Mekedatu Padayatra, ಮೇಕೆದಾಟು ಪಾದಯಾತ್ರೆ, ಡಿಕೆಶಿಗೆ ರಾಮನಗರ ಎಸ್‌ಪಿ ಖಡಕ್ ಎಚ್ಚರಿಕೆ

By Suvarna NewsFirst Published Jan 8, 2022, 4:10 PM IST
Highlights

* ಮೇಕೆದಾಟು ಜಾರಿಗೆ ಆಗ್ರಹಿಸಿ ಜ.09ರಿಂದ ಕಾಂಗ್ರೆಸ್ ಪಾದಯಾತ್ರೆ 
*ಕರ್ಫ್ಯೂ ನಡುವೆ ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ
* ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ರಾಮನಗರ ಪೊಲೀಸ್ ವರಿಷ್ಠಧಿಕಾರಿ ಎಚ್ಚರಿಕೆ

ರಾಮನಗರ, (ಜ.08): ಮೇಕೆದಾಟು ಯೋಜನೆ (Mekedatu Project) ಜಾರಿಗೆ ಆಗ್ರಹಿಸಿ ನಾಳೆಯಿಂದ (ಜ. 9) ಕಾಂಗ್ರೆಸ್ ಪಾದಯಾತ್ರೆ(Congress Mekedatu Padayatra) ನಡೆಸಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದೆ. ಆದ್ರೆ, ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ರಾಮನಗರ(Ramanagara) ಜಿಲ್ಲೆಯ ಕನಕಪುರ ತಾಲೂಕಿನ ಮರಳೆ ಗ್ರಾಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಗಿರೀಶ್, ಸರ್ಕಾರ ವೀಕೆಂಡ್​ ಕರ್ಫ್ಯೂ ವಿಧಿಸಿರುವುದರಿಂದ ಈಗಾಗಲೇ ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಸಭೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಾದಯಾತ್ರೆಗೆ(Congress Padayatra) ಅನುಮತಿ ನೀಡಲು ಆಗುವುದಿಲ್ಲ, ಸರ್ಕಾರದ ಮಾರ್ಗಸೂಚಿ ಪ್ರಕಾರ ಅನುಮತಿ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

Mekedatu Project: ರೂಲ್ಸ್ ಮೀರಿ ಸಭೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಆರಗ

ಈಗಾಗಲೇ ಪಾದಯಾತ್ರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ (Weekend Curfew) ನಡುವೆ ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಬರುವುದಿಲ್ಲ. ಪಾದಯಾತ್ರೆ ಮಾಡುವುದು ತಪ್ಪು ಎಂದು ಕೇಳಿಕೊಳ್ಳುತ್ತೇನೆ. ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇನೆ. ನಿಯಮ ಮೀರಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು  ಎಚ್ಚರಿಸಿದರು. 

ಮುಂಜಾಗ್ರತಾ ಕ್ರಮವಾಗಿ ಯಾರನ್ನೂ ವಶಕ್ಕೆ ಪಡೆಯುವುದಿಲ್ಲ. ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಪಾದಯಾತ್ರೆಗಾಗಿ ನಾವು ಬಂದೋಬಸ್ತ್ ಕೊಡುತ್ತಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಭದ್ರತೆಗಾಗಿ 1,200 ಪೊಲೀಸರನ್ನು ನಿಯೋಜಿಸಿದ್ದೇವೆ ಎಂದರು.

ಡಿಕೆಶಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ
ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಡಿಕೆ ಶಿವಕುಮಾರ್‌ಗೆ ಎಸ್ಪಿ ಗಿರೀಶ್ ನೋಟಿಸ್ ನೀಡಿದ್ದಾರೆ. ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್ ಹಿನ್ನಲೆ ಎಸಿ ಮಂಜನಾಥ್ ಹಾಗೂ ಕನಕಪುರ ತಹಶಿಲ್ದಾರ್ ಜೊತೆಗೂಡಿ ನೋಟಿಸ್ ನೀಡಲಾಗಿದೆ.

ಪಾದಯಾತ್ರೆ ಮಾಡಬೇಡಿ ಕರ್ಪ್ಯೂ ಇದೆ ಉಲ್ಲಂಘನೆ ಮಾಡಿದ್ರೆ ಬಂಧಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ನೋಟಿಸ್ ನೀಡಿದ್ರೂ ಡಿಕೆ ಶಿವಕುಮಾರ್ ಯಾವುದೇ ಉತ್ತರ ನೀಡಿಲ್ಲ. ಇಂದು(ಶನಿವಾರ) ಮತ್ತೊಮ್ಮೆ   ಎಸ್ಪಿ ಗಿರೀಶ ಡಿಕೆಶಿಗೆ  ಎಚ್ಚರಿಕೆ  ನೀಡಿದ್ದಾರೆ.

ಮುಂಜಾಗ್ರತಾ ಕ್ರಮಗಳನ್ನು ವಹಿಸಿಯೇ ಮೇಕೆದಾಟು ಹೋರಾಟ ಮಾಡುತ್ತೇವೆ. 144 ಸೆಕ್ಷನ್ ವಿಧಿಸಿದರೆ ನಾವಿಬ್ಬರಾದರೂ ನಡೆಯುತ್ತೇವೆ. ನಾವು ಪಾದಯಾತ್ರೆ ಮಾಡಲು ಮೊದಲೇ ನಿರ್ಧರಿಸಿದ್ದೆವು. ನಾವು ನಿರ್ಧಾರ ಮಾಡಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರ ಹಿಂದಿನ ಉದ್ದೇಶವೇನೆಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ಹಾಗೇ, ರಾಮನಗರ ಜಿಲ್ಲೆಗೆ ಮಾತ್ರ ಏಕೆ ಕೆಲ ನಿಯಮ ಜಾರಿ ಇದೆ? ರಾಜ್ಯಾದ್ಯಂತ ಇಲ್ಲದ ನಿಯಮ ರಾಮನಗರ ಜಿಲ್ಲೆಗೆ ಏಕೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ವಾರಾಂತ್ಯ ಕರ್ಪ್ಯೂ ಘೋಷಣೆ ಮಾಡಿದೆ. ವಾರಾಂತ್ಯದ ಕರ್ಪ್ಯೂ ಜಾರಿಮಾಡುವ ಹೊಣೆ ಅಧಿಕಾರಿಗಳ ಹೆಗಲಿಗೇರಿದೆ. ಅದರೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕರ್ಪ್ಯೂ ದಿನದಂದೇ ಆರಂಭವಾಗುತ್ತಿದೆ.

ಎರಡು ರಾಷ್ಟ್ರೀಯ ಪಕ್ಷಗಳ ಜಂಗಿ ಕುಸ್ತಿಯ ಕೇಂದ್ರಬಿಂದು, ಇಡೀ ರಾಜ್ಯದ ಗಮನ ತನ್ನ ಸೆಳೆದಿರುವ ಕಾಂಗ್ರಸ ಮೇಕೆದಾಟು ಪಾದಯಾತ್ರೆ ಜನವರಿ 9 ರಂದು ಪ್ರಾರಂಭವಾಗಿ ಜನವರಿ 19ರ ತನಕ ನಡೆಯಲಿದೆ. ಸುಮಾರು 160 ಕಿ. ಮೀ. ಸಂಚಾರ ಮಾಡಿ ಅಂತಿಮವಾಗಿ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಪಾದಯಾತ್ರೆಯ ವಿವರ 
* ಜನವರಿ 9ರ ಭಾನುವಾರ ಬೆಳಿಗ್ಗೆ 8.30ಕ್ಕೆ ಮೇಕೆದಾಟು ಬಳಿಯ ಅರ್ಕಾವತಿ ಮತ್ತು ಕಾವೇರಿ ನದಿಗಳು ಸಂಧಿಸುವ ಸಂಗಮ ಸ್ಥಳದಿಂದ ಪ್ರಾರಂಭವಾಗುವ ಪಾದಯಾತ್ರೆ 6.5 ಕಿ. ಮೀ. ದೂರ ಸಾಗಿ ಹೆಗ್ಗನೂರು ಬಳಿ ಮಧ್ಯಾಹ್ನದ ಭೋಜನ ಮುಗಿಸಿ ಮತ್ತೆ 8.5 ಕಿ. ಮೀ. ಸಾಗಿ ಡಿ. ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮ ತಲುಪಲಿದೆ. ಸಭೆಯ ಬಳಿಕ ಅಲ್ಲೇ ರಾತ್ರಿ ವಾಸ್ತವ್ಯ. 

* 2ನೇ ದಿನ ದೊಡ್ಡಾಲಹಳ್ಳಿ ಗ್ರಾಮದಿಂದ 8 ಕಿ. ಮೀ. ಸಾಗಿ ಮಾದಪ್ಪನದೊಡ್ಡಿ ಬಳಿ ವಿಶ್ರಾಂತಿ, ಊಟ ಮುಗಿಸಿ ಮತ್ತೆ 8 ಕಿ. ಮೀ. ಸಾಗಿ ಕನಕಪುರ ತಾಲ್ಲೂಕು ಕೇಂದ್ರ ತಲುಪಲಿದೆ. ರಾತ್ರಿ ಕನಕಪುರದಲ್ಲಿ ನಾಯಕರ ವಾಸ್ತವ್ಯ. 

* 3ನೇ ದಿನ ಕನಕಪುರದಿಂದ 7.3 ಕಿ. ಮೀ. ನೆಡದು ಗಾಣಳು ಗ್ರಾಮದ ವೀರಭದ್ರ ಸ್ವಾಮಿ ದೇವಾಲಯದ ಬಳಿ ಊಟ ಹಾಗೂ ವಿಶ್ರಾಂತಿ. ನಂತರ ಮತ್ತೆ 7 ಕಿ. ಮೀ. ಸಾಗುವ ಪಾದಯಾತ್ರೆ ಚಿಕ್ಕೇನಹಳ್ಳಿ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ.

 * 4ನೇ ದಿನದ ಪಾದಯಾತ್ರೆ ಚುಕ್ಕೇನಹಳ್ಳಿ ಗ್ರಾಮದಿಂದ ಪ್ರಾರಂಭವಾಗಿ 15 ಕಿ. ಮೀ. ಸಾಗಿ ಜಿಲ್ಲಾ ಕೇಂದ್ರ ರಾಮನಗರ ತಲುಪಲಿದೆ. ರಾತ್ರಿ ಅಲ್ಲಿಯೇ ಸಭೆ ನಡೆಸಿ, ನಾಯಕರು ವಾಸ್ತವ್ಯ ಹೂಡಲಿದ್ದಾರೆ.

 * 5 ನೇ ದಿನದ ಪಾದಯಾತ್ರೆ ರಾಮನಗರದಿಂದ ಆರಂಭಗೊಂಡು 15 ಕಿ. ಮೀ. ಸಾಗಿ ಬಿಡದಿ ತಲುಪಲಿದೆ. ರಾತ್ರಿ ಬಿಡದಿಯಲ್ಲಿ ವಾಸ್ತವ್ಯ. 

* 6ನೇ ದಿನದ ಪಾದಯಾತ್ರೆ ಬಿಡದಿಯಿಂದ ಪ್ರಾರಂಭಗೊಂಡು ಮಂಚನಾಯಕನಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಕಿ. ಮೀ. ಸಾಗಿ ಕೆಂಗೇರಿ ತಲುಪಲಿದೆ. ರಾತ್ರಿ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಲ್ಲಿ ವಾಸ್ತವ್ಯ.

 * 7ನೇ ದಿನದ ಪಾದಯಾತ್ರೆ ಕೆಂಗೇರಿಯಿಂದ ಪ್ರಾರಂಭ, ಬೆಂಗಳೂರು ನಗರ ಪ್ರವೇಶ. 12 ಕಿ. ಮೀ. ನಡೆದು ಬೆಂಗಳೂರಿನ ಬನಶಂಕರಿಯಲ್ಲಿ ಮೂಲಕ ಸಾಗಿ ಸಾರಕ್ಕಿ ಸಿಗ್ನಲ್ ಬಳಿಯ ಸಿಂಧೂರ ಕನ್ವೆನ್ಷನ್ ಹಾಲ್ ನಲ್ಲಿ ರಾತ್ರಿ ವಾಸ್ತವ್ಯ. 

* 8ನೇ ದಿನದ ಪಾದಯಾತ್ರೆ ಸಾರಕ್ಕಿಯಿಂದ ಪ್ರಾರಂಭ. ಕೋರಮಂಗಲ ಮಾರ್ಗವಾಗಿ ಸಾಗುವ ಪಾದಯಾತ್ರೆ 17.2 ಕಿ. ಮೀ. ಸಾಗಿ ರಾತ್ರಿ ಲಕ್ಷ್ಮಿಪುರಂ ಸುಬ್ರಹ್ಮಣ್ಯ ಛತ್ರದಲ್ಲಿ ವಾಸ್ತವ್ಯ. 

* 9ನೇ ದಿನದ ಪಾದಯಾತ್ರೆ ಲಕ್ಷ್ಮಿಪುರಂನಿಂದ ಪ್ರಾರಂಭ. ಬಾಣಸವಾಡಿ ಮಾರ್ಗವಾಗಿ 12 ಕಿ. ಮೀ. ಸಾಗಿ ರಾತ್ರಿ ನಾಗವಾರದ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ. 

* 10ನೇ ದಿನದ ಪಾದಯಾತ್ರೆ ನಾಗವಾರದಿಂದ ಪ್ರಾರಂಭವಾಗುವ ಕಾಂಗ್ರೆಸ್ ನಾಯಕರ ಪಾದಯಾತ್ರೆ 12 ಕಿ. ಮೀ. ಸಂಚಾರ ಮಾಡಿ ಗಾಯಿತ್ರಿ ವಿಹಾರ್, ಪ್ಯಾಲೇಸ್ ಗ್ರೌಂಡ್ ತಪುಪಲಿದೆ. 

* ಪಾದಯಾತ್ರೆ ಕೊನೆಯ ದಿನವಾದ 11ನೇ ದಿನ ಪ್ಯಾಲೇಸ್ ಗ್ರೌಂಡ್‌ನಿಂದ ಹೊರಟು 8 ಕಿ. ಮೀ. ಸಂಚಾರ ಮಾಡಿ ರೇಸ್ ಕೋರ್ಸ್ ರೋಡ್ ಮೂಲಕ ಸಾಗಿ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮುಕ್ತಾಯ.

 

click me!