
ಬೆಂಗಳೂರು: ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ನಾಯಕರನ್ನು ಶಾಂತಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ತೀವ್ರ ಕಸರತ್ತು ಆರಂಭಿಸಿದೆ. ಇದರ ಭಾಗವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕಳೆದ ರಾತ್ರಿ ಅಸಮಾಧಾನಿತ ಶಾಸಕ ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರೊಂದಿಗೆ ದೂರವಾಣಿ ಹಾಗೂ ನೇರ ಭೇಟಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾದ ಸುರ್ಜೇವಾಲ ಅವರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ರಾಜೀನಾಮೆಯಂತಹ ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಮುಂಬರುವ ದಿನಗಳಲ್ಲಿ ಒಳ್ಳೆಯ ಕಾಲ ಬರಲಿದೆ, ಸ್ವಲ್ಪ ತಾಳ್ಮೆಯಿಂದಿ ಎಂದು ಸುರ್ಜೇವಾಲ ಮನವಿ ಮಾಡಿದರು. ಪಕ್ಷದಲ್ಲಿ ಸೂಕ್ತ ಗೌರವ ಹಾಗೂ ಸ್ಥಾನಮಾನ ಕೊಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದ ಅವರು, ಈ ಕುರಿತು ಕೆಪಿಸಿಸಿ ಅಧ್ಯಕ್ಷರೊಂದಿಗೂ ಮಾತುಕತೆ ನಡೆಸುವಂತೆ ಅವಕಾಶವಂಚಿತ ನಾಯಕರಿಗೆ ಸೂಚಿಸಿದರು.
ಸುರ್ಜೇವಾಲ ಅವರ ಯಾವುದೇ ಸಮಾಧಾನಕರ ಮಾತುಗಳಿಗೆ ತಕ್ಷಣಕ್ಕೆ ಒಪ್ಪದ ಶಾಸಕ ಯಶವಂತರಾಯಗೌಡ ಪಾಟೀಲ್, ಪಕ್ಷದ ನಾಯಕರ ವೈಖರಿಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದರು ಎನ್ನಲಾಗಿದೆ. "ಪಕ್ಷ ಕಟ್ಟುವಾಗ ನಾವೆಲ್ಲರೂ ಬೇಕು. ಆದರೆ ಅಧಿಕಾರ ನೀಡುವಾಗ ಮಾತ್ರ ಕೆಲವು ವ್ಯಕ್ತಿಗಳಿಗೆ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀವು ಕೊಟ್ಟಿದ್ದ ಮಾತನ್ನು ಈಡೇರಿಸಿಲ್ಲ. ನಾವು ಕಳೆದ ನಲವತ್ತು ವರ್ಷಗಳಿಂದ ಇದನ್ನು ಸಹಿಸಿಕೊಂಡು ಬಂದಿದ್ದೇವೆ, ಇನ್ನು ಸಹಿಸಲು ಸಾಧ್ಯವಿಲ್ಲ." ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆನ್ನಲಾಗಿದೆ.
ಹೈಕಮಾಂಡ್ ನೀಡಿದ ಯಾವುದೇ ಆಶ್ವಾಸನೆಗೂ ತಕ್ಷಣಕ್ಕೆ ಬಗ್ಗದ ಪಾಟೀಲ್, ತಮ್ಮ ಮುಂದಿನ ತೀರ್ಮಾನವನ್ನು ಕ್ಷೇತ್ರದ ಜನರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಮೊದಲು ನಾನು ನನ್ನ ಕ್ಷೇತ್ರದ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಸಮಾಲೋಚನೆ ನಡೆಸುತ್ತೇನೆ. ಅವರ ಅಭಿಪ್ರಾಯ ಆಲಿಸಿದ ನಂತರವೇ ನಿಮ್ಮ ಬಳಿ ಬಂದು ಅಂತಿಮವಾಗಿ ಮಾತನಾಡುತ್ತೇನೆ" ಎಂದು ಸುರ್ಜೇವಾಲ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ರಾತ್ರಿ ನಡೆದ ಈ ಮಹತ್ವದ ಮಾತುಕತೆಯ ವೇಳೆಯಲ್ಲಿ ಸುರ್ಜೇವಾಲ ಅವರು ಯಾವುದೇ ನಿರ್ದಿಷ್ಟ ಭರವಸೆ ನೀಡಲು ಸಾಧ್ಯವಾಗದಿದ್ದರೂ, ಅಸಮಾಧಾನದ ಕಿಚ್ಚು ಶಮನಗೊಳಿಸಲು ಕೆಪಿಸಿಸಿ ಹಂತದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.