‌ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಸದಸ್ಯರನ್ನು ಸನ್ಮಾನಿಸಿ, ಅಭಿನಂದಿಸಿದರು. pic.twitter.com/TV8de9RdyK

— BJP Karnataka (@BJP4Karnataka)

ಸಂಪುಟ ವಿಸ್ತರಣೆ ಸಾಧ್ಯತೆ?
ಸಂಕ್ರಾಂತಿಯ ಆಸುಪಾಸಿನಲ್ಲಿ ಸಚಿವ ಸಂಪುಟ ವಿಸ್ತರಣೆ/ಪುನರ್ ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ. ಅಲ್ಲದೇ ಕೆಲವರನ್ನ ಕೈಬಿಡಬೇಕೆನ್ನುವ ಎನ್ನುವ ಚರ್ಚೆಗಳು ನಡೆದಿವೆ.

ಸದ್ಯ ಖಾಲಿ ಇರುವ ನಾಲ್ಕು ಸಚಿವ ಸ್ಥಾನವನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ, ಪಕ್ಷದ ಎಚ್ಚರಿಕೆಯ ನಡುವೆಯೂ ಮುಜುಗರ ತರುತ್ತಿರುವ ಮೂವರು ಸಚಿವರನ್ನು ಕೈಬಿಡುವ ನಿರ್ಧಾರಕ್ಕೆ ಬಿಜೆಪಿ ಬರುವ ಸಾಧ್ಯತೆಯಿದೆ. ಪಕ್ಷದ ಕಷ್ಟದ ಸಮಯದಲ್ಲಿ ಟ್ರಬಲ್ ಶೂಟರ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಚಿವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವ ಕುರಿತು ಚಿಂತನೆ ನಡೆಯುತ್ತಿದೆ. 

ಇತ್ತೀಚೆಗೆ ನಡೆದ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಪರವಾಗಿ ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡದ ಸಚಿವರ ತಲೆದಂಡವಾಗುವ ಸಾಧ್ಯತೆಯಿದೆ. ಹಿರಿತನ ಮತ್ತು ಪಕ್ಷ ನಿಯತ್ತನ್ನು ಈ ಬಾರಿ ಪರಿಗಣಿಸಲಾಗುವುದು. ಆ ಮೂಲಕ, ಕಾರ್ಯಕರ್ತರಲ್ಲೂ ಹುಮ್ಮಸ್ಸನ್ನು ತರುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ, ವಲಸೆ ಬಂದವರ ಮೇಲೂ ವಿಶೇಷ ನಿಗಾ ಇಡಲಾಗುತ್ತಿದೆ.

click me!