
ಕಲಬುರಗಿ : ಆರ್ಎಸ್ಎಸ್ ದೇಶದ್ರೋಹಿ ಸಂಘಟನೆಯಾಗಿದ್ದು, ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಅದರ ಮೇಲಿನ ನಿಷೇಧ ತೆಗೆದಿದ್ದೇ ದೊಡ್ಡ ತಪ್ಪಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಆರ್ಎಸ್ಎಸ್ಗೆ ನಿಷೇಧ ಹೇರುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಯಾವ ಸಂಘಟನೆ ಜಾತಿ, ಕೋಮು ಭಾವನೆಯನ್ನು ಪ್ರಚೋದಿಸುವುದೋ ಅದು ದೇಶದ್ರೋಹಿ ಸಂಘಟನೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆರ್ಎಸ್ಎಸ್ ಕಳೆದ 100 ವರ್ಷದಿಂದ ಕೋಮು ಭಾವನೆಯನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಈಗಾಗಲೇ ಮೂರು ಬಾರಿ ನಿಷೇಧ ಹೇರಲ್ಪಟ್ಟಿದ್ದ ಸಂಘಟನೆಯನ್ನು ಮತ್ತೆ ನಿಷೇಧಿಸಬೇಕು. ಅದರ ಮೇಲಿನ ಬ್ಯಾನ್ ತೆಗೆದಿದ್ದೇ ದೊಡ್ಡ ತಪ್ಪಾಗಿದೆ. ನಾವು ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ಅನ್ನು ನಿಷೇಧಿಸುತ್ತೇವೆ ಎಂದರು.
ಆರ್ಎಸ್ಎಸ್ನವರು ದೇಶಪ್ರೇಮಿಗಳಾಗಿದ್ದರೆ ರಾಷ್ಟ್ರಧ್ವಜ ಹಾರಿಸಲು 50 ವರ್ಷ ಏಕೆ ತೆಗೆದುಕೊಳ್ಳುತ್ತಿದ್ದರು? ದೇಶದ ಐಕ್ಯತೆ, ಸಾಮರಸ್ಯ ಕಾಪಾಡಲು ಈ ಸಂಘಟನೆ ಇದುವರೆಗೂ ಮಾಡಿರುವ 10 ಕೆಲಸಗಳನ್ನು ಪಟ್ಟಿ ಮಾಡಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಇದೇ ವೇಳೆ, ಬಿಜೆಪಿ ವಿರುದ್ಧವೂ ಹರಿಹಾಯ್ದ ಸಚಿವರು, ಬಿಜೆಪಿಯವರು ಆರ್ಎಸ್ಎಸ್ನ ಚೇಲಾಗಳು ಎಂದು ತಿವಿದರು.
ಪ್ರಿಯಾಂಕ್ ಖರ್ಗೆ ಹೇಳಿಕೆ ಭಾರೀ ಚರ್ಚೆ: ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಲಾಗುವುದು ಎಂದು ಕರ್ನಾಟಕ ಸರ್ಕಾರದ ಸಚಿವ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವಿರುದ್ಧದ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಸಂತ ಸಮುದಾಯದಿಂದ ಮೊದಲ ಪ್ರತಿಕ್ರಿಯೆಯಾಗಿ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.
ಇದು ಸನಾತನ ಧರ್ಮದ ವಿಷಯವಲ್ಲ:
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಧೀರೇಂದ್ರ ಶಾಸ್ತ್ರಿ, ಇದು ರಾಜಕೀಯ ಪಕ್ಷಗಳ ವೈಯಕ್ತಿಕ ಕಾರ್ಯಸೂಚಿಯಾಗಿದ್ದು, ಇದಕ್ಕೂ ಸನಾತನ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ನಾವು ಧರ್ಮ ಮತ್ತು ಸನಾತನದ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ ಎಂದು ಧೀರೇಂದ್ರ ಶಾಸ್ತ್ರಿ ಸ್ಪಷ್ಟಪಡಿಸಿದರು.
ಆರೆಸ್ಸೆಸ್ ಕಾರ್ಯಕ್ಕೆ ಮೆಚ್ಚುಗೆ:
ಧೀರೇಂದ್ರ ಶಾಸ್ತ್ರಿ ಆರ್ಎಸ್ಎಸ್ನ ಕೆಲಸವನ್ನು ಬಹಿರಂಗವಾಗಿ ಶ್ಲಾಘಿಸಿದರು ಮತ್ತು 'ಗ್ರಾಮಗಳಲ್ಲಿ ಮತಾಂತರವನ್ನು ನಿಗ್ರಹಿಸಿದ್ದರೆ, ಅದಕ್ಕೆ ದೊಡ್ಡ ಕೀರ್ತಿ ಆರ್ಎಸ್ಎಸ್ಗೆ ಸಲ್ಲುತ್ತದೆ' ಎಂದು ಹೇಳಿದರು. ಹಿಂದೂ ಧರ್ಮವನ್ನು ರಕ್ಷಿಸಲು ಸಂಘದ ಕಾರ್ಯಕರ್ತರು ಪ್ರತಿ ಹಳ್ಳಿಯಲ್ಲಿಯೂ ಕೆಲಸ ಮಾಡಿರುವ ರೀತಿ ಅದ್ಭುತವಾಗಿದೆ ಎಂದು ಅವರು ಹೇಳಿದರು. 'ಅವರಿಗೆ ಎಷ್ಟೇ ಹೊಗಳಿದರೂ ಸಾಲದು' ಎಂದು ಅವರು ಹೇಳಿದರು.
ಆರ್ಎಸ್ಎಸ್ ದೇಶವನ್ನು ವಿಭಜಿಸುತ್ತಿದೆ:ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ವಿರುದ್ಧ ಕಟುವಾದ ಆರೋಪಗಳನ್ನು ಮಾಡಿದ್ದಾರೆ. ದೇಶದಲ್ಲಿ ದ್ವೇಷವನ್ನು ಹರಡುವವರು, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರು ಆರ್ಎಸ್ಎಸ್ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾನೂನು ಪ್ರಕ್ರಿಯೆಯಡಿ ಆರ್ಎಸ್ಎಸ್ ಅನ್ನು ನಿಷೇಧಿಸಲಾಗುವುದು ಎಂದು ಘೋಷಿಸಿದ್ದರು. ಆರ್ಎಸ್ಎಸ್ ಕೋಮು ಹಿಂಸಾಚಾರವನ್ನು ಉತ್ತೇಜಿಸುವ, ದ್ವೇಷ ಭಾಷಣ ಮಾಡುವ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಸಂಘಟನೆ ಎಂದು ಅವರು ಕರೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.