ಡಿಕೆಶಿ ಗಡ್ಡದ ಮೇಲೆ ಅಶೋಕ್‌ ಕಣ್ಣು , ಕೃಷ್ಣ ಬೈರೇಗೌಡ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಸದನ

By Kannadaprabha NewsFirst Published Feb 21, 2024, 2:37 PM IST
Highlights

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಗಡ್ಡದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆದು ಸದನವು ನಗೆಗಡಲಲ್ಲಿ ತೇಲಿತು. ಮಂಗಳವಾರ ಶೂನ್ಯವೇಳೆಯಲ್ಲಿ ರಾಮನಗರ ವಕೀಲರ ಪ್ರತಿಭಟನೆ ಕುರಿತು ಚರ್ಚೆ ನಡೆಯುತ್ತಿದ್ದರೂ ಶಿವಕುಮಾರ್‌ ಅವರು ಮಾತ್ರ ಯಾವುದೇ ಮಾತನಾಡದೆ ಸುಮ್ಮನೆ ಕುಳಿತಿದ್ದರು.

ವಿಧಾನಸಭೆ (ಫೆ.21): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಗಡ್ಡದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆದು ಸದನವು ನಗೆಗಡಲಲ್ಲಿ ತೇಲಿತು. ಮಂಗಳವಾರ ಶೂನ್ಯವೇಳೆಯಲ್ಲಿ ರಾಮನಗರ ವಕೀಲರ ಪ್ರತಿಭಟನೆ ಕುರಿತು ಚರ್ಚೆ ನಡೆಯುತ್ತಿದ್ದರೂ ಶಿವಕುಮಾರ್‌ ಅವರು ಮಾತ್ರ ಯಾವುದೇ ಮಾತನಾಡದೆ ಸುಮ್ಮನೆ ಕುಳಿತಿದ್ದರು. ಬಿಜೆಪಿ ಸದಸ್ಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸದನಕ್ಕೆ ಆಗಮಿಸಿದಾಗ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಅವರು ಈಗ ಉಪಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದು ಹೇಳಿದರು. ಆಗಲೂ ಶಿವಕುಮಾರ್‌ ಮುಗುಳ್ನಗೆ ತೋರಿ ಸುಮ್ಮನಾದರು.

ಶೇ.40ರಷ್ಟು ಶುಲ್ಕ ಪಾವತಿಸಿದ್ರೆ ಇನ್ಮುಂದೆ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತು ನಿರ್ಮಿಸಬಹುದು

ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಉಲ್ಲೇಖಿಸಿದಾಗ, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಶೋಕ್‌ ಅವರನ್ನು ಪರೋಕ್ಷವಾಗಿ ಟೀಕಿಸಲಾಗುತ್ತಿದೆ ಎಂದು ಕಾಲೆಳೆದರು. ನಮ್ಮ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು. ಎಷ್ಟೆಲ್ಲಾ ಚರ್ಚೆ ನಡೆದರೂ ಶಿವಕುಮಾರ್ ಮಾತ್ರ ಮಾತನಾಡಲಿಲ್ಲ.

ಡಿ.ಕೆ.ಶಿವಕುಮಾರ್‌ ಅವರು ಮಾತನಾಡದಿರುವುದನ್ನು ಕಂಡ ಅಶೋಕ್‌ ಅವರು ಗಡ್ಡದ ವಿಷಯ ಪ್ರಸ್ತಾಪಿಸಿದರು. ಉಪಮುಖ್ಯಮಂತ್ರಿಗಳು ಗಡ್ಡ ಯಾವಾಗ ತೆಗೀತಾರೆ? ಯಾಕೆ ಬಿಟ್ಟಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ? ಏನು ಪಣ ತೊಟ್ಟಿದ್ದಾರೆ? ಎಂದು ಕೆಣಕಿದರು. ಆಗಲೂ ಶಿವಕುಮಾರ್‌ ಕಿರುನಗೆ ಬೀರಿ ಸುಮ್ಮನಿದ್ದರು. ಕೃಷ್ಣಬೈರೇಗೌಡ ಅವರು, ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗುತ್ತಾರೆ. ಅದಕ್ಕೆ ಗಡ್ಡ ಬಿಟ್ಟಿದ್ದಾರೆ. ಅಜ್ಜಯ್ಯ ಅವರು ಹೇಳಿದಾಗ ತೆಗೀತಾರೆ ಎಂದರು.

ಬತ್ತಿರುವ ಬೋರ್‌ವೆಲ್‌ ರೀ ಡ್ರಿಲ್ಲಿಂಗ್‌ಗೆ ಸರ್ಕಾರ ಆದೇಶ, ಬಿಬಿಎಂಪಿ 110 ಹಳ್ಳಿಗೆ ಕಾವೇರಿ ನೀರು

ಆಗ ಅಶೋಕ್‌ ಅವರು, ಸಲೂನ್‌ನವರು ಹೇಳಿದಾಗ ತೆಗೀತಾರೆ. ಡಿಸೆಂಬರ್‌ ವೇಳೆಗೆ ಮುಖ್ಯಮಂತ್ರಿಯಾಗಲಿದ್ದಾರೆ. ಇಲ್ಲದಿದ್ದರೆ ಈ ಜನ್ಮದಲ್ಲಿ ಆಗಲ್ಲ ಎಂದು ಮಾತಿನಲ್ಲಿ ತಿವಿದರು. ಆಗ ಡಿ.ಕೆ.ಶಿವಕುಮಾರ್‌ ‘ಬ್ಲಡ್‌ ಈಸ್‌ ಥಿಕರ್‌ ದೆನ್‌ ವಾಟರ್‌’ (ರಕ್ತವು ನೀರಿಗಿಂತ ದಪ್ಪವಾಗಿರುತ್ತದೆ) ಎಂದಷ್ಟೇ ಹೇಳಿ ಕುಳಿತರು. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್‌ ಮತ್ತೆ ರಾಮನಗರ ವಿಚಾರಕ್ಕೆ ಬಂದಾಗ ಚರ್ಚೆ ಮುಂದುವರಿಯಿತು.

click me!