Karnataka election 2023: ಸುರಪುರದಲ್ಲಿ ‘ನಾಯಕ’ರಿಬ್ಬರ ನಡುವೆ ಗೆಲುವಿಗೆ ಸಮರ:

By Kannadaprabha NewsFirst Published Apr 4, 2023, 7:46 AM IST
Highlights

ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜೂಗೌಡರ ವಿರುದ್ಧದ ಅಲೆ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಎಂಬ ಮಾತುಗಳಿವೆ. ಒಂದಿಷ್ಟುಹಿಂಬಾಲಕ ‘ಕಂಟ್ರಾಕ್ಟರು’ಗಳೇ ಶಾಸಕರಂತೆ ವರ್ತಿಸುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಸುರಪುರ ಕದನ

ಆನಂದ್‌ ಎಂ. ಸೌದಿ

ರಾಯಚೂರು (ಏ.4) : ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ, ಪರಿಶಿಷ್ಟಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರ ಸುರಪುರ. 2004ರಲ್ಲಿ ಕನ್ನಡನಾಡು ಪಕ್ಷದಿಂದ ಗೆದ್ದ ಏಕೈಕ ಶಾಸಕ ನರಸಿಂಹನಾಯಕ್‌ (ರಾಜೂಗೌಡ), ಈಗಿಲ್ಲಿ ಬಿಜೆಪಿಯ ಹಾಲಿ ಶಾಸಕರು. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ, ಸದ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾಗಿರುವ ರಾಜೂಗೌಡರು ಮತ್ತೆ ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ, ಖರ್ಗೆ ಆಪ್ತವಲಯದ ರಾಜಾ ವೆಂಕಟಪ್ಪ ನಾಯಕ್‌ಗೆ ಟಿಕೆಟ್‌ ಘೋಷಣೆಯಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ (BJP-Congress)ಅಭ್ಯರ್ಥಿಗಳ ನಡುವೆಯೇ ನೇರ ಕದನ ಏರ್ಪಡುವ ಸಾಧ್ಯತೆಯಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ್‌(Raja Venkatappa nayak) ವಿರುದ್ಧ ಸುಮಾರು 20 ಸಾವಿರ ಮತಗಳ ಅಂತರದಿಂದ ಬಿಜೆಪಿಯ ನರಸಿಂಹ ನಾಯಕ್‌ (ರಾಜೂಗೌಡ) (Rajugowda)ಗೆಲುವು ಕಂಡಿದ್ದರು.

 

ಸುರಪುರ ಅಭಿವೃದ್ಧಿಗೆ ಬೆಜೆಪಿ ಬೆಂಬಲಿಸಿ: ಶಾಸಕ ರಾಜೂಗೌಡ

ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜೂಗೌಡರ ವಿರುದ್ಧದ ಅಲೆ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಎಂಬ ಮಾತುಗಳಿವೆ. ಒಂದಿಷ್ಟುಹಿಂಬಾಲಕ ‘ಕಂಟ್ರಾಕ್ಟರು’ಗಳೇ ಶಾಸಕರಂತೆ ವರ್ತಿಸುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai), ಕಂದಾಯ ಸಚಿವ ಅಶೋಕ್‌ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಬಂದು ಇಲ್ಲಿ ಪ್ರಚಾರ ನಡೆಸಿದ್ದಾರೆ. ಆದರೂ, ಕುರುಬ ಹಾಗೂ ಲಿಂಗಾಯತ ಸಮುದಾಯದ ಬೇಗುದಿ ಶಮನಕ್ಕೆ ರಾಜೂಗೌಡರು ಹರಸಾಹಸ ಪಡಬೇಕಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಂದು ಪ್ರಚಾರ ನಡೆಸಿದರೆ ಮಾತ್ರ ಇಲ್ಲಿ ಬಿಜೆಪಿಗೆ ಅನುಕೂಲ ಎನ್ನಲಾಗುತ್ತಿದೆ. ಇಷ್ಟಾಗಿಯೂ, ಸ್ತ್ರೀಶಕ್ತಿ ಸಂಘಗಳ ಮತದಾರರನ್ನು ಬಲವಾಗಿ ನಂಬಿರುವ ರಾಜೂಗೌಡರ ಲೆಕ್ಕಾಚಾರ ನಿಗೂಢವಾಗಿಯೇ ಉಳಿದಿದೆ.

ಇನ್ನು, ಮಾಜಿ ಶಾಸಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತ ರಾಜಾ ವೆಂಕಟಪ್ಪ ನಾಯಕ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರಚಾರಕ್ಕೆ ಬಂದರೆ ಮಾತ್ರ ಸುರಪುರ ‘ಕೈ’ವಶ ಸಲೀಸು ಎನ್ನುವುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ. ಇದೇ ವೇಳೆ, ಅತೃಪ್ತ ಲಿಂಗಾಯತ ಹಾಗೂ ಕುರುಬ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಕಸರತ್ತು ನಡೆಸಿದೆ. ಜೆಡಿಎಸ್‌, ಕ್ಷೇತ್ರದಲ್ಲಿ ಅಷ್ಟೊಂದು ಪ್ರಬಲವಾಗಿಲ್ಲ.

ಕ್ಷೇತ್ರದ ಹಿನ್ನೆಲೆ:

ಪರಿಶಿಷ್ಟಪಂಗಡಕ್ಕೆ ಮೀಸಲಾಗಿರುವ ಸುರಪುರದಲ್ಲಿ 1957ರಲ್ಲಿ ಕಾಂಗ್ರೆಸ್‌ನ ಕುಮಾರನಾಯಕ ಗೆಲುವು ಸಾಧಿಸಿದ್ದರು. ಬಳಿಕ, ರಾಜಾ ಪಿಡ್ಡ ನಾಯಕ, ರಾಜಾ ಕುಮಾರ ನಾಯಕ, ಸುರಪುರ ಭಾಗದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲ್ಪಟ್ಟಿದ್ದ ರಾಜಾ ಮದನಗೋಪಾಲ ನಾಯಕರು ತಲಾ ಮೂರು ಬಾರಿ ಗೆಲುವು ಕಂಡ ಕ್ಷೇತ್ರವಿದು. ಪ್ರಸ್ತುತ ಬಿಜೆಪಿಯ ನರಸಿಂಹ ನಾಯಕ್‌ (ರಾಜೂಗೌಡ) ಇಲ್ಲಿನ ಶಾಸಕರಾಗಿದ್ದು, ಬಿಜೆಪಿ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ್‌ಗೆ ಟಿಕೆಟ್‌ ಘೋಷಣೆಯಾಗಿದೆ.

 

ಡಬಲ್‌ ಎಂಜಿನ್‌ ಸರ್ಕಾರದಿಂದ ದಾಹ ಮುಕ್ತ ರಾಜ್ಯ: ಸಚಿವ ಭೈರತಿ ಬಸವರಾಜ್

ಜಾತಿವಾರು ಲೆಕ್ಕಾಚಾರ:

ಪರಿಶಿಷ್ಟಪಂಗಡಕ್ಕೆ (ಎಸ್ಟಿ) ಮೀಸಲಾದ ಕ್ಷೇತ್ರವಿದು. ಸುಮಾರು 2.70 ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ ವಾಲ್ಮಿಕಿ ಸಮುದಾಯದವರು ಬಹುಸಂಖ್ಯಾತರು. ಜೊತೆಗೆ ಕುರುಬ, ಲಿಂಗಾಯತ ಹಾಗೂ ಅಲ್ಪಸಂಖ್ಯಾತರ ಮತಗಳು ಇಲ್ಲಿ ನಿರ್ಣಾಯಕ.

click me!