
ಬೆಂಗಳೂರು (ಏ.4) : ಮೊಳಕಾಲ್ಮೂರು ಕ್ಷೇತ್ರದಲ್ಲಿ ಡಾ. ಯೋಗೇಶ್ ಬಾಬುಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಬಿಜೆಪಿಯಿಂದ ಸೇರ್ಪಡೆಗೊಂಡಿರುವ ಎನ್.ವೈ. ಗೋಪಾಲಕೃಷ್ಣ (ಎನ್ವೈಜಿ) ಅವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಯೋಗೇಶ್ ಬಾಬು ಬೆಂಬಲಿಗರು ಗೋಪಾಲಕೃಷ್ಣ ಅವರ ಪಕ್ಷ ಸೇರ್ಪಡೆ ವೇಳೆಯಲ್ಲೇ ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ಇತ್ತೀಚೆಗೆ ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗೋಪಾಲಕೃಷ್ಣ(Gopalakrishna join congress) ಅವರು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK shivakumar) ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah)ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಹುಡುಗಾಟಕ್ಕೆ ಬಿಜೆಪಿಗೆ ಹೋಗಿದ್ದೆ ಎಂದ ಶಾಸಕ!
ಈ ವೇಳೆ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಯೋಗೇಶ್ ಬಾಬು ಬೆಂಬಲಿಗರು, ‘ಕೊಡಬೇಕಪ್ಪ ಕೊಡ್ಬೇಕು.. ಯೋಗೇಶ್ ಬಾಬುಗೆ ಟಿಕೆಟ್ ಕೊಡಬೇಕು’ ಎಂದು ಘೋಷಣೆ ಕೂಗಿದರು. ಒಂದು ವೇಳೆ ಯೋಗೇಶ್ ಬಾಬುಗೆ ಟಿಕೆಟ್ ಕೊಡಲಿಲ್ಲ ಎಂದರೆ ನಾವು ಕಾಂಗ್ರೆಸ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ ಎಚ್ಚರಿಕೆ ನೀಡಿದರು.
ಬಳಿಕ ಕೆಪಿಸಿಸಿ ಕಚೇರಿಯಿಂದ ಹೊರ ಬಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ‘ಬಾಬು ಬಾಬು’ ಎಂದು ಘೋಷಣೆ ಕೂಗಿದರು. ಯೋಗೇಶ್ ಬಾಬು ಅವರು ಇಷ್ಟೂವರ್ಷ ಪಕ್ಷ ಸಂಘಟಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ಯಶಸ್ಸಿಗೆ ಶ್ರಮಿಸಿದ್ದಾರೆ. ಕಾರ್ಯಕರ್ತನ ಶ್ರಮಕ್ಕೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಇತ್ತೀಚೆಗಷ್ಟೇ ಟಿಕೆಟ್ ಆಕಾಂಕ್ಷಿ ಬಿ. ಯೋಗೇಶ್ ಬಾಬು ಬೆಂಬಲಿಗರು ಸಿದ್ದರಾಮಯ್ಯ ನಿವಾಸದ ಮುಂದೆಯೂ ಪ್ರತಿಭಟನೆ ನಡೆಸಿದ್ದರು.
ತರೀಕೆರೆ ಕಾರ್ಯಕರ್ತರಿಂದಲೂ ಪ್ರತಿಭಟನೆ:
ಇನ್ನು ಇದೇ ವೇಳೆ ಶಿವಮೊಗ್ಗದ ತರೀಕೆರೆ ಕ್ಷೇತ್ರದಲ್ಲಿ ಗೋಪಿಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಹಾಗೂ ಮಡಿವಾಳ ಸಮುದಾಯದವರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಏ.4ರಂದು ಸಿಇಸಿ ಸಭೆ ಇದ್ದು ಶ್ರೀನಿವಾಸ್ ಅವರಿಗೆ ಟಿಕೆಟ್ ಅಂತಿಮವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಗೋಪಿಕೃಷ್ಣ ಬೆಂಬಲಿಗರು, ಮಡಿವಾಳರಿಗೆ ಒಂದು ಟಿಕೆಟ್ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಮಡಿವಾಳರು ಗೆಲ್ಲಬಹುದಾದ ತರೀಕೆರೆ ಕ್ಷೇತ್ರದಲ್ಲಿ ಗೋಪಿಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಶಾಸಕ ಗೋಪಾಲಕೃಷ್ಣ ರಾಜೀನಾಮೆ ಸ್ವೀಕೃತ: ಕಾಂಗ್ರೆಸ್ಸಿಗೆ?
ಆತ್ಮಹತ್ಯೆ ಯತ್ನ:
ಈ ವೇಳೆ ವ್ಯಕ್ತಿಯೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ತಕ್ಷಣ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು. ಗೋಪಿ ಕೃಷ್ಣ ಅವರಿಗೆ ಟಿಕೆಟ್ಗೆ ಒತ್ತಾಯಿಸಿ ಕೈಯಲ್ಲಿ ವಿಷದ ಬಾಟಲಿ ಹಿಡಿದಿದ್ದ ವ್ಯಕ್ತಿಯಿಂದ ಬಾಟಲಿ ಕಸಿದು ವ್ಯಕ್ತಿ ಹಾಗೂ ಪ್ರತಿಭಟನಾನಿರತ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.