ಒಡೆದು ಆಳುವ ನೀತಿಯೇ ಕಾಂಗ್ರೆಸ್‌ ಸಂಸ್ಕೃತಿ: ಪ್ರಮೋದ್ ಮುತಾಲಿಕ್ ಆಕ್ರೋಶ

By Kannadaprabha NewsFirst Published Feb 2, 2024, 3:38 PM IST
Highlights

ದೇಶ ವಿಭಜನೆಯ ಹೇಳಿಕೆ ನೀಡಿದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕೇಂದ್ರ ಗೃಹ ಸಚಿವರು ದೇಶದ್ರೋಹದ ಕೇಸ್ ದಾಖಲಿಸಿ ಬಂಧಿಸಲಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ. 
 

ದಾವಣಗೆರೆ (ಫೆ.02): ದೇಶ ವಿಭಜನೆಯ ಹೇಳಿಕೆ ನೀಡಿದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕೇಂದ್ರ ಗೃಹ ಸಚಿವರು ದೇಶದ್ರೋಹದ ಕೇಸ್ ದಾಖಲಿಸಿ ಬಂಧಿಸಲಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶವನ್ನು ಇಬ್ಭಾಗ ಮಾಡಿ ಪಾಕಿಸ್ತಾನ ಹುಟ್ಟು ಹಾಕಿದ್ದೇ ಕಾಂಗ್ರೆಸ್‌. ಈಗ ನಿಮಗೆ ತಾಕತ್ತಿದ್ದರೆ ದೇಶವನ್ನು ಇಬ್ಭಾಗ ಮಾಡಿ, ನೋಡೋಣ. ದೇಶ ವಿಭಜನೆಯು ದೇಶದ್ರೋಹದ ಮಾತಾಗುತ್ತದೆ. ತಕ್ಷಣವೇ ಡಿ.ಕೆ.ಸುರೇಶ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಲಿ ಎಂದರು. ಬಾಂಗ್ಲಾ ಮತ್ತು ಪಾಕಿಸ್ತಾನವನ್ನು ವಿಭಜಿಸಿ, ಅದೆಷ್ಟು ಅನುಭವಿಸುತ್ತಿದ್ದೇವೆಂಬುದು ಎಲ್ಲರಿಗೂ ಗೊತ್ತಿದೆ. 

ಅವುಗಳ ವಾಪಸ್‌ ಪಡೆಯುವ ಮಾನಸಿಕತೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದ್ದರೆ. ಸಂಸದ ಡಿ.ಕೆ.ಸುರೇಶ್‌ ತಮ್ಮ ಹೇಳಿಕೆ ಹಿಂಪಡೆದು, ದೇಶದ ಜನರಲ್ಲಿ ಕ್ಷಮೆಯಾಚಿಲಿ ಎಂದು ತಾಕೀತು ಮಾಡಿದರು. ಕಾಂಗ್ರೆಸ್ಸಿನವರಿಗೆ ಒಡೆಯುವುದೇ ಕೆಲಸವಾಗಿದೆ. ಇದು ಕಾಂಗ್ರೆಸ್ಸಿನ ವಿಕೃತ ಸಂಸ್ಕತಿಯಾಗಿದೆ. ಓರ್ವ ಸಂಸದನಾಗಿ, ಜವಾಬ್ದಾರಿಯುತ ವ್ಯಕ್ತಿಯಾಗಿ ಡಿ.ಕೆ.ಸುರೇಶ ಹೀಗೆಲ್ಲಾ ಮಾತನಾಡಬಾರದು. ಮತಕ್ಕಾಗಿ ರಾಜ್ಯವನ್ನು ಒಡೆದ ಕಾಂಗ್ರೆಸ್‌ನವರು ಜಾತಿ ಜಾತಿಗಳ ಒಡೆಯುತ್ತಿದ್ದಾರೆ. ಬ್ರಿಟಿಷರಂತೆ ಒಡೆದು ಆಳುವ ನೀತಿ ಕಾಂಗ್ರೆಸ್ಸಿನದ್ದಾಗಿದೆ. ಬ್ರಿಟಿಷರ ನೀತಿಯನ್ನೇ ಕಾಂಗ್ರೆಸ್ಸಿನವರು ಮುಂದುವರಿಸುತ್ತಿದ್ದಾರೆ. ಅದೇ ಈಗ ಡಿಕೆಸು ಬಾಯಲ್ಲಿ ಬಂದಿದೆ ಎಂದು ಹರಿಹಾಯ್ದರು.

ಲೋಕಸಭೆ ಚುನಾವಣೆಗೆ ಸಿದ್ದೇಶ್ವರೇ ಬಿಜೆಪಿ ಅಭ್ಯರ್ಥಿ: ಮಾಜಿ ಶಾಸಕ ಎಸ್.ವಿ.ರಾಮಚಂದ್ರ

ದೇಶ‍ ಜೋಡಿಸುವುದನ್ನು ಬಿಟ್ಟು, ಉತ್ತರ ಭಾರತ ಮತ್ತು ದಕ್ಷಿಣ ಭಾರತವೆಂದು ಒಡೆಯಲು ಕಾಂಗ್ರೆಸ್‌ನವರು ಹೊರಟಂತಿದೆ. ದೇಶವನ್ನು ಒಡೆಯುವ ಮಾತುಗಳನ್ನಾಡಿದ ಸಂಸದ ಡಿ.ಕೆ.ಸುರೇಶರನ್ನು ಆ ಕ್ಷೇತ್ರದ ಜನರು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು. ಸಾವಿರಾರು ವರ್ಷದಿಂದಲೂ ಹಿಂದು ಆಚಾರ, ವಿಚಾರ ನಂಬಿಕೊಂಡು ಬಂದಿದ್ದೇವೆ. ಹನುಮ ಧ್ವಜವು ಯಾವುದೋ ಪಕ್ಷದ್ದಲ್ಲ. ಅದು ಧರ್ಮಧ್ವಜ. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಧ್ವಜದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಕಾಶ್ಮೀರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಉಗ್ರರು ದೇಶ ವಾಸಿಗಳಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾಗ ಕೈಲಾಗದವರಂತೆ ಸುಮ್ಮನಿದ್ದ ರಣಹೇಡಿಗಳು ಕಾಂಗ್ರೆಸ್‌ನ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಾಮಸೇನೆಯ ಮಣಿಕಂಠ ಸರ್ಕಾರ, ಪರಶುರಾಮ ನಡುಮನಿ, ಸಾಗರ್ ಇತರರಿದ್ದರು.

ಜ್ಞಾನವಾಪಿ ಹಿಂದು ಮಂದಿರ ಹೊರತು, ಮಸೀದಿಯಲ್ಲ: ಜ್ಞಾನವಾಪಿ ವಿಚಾರದಲ್ಲಿ ನ್ಯಾಯಾಲಯವು ಹಿಂದುಗಳ ಪರ ತೀರ್ಪು ನೀಡಿರುವುದು ಸಂತೋಷದ ಸಂಗತಿ. ಆದರೆ, ಇದೇ ಅಂತಿಮ ಜಯವಲ್ಲ. 1993ರ ಮೊದಲು ಅಲ್ಲಿ ನಿತ್ಯವೂ ಪೂಜೆ ನಡೆಯುತ್ತಿತ್ತು. ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆ, ಧಾರ್ಮಿಕ ಕಾರ್ಯ ನಿಲ್ಲಿಸುವಂತೆ ಮಾಡಿದ್ದರು. ನೂರಕ್ಕೆ ನೂರು ಅಲ್ಲಿ ಇರುವುದು ಹಿಂದು ಮಂದಿರವೇ ಹೊರತು, ಮಸೀದಿಯಲ್ಲ. ಹಾಗಾಗಿ ಸೌಹಾರ್ದತೆಯಿಂದ ಮಂದಿರವನ್ನು ಬಿಟ್ಟು ಕೊಡುವಂತೆ ಮುಸ್ಲಿಂ ಸಮಾಜಕ್ಕೆ ಹೇಳುತ್ತಿದ್ದೇವೆ. ಅದಕ್ಕಾಗಿ ಸಂಘರ್ಷ ಆಗುವುದು ಬೇಡ. ಸಂಘರ್ಷವೇ ಬೇಕಿದ್ದರೆ ನಮ್ಮ 30 ಸಾವಿರ ದೇವಸ್ಥಾನಗಳ ಹಿಂಪಡೆಯಲು ನಾವು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಮುತಾಲಿಕ್‌ ಎಚ್ಚರಿಸಿದರು.

ಇಂದಲ್ಲ ನಾಳೆ ಸಿದ್ದರಾಮಯ್ಯ ಕೂಡ ಬಿಜೆಪಿಗೆ ಬರ್ತಾರೆ: ಕೆ.ಎಸ್.ಈಶ್ವರಪ್ಪ

ಮೋದಿ ಗೆಲ್ಲಿಸಿ, ಭಾರತ ಉಳಿಸಿ ಅಭಿಯಾನ: ಲೋಕಸಭೆ ಚುನಾವಣೆಗೆ ರಾಜ್ಯದ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಲ್ಲ. ಇದು ನಮಗೆ ಚುನಾವಣೆ ಮಾಡುವ ಸಮಯವಂತೂ ಅಲ್ಲ. ನರೇಂದ್ರ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಅಭಿಯಾನ ಮಾಡುತ್ತೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನರೇಂದ್ರ ಮೋದಿ ಗೆಲ್ಲಿಸಿ, ಮತ್ತೊಮ್ಮೆ ಪ್ರಧಾನಿಯಾಗಿಸಲು ಮೋದಿಗೆ ಬೆಂಬಲಿಸಿ, ಅಭಿಯಾನ ಮಾಡುತ್ತೇವೆ.

click me!