Padayatra Politics: ತಮಿಳ್ನಾಡಲ್ಲಿ ಮಿತ್ರಪಕ್ಷಕ್ಕೆ ಬುದ್ಧಿ ಹೇಳಿ: ಕಾಂಗ್ರೆಸ್‌ಗೆ ಕಾರಜೋಳ ತಿರುಗೇಟು

By Kannadaprabha NewsFirst Published Jan 8, 2022, 4:37 AM IST
Highlights

*  ಮೇಕೆದಾಟು ಹೋರಾಟ ಕಾಂಗ್ರೆಸ್‌ ಕೈಗೆತ್ತಿಕೊಂಡಿರುವುದರಲ್ಲಿ ಯಾವುದೇ ಹುರುಳಿಲ್ಲ
*  ಕಾಂಗ್ರೆಸ್‌ನವರ ಹೊಣೆಗೇಡಿತನದಿಂದ ರಾಜ್ಯದ ಯೋಜನೆಗಳ ಪ್ರಗತಿ ಕುಂಠಿತ
*  ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ 
 

ಚಿತ್ರದುರ್ಗ(ಜ.08): ತಮಿಳುನಾಡಿನಲ್ಲಿ(Tamil Nadu) ತನ್ನ ಮಿತ್ರ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (DMK) ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್‌(Congress) ಬುದ್ಧಿವಾದ ಹೇಳಲಿ ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol), ಮೇಕೆದಾಟು(Mekedatu) ವಿಚಾರದಲ್ಲಿ ಪದೇ ಪದೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ(Annamalai) ಹೆಸರನ್ನು ಎಳೆದು ತರುತ್ತಿರುವ ಕಾಂಗ್ರೆಸ್‌ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಮೇಕೆದಾಟು ಯೋಜನೆ ವಿಳಂಬಕ್ಕೆ ಕೇಂದ್ರ ಸರ್ಕಾರವೇ(central Government) ಕಾರಣವಾಗಿದ್ದು, ತಮಿಳುನಾಡಿನ ಮುಖಂಡರ ಮಾತು ಕೇಳಿ ಕರ್ನಾಟಕಕ್ಕೆ(Karnataka) ಅನ್ಯಾಯ ಮಾಡುತ್ತಿದೆ. ಬಿಜೆಪಿ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರೇ(CT Ravi) ತಮಿಳುನಾಡಿನ ಅಣ್ಣಾಮಲೈ ಅವರನ್ನು ರಾಜ್ಯದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಸೇರಿದಂತೆ ಅನೇಕ ಕಾಂಗ್ರೆಸ್‌ ಮುಖಂಡರು ಆರೋಪ ಮಾಡಿದ್ದರು.

ಕಾರಜೋಳ ಹೇಳಿಕೆ ಶುದ್ಧ ಸುಳ್ಳು: ನಮ್ಮ ಅವಧಿಯಲ್ಲೇ ಕೇಂದ್ರಕ್ಕೆ ಡಿಪಿಆರ್‌ ಸಲ್ಲಿಕೆ: ಸಿದ್ದು, ಡಿಕೆಶಿ

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಮೇಕೆದಾಟು ಹೋರಾಟ ಕಾಂಗ್ರೆಸ್‌ ಕೈಗೆತ್ತಿಕೊಂಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಅದೊಂದು ರಾಜಕೀಯ ಗಿಮಿಕ್‌ ಆಗಿದ್ದು, ಅವರ ಹೊಣೆಗೇಡಿತನದಿಂದ ರಾಜ್ಯದ ಯೋಜನೆಗಳ ಪ್ರಗತಿ ಕುಂಠಿತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಸೇರಿ ಕಾಂಗ್ರೆಸ್‌ ಸರ್ಕಾರ ರಚಿಸಿದೆ. ಈ ವಿಚಾರದಲ್ಲಿ ಕ್ಯಾತೆ ತೆಗೆಯದಂತೆ ಸಿದ್ದರಾಮಯ್ಯ ಡಿಎಂಕೆ ಸರ್ಕಾರಕ್ಕೆ ಬುದ್ಧಿವಾದ ಹೇಳಲಿ ಎಂದು ಸಲಹೆ ನೀಡಿದರು. ಇನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸರ್ಕಾರದಲ್ಲಿಲ್ಲ. ಚುನಾಯಿತ ಪ್ರತಿನಿಧಿ ಪ್ರತಿನಿಧಿ ಅಲ್ಲ. ಹೀಗಿರುವಾಗ ಸಿದ್ದರಾಮಯ್ಯ ಮತ್ತು ಡಿಎಂಕೆ ಸೇರಿ ಸಹಕರಿಸಿ ಕರ್ನಾಟಕಕ್ಕೆ ಉಪಕರಿಸಲಿ ಎಂದು ಹೇಳಿದರು.

2013ರಿಂದ 2018ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಮೇಕೆದಾಟು ಬಗ್ಗೆ ಗಮನಹರಿಸಲಿಲ್ಲ. ಕುಂಭಕರ್ಣ ನಿದ್ದೆಯಲ್ಲಿ ತೊಡಗಿತ್ತು. ಈಗ ದಿಢೀರನೆ ಮೇಕೆದಾಟು ಹೋರಾಟ ಕೈಗೆತ್ತಿಕೊಂಡಿದೆ ಎಂದರು. ಇನ್ನು ಪ್ರಾಣ ಹೋದರೂ ಸರಿ ಹೋರಾಟ ಬಿಡಲ್ಲ ಎಂಬ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ಹೋರಾಟಕ್ಕಾಗಿ ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಟಾಂಗ್‌ ನೀಡಿದರು.

ಮೈಯಲ್ಲಿ ದೆವ್ವ ಬಂದಂತೆ ಕಾಂಗ್ರೆಸ್ಸಿಗರ ವರ್ತನೆ : ಕಾರಜೋಳ ವ್ಯಂಗ್ಯ

ಬೆಳಗಾವಿ: ನನ್ನ ಬುಟ್ಟಿಯೊಳಗೆ ಹಾವು ಇದೆ ಎಂದಷ್ಟೇ ಹೇಳಿದ್ದೇನೆ. ಯಾವ ಹಾವಿದೆ ಎನ್ನುವುದನ್ನು ನಾನು ತೋರಿಸಿಲ್ಲ. ತೋರಿಸುವುದಕ್ಕಿಂತ ಮೊದಲೇ ಕಾಂಗ್ರೆಸ್ಸಿಗರು ಅಂಜಿ ಓಡಾಡುತ್ತಿದ್ದಾರೆ. ಮೈಯಲ್ಲಿ ದೆವ್ವ ಬಂದಂತೆ ಕುಣಿಯುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದರು. 

Karnataka Politics: ಸಚಿವ ಕಾರಜೋಳ ‘ಬಾಂಬ್‌’: ಕಾಂಗ್ರೆಸ್‌ ವಿರುದ್ಧ ಶೀಘ್ರ ಸ್ಪೋಟಕ ಸುದ್ದಿ..!

ಮೇಕೆದಾಟು (Mekedatu)  ಯೋಜನೆ ವಿಳಂಬಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಕ್ಕೆ, ಕಾವೇರಿಯಿಂದ ಭೀಮಾ ನದಿವರೆಗೂ ಕಾಂಗ್ರೆಸ್‌ನವರು ಮೈಮೇಲೆ ದೆವ್ವ ಬಂದಂಗೆ ಕುಣಿ ದಾಡುತ್ತಿದ್ದಾರೆ ಎಂದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಬುದ್ದಿ ಹೇಳಬೇಕು ಎಂಬ ಸಿದ್ದರಾಮಯ್ಯ (Siddaramaiah)  ಹೇಳಿಕೆ ಸರಿಯಲ್ಲ. ಅಣ್ಣಾಮಲೈ ಅಧಿಕಾರದಿಂದ ಹೊರಗಿದ್ದಾರೆ. 

ಡಿಎಂಕೆ (DMK)  ನೆರಳಲ್ಲಿ ನೀವು ಆಡಳಿತ ಮಾಡುತ್ತಿದ್ದೀರಿ. ಯೋಜನೆ ಕುರಿತು ಮೊದಲು ಅವರಿಗೆ ತಿಳಿ ಹೇಳುವ ಕೆಲಸ ಮಾಡಿ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್‌. ಜನರಿಗೆ ಮೋಸ ಮಾಡುವ ತಂತ್ರ ಎಂದರು.
 

click me!