ಎಚ್‌ಡಿಕೆ ಸಂಪರ್ಕದಲ್ಲಿದ್ದಾರೆ, ಆದ್ರೆ ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

By Govindaraj SFirst Published Nov 20, 2022, 11:22 AM IST
Highlights

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬಾರದು ಎನ್ನುವುದೇ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ನನ್ನ ಉದ್ದೇಶ ಒಂದೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಜೆಡಿಎಸ್‌ಗೆ ಸೇರ್ಪಡೆ ಆಗುವುದಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿ (ನ.20): ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬಾರದು ಎನ್ನುವುದೇ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ನನ್ನ ಉದ್ದೇಶ ಒಂದೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಜೆಡಿಎಸ್‌ಗೆ ಸೇರ್ಪಡೆ ಆಗುವುದಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದು ಸರ್ಕಾರ ಮಾಡಲೇಬೇಕು ಎಂದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹತ್ತು ಜನ ಪ್ರಮುಖರಲ್ಲಿ ನಾನು ಕೂಡ ಒಬ್ಬನಾಗುತ್ತೇನೆ. ಹತ್ತು ಮಂದಿ ಬಿಜೆಪಿಯ ಪ್ರಮುಖರಲ್ಲಿ ನಾನೇ ಇರುವಾಗ ಬೇರೆಯವರನ್ನು ಮಂತ್ರಿ ಮಾಡುವ ಹಾಗೂ ಬೇರೆಯವರಿಗೆ ಟಿಕೆಟ್‌ ಕೊಡುವ ಶಕ್ತಿ ಕೊಟ್ಟಾಗ ನಾನೇಕೆ ಬಿಜೆಪಿ ಏಕೆ ಬಿಡಲಿ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವೆ: ಯಾವ ವ್ಯವಸ್ಥಿತ ಸಂಚು ಮಾಡಿ ದಿನನಿತ್ಯ ಮಾಧ್ಯಮಗಳಲ್ಲಿ ಬರುತ್ತಿದೆ ಗೊತ್ತಿಲ್ಲ. ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ಬಿಜೆಪಿಯಲ್ಲಿ ಉನ್ನತ ಹುದ್ದೆಗೆ ಹೋಗಿ ಸೇವೆ ಮಾಡುತ್ತೇನೆ. 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಮುಖ ನಾಯಕನಾಗಿರುತ್ತೇನೆ. ನಾನು ಒಬ್ಬ ಪ್ರಮುಖ ನಾಯಕನಾಗಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಬೆಳೆಸಲು ಪ್ರಯತ್ನಿಸುತ್ತೇನೆ ಎಂದರು.

ಚಿಲುಮೆ ಸಂಸ್ಥೆಯನ್ನು ನಾನು ಬಳಸಿಲ್ಲ: ಸಚಿವ ಅಶ್ವತ್ಥ್‌ ನಾರಾಯಣ

ಮಂತ್ರಿಗಿರಿಗಾಗಿ ಲಾಬಿ ಮಾಡಿಲ್ಲ: ಮಂತ್ರಿ ಸ್ಥಾನಕ್ಕಾಗಿ ನಾನು ಲಾಬಿ ಮಾಡುವ ಮನುಷ್ಯನಲ್ಲ. ಈವರೆಗೂ ಒಬ್ಬರ ಮನೆಗೂ ನಾನು ಮಂತ್ರಿ ಮಾಡುವಂತೆ ಹೋಗಿಲ್ಲ. ಸರ್ಕಾರ ಮಾಡಿದವರು ನಾವು, ನಾನು ಅಲ್ಲ. ನಾವು, ನಾನು ಹೋಗಿ ಬಯೋಡೇಟಾ ತೆಗೆದುಕೊಂಡು ಮಂತ್ರಿ ಮಾಡಿ ಎಂದು ಕೆಳಮಟ್ಟಕ್ಕೆ ಇಳಿದಿಲ್ಲ. ನನ್ನನ್ನು ಮಂತ್ರಿ ಮಾಡುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮಂತ್ರಿ ಸ್ಥಾನಗೋಸ್ಕರ ನಾನು ಬಿಜೆಪಿಗೆ ಬಂದಿಲ್ಲ. ಮಂತ್ರಿ ಸ್ಥಾನ ಬಿಟ್ಟು ಬಿಜೆಪಿಗೆ ಬಂದಿದ್ದೇನೆ. 2023ಕ್ಕೆ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರಬೇಕು. ಅದಕ್ಕೆ ಏನೇನೂ ತಯಾರಿ ಮಾಡಬೇಕು, ಏನೇನೂ ಕಾಂಪ್ರಮೈಸ್‌ ಮಾಡಬೇಕು, ನಮ್ಮೆಲ್ಲ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬೆಳಗಾವಿ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಗೆಲ್ಲಿಸಲು ಪ್ರಯತ್ನ ಮಾಡಲಾಗುವುದು. ಈಗಾಗಲೇ 36ರಿಂದ 40 ಸೀಟ್‌ ಗುರುತಿಸಿದ್ದೇವೆ ಎಂದರು.

ಸಿಎಂ ಬೊಮ್ಮಾಯಿಗೆ ಧಮ್‌ ಇದ್ದರೆ ತನಿಖೆ ನಡೆಸಲಿ: ಡಿ.ಕೆ.ಶಿವಕುಮಾರ್‌

ನಿತ್ಯವೂ ಕುಮಾರಸ್ವಾಮಿ ಟಚ್‌ನಲ್ಲಿ ಇದ್ದಾರೆ: ನನಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ಎಚ್‌.ಡಿ.ಕುಮಾರಸ್ವಾಮಿ ನಿತ್ಯವೂ ನನ್ನ ಜೊತೆ ಮೊಬೈಲ್‌ ಮೂಲಕ ಟಚ್‌ನಲ್ಲಿ ಇದ್ದಾರೆ. ಯಾವುದೇ ಕಾರಣಕ್ಕೂ ನಾನು ಜೆಡಿಎಸ್‌ಗೆ ಬರುವುದಿಲ್ಲ, ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ನಾನು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ನಮ್ಮಿಬ್ಬರ ಉದ್ದೇಶ ಒಂದೇ, ಕಾಂಗ್ರೆಸ್‌ ಅಧಿಕಾರಕ್ಕೆ ಬರಬಾರದು ಎಂಬುದಾಗಿದೆ. ನಿಮ್ಮ ಉದ್ದೇಶ ನೀವು ಈಡೇರಿಸಿಕೊಳ್ಳಿ, ನನ್ನ ಉದ್ದೇಶ ನಾನು ಈಡೇರಿಸಿಕೊಳ್ಳುತ್ತೇನೆ. ನಾನು ಬಿಜೆಪಿಯಲ್ಲಿ ಇದ್ದುಕೊಂಡೇ ಅದನ್ನು ಮಾಡುತ್ತೇನೆ. ನೀವು ಜೆಡಿಎಸ್‌ನಲ್ಲಿ ಇದ್ದುಕೊಂಡು ಅದನ್ನು ಮಾಡಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ ಎಂದು ರಮೇಶ ಇದೇ ಸಂದರ್ಭದಲ್ಲಿ ಹೇಳಿದರು.

click me!