
ಬೆಳಗಾವಿ (ಆ.22): ನನಗೂ ಕಳೆದ ಚುನಾವಣೆಯಲ್ಲಿ ದೆಹಲಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಕರೆ ವಂದಿತ್ತು. ಆದರೆ, ನಾನು ಬಿಜೆಪಿಯನ್ನು ಬಿಡಲಿಲ್ಲ. ಕಾಂಗ್ರೆಸ್ಗೆ ಹೋಗಿದ್ದರೆ ಇವಾಗ ನಾನೂ ಕೂಡ ಮಂತ್ರಿ ಆಗಿರುತ್ತಿದ್ದೆ. ಆದರೆ, ಲಕ್ಷ್ಮಣ ಸವದಿ ಒಬ್ಬ ನಾಟಕಕಾರ. ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಅರ್ಹತೆ ಇಲ್ಲದವನನ್ನು ಡಿಸಿಎಂ ಮಾಡಿದ್ದ ಪಕ್ಷವನ್ನು ಬಿಟ್ಟು ಹೋಗಿದ್ದಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಡಿಸಿಸಿ ಬ್ಯಾಂಕ್ ಚುನಾವಣೆ ನಿಮಿತ್ತ ಅಥಣಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ಬಗ್ಗೆ ಮಾತನಾಡಲು ಬಂದಿರುವುದಾಗಿ ಹೇಳಿದ ಅವರು, ಸವದಿ ಅವರನ್ನು 'ಒಬ್ಬ ನಾಟಕಕಾರ' ಮತ್ತು 'ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಲಾಯಕ್ಕಿಲ್ಲದ ವ್ಯಕ್ತಿ' ಎಂದು ಕಟುವಾಗಿ ಟೀಕಿಸಿದರು.
2018ರ ಚುನಾವಣೆಯ ಸೋಲಿನ ಪ್ರಸ್ತಾಪ:
2018ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಜನರು ಸವದಿಯನ್ನು 'ಒಂದು ದೊಡ್ಡ ರಾಕ್ಷಸನನ್ನು' ಸೋಲಿಸಿದ್ದಾರೆ. ಆದರೆ, ಸವದಿಯನ್ನು ಯಾರು ಉಪಮುಖ್ಯಮಂತ್ರಿ (ಡಿಸಿಎಂ) ಮಾಡಿದರು ಎಂಬುದು ತಮಗೆ ಗೊತ್ತಿಲ್ಲ. ಈ ಬಗ್ಗೆ ನನಗೆ ತುಂಬಾ ಆಶ್ಚರ್ಯ ಉಂಟಾಗಿತ್ತು. ಹೀಗಾಗಿ, ನೇರವಾಗಿ ನಾನು ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಕೇಳಿದಾಗ ಅವರು ಹೈಕಮಾಂಡ್ ನಿರ್ಧಾರ ಎಂದು ಹೇಳಿದರು. ಸವದಿಯನ್ನು ಯಡಿಯೂರಪ್ಪ ಅವರು ಡಿಸಿಎಂ ಮಾಡಿರಲಿಲ್ಲ. ಆದ್ರೆ, ಸವದಿ ಒಬ್ಬ ಸೊಕ್ಕಿನ ಮನುಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಿಂಗಾಯತರೇ ಅಧ್ಯಕ್ಷ:
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿಯಿಂದ ಮಹೇಶ್ ಕುಮಠಳ್ಳಿ ಮತ್ತು ಕಾಗವಾಡದಿಂದ ಶ್ರೀನಿವಾಸ ಪಾಟೀಲ್ ಸ್ಪರ್ಧಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಖಚಿತಪಡಿಸಿದರು. ಕಣ್ಣೀರ ಮಠದಲ್ಲಿ ಲಿಂಗಾಯತ ಶಾಸಕರು ಒಗ್ಗೂಡಿದ್ದಾರೆ ಎಂದು ಸವದಿ ಸಭೆ ನಡೆಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ನಾವು ಜಾರಕಿಹೊಳಿ ಕುಟುಂಬ ಯಾವತ್ತೂ ಲಿಂಗಾಯತರ ವಿರುದ್ಧವಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನೇ ಆಯ್ಕೆ ಮಾಡುತ್ತೇವೆ' ಎಂದು ಸ್ಪಷ್ಟಪಡಿಸಿದರು.
ಸವದಿ ವಿರುದ್ಧ ವೈಯಕ್ತಿಕ ಟೀಕೆ:
ಕಳೆದ ಚುನಾವಣೆಯಲ್ಲಿ ತಮಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ದೆಹಲಿಯಿಂದ ಕರೆ ಬಂದಿತ್ತು. ಆದರೆ ತಾವು ನಿರಾಕರಿಸಿದ್ದಾಗಿ ಜಾರಕಿಹೊಳಿ ಹೇಳಿದರು. ಒಂದು ವೇಳೆ ಹೋಗಿದ್ದರೆ ಮಂತ್ರಿಯಾಗುತ್ತಿದ್ದೆ. ಆದರೆ ಸವದಿ ಪಕ್ಷಕ್ಕೆ ಅನ್ಯಾಯ ಮಾಡಿ ಕಾಂಗ್ರೆಸ್ಗೆ ಹೋಗಿದ್ದಾನೆ. ಲಕ್ಷ್ಮಣ ಸವದಿ ಜೊತೆ ಯಾವುದೇ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಥಣಿಯಲ್ಲಿ ಲಕ್ಷ್ಮಣ ಸವದಿ ವಿರುದ್ಧ ತಮ್ಮ ರಾಜಕೀಯ ಸಮರ ಮುಂದುವರೆಸುವುದಾಗಿ ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.