ತಪ್ಪು ಮಾಡಿದ್ದು ಪ್ರಜ್ವಲ್ ರೇವಣ್ಣ, ಡಿಕೆಶಿ ವಿರುದ್ಧ ಪ್ರತಿಭಟನೆ ಯಾಕೆ? ಎಚ್‌ಡಿಕೆ ವಿರುದ್ಧ ಚಲುವರಾಯಸ್ವಾಮಿ ಕಿಡಿ

By Ravi JanekalFirst Published May 9, 2024, 5:13 PM IST
Highlights

ರಾಜ್ಯದ ಮಹಿಳೆ ಮಾನ ತೆಗೆದವರು ಯಾರು? ಈ ಘಟನೆ ನಡೆದಿರುವುದಕ್ಕೆ ಯಾರ ಕುಟುಂಬ ಕಾರಣ? ಯಾವ ಸಾಧನೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಮಂಡ್ಯ (ಮೇ.9): ರಾಜ್ಯದ ಮಹಿಳೆ ಮಾನ ತೆಗೆದವರು ಯಾರು? ಈ ಘಟನೆ ನಡೆದಿರುವುದಕ್ಕೆ ಯಾರ ಕುಟುಂಬ ಕಾರಣ? ಯಾವ ಸಾಧನೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ ಕೈವಾಡ ಇದೆ ಎಂದು ಆರೋಪಿಸಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ತಮ್ಮ ಮನೆ ಮಗನೇ ತಪ್ಪು ಮಾಡಿದ್ರು ಕಾಂಗ್ರೆಸ್, ಡಿಕೆ ಶಿವಕುಮಾರ ವಿರುದ್ಧ ಪ್ರತಿಭಟನೆ ಯಾಕೆ? ತಮ್ಮ ಹುಡುಗ ಮಾಡಿದ್ದು ಸರಿಯಿದೆ ಅನ್ನುವ ಸಂತೋಷಕ್ಕಾ? ಇಷ್ಟೊಂದು ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಪಕ್ಕದ ಮನೆ ಮದುವೆಗೆ ಹೋಗಲು ಯೋಚಿಸುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡಲಾಗದ ಪರಿಸ್ಥಿತಿ ಬಂದಿದೆ. ಒಬ್ಬ ಮಾಜಿ ಮುಖ್ಯಮಂತ್ರಿಯಾದರೂ ಹಾದಿ ಬೀದಿ ರಂಪಾಟ ಮಾಡ್ತಿರೋದು ಎಷ್ಟು ಸರಿ? ಇದರ ಬಗ್ಗೆ ಮಾತನಾಡೋದಕ್ಕೆ ನಮಗೇ ಮುಜುಗರ ಆಗಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದೇವೆ ಎಂದರು.

ಲಷ್ಕರ್ ಮೊಹಲ್ಲಾದಲ್ಲಿ ಡಬಲ್ ಮರ್ಡರ್ ಕೇಸ್; ಶಿವಮೊಗ್ಗ ಪೊಲೀಸರ ನಡೆ ಬಗ್ಗೆ ಆರಗ ಜ್ಞಾನೇಂದ್ರ ಕಿಡಿ

ಇನ್ನು ರೇವಣ್ಣ ಕುಟುಂಬ, ನನ್ನ ಕುಟುಂಬ ಬೇರೆ ಬೇರೆ ಎಂಬ ಎಚ್‌ಡಿ ಕುಮಾರಸ್ವಾಮಿ ಹೇಳಿರುವ ವಿಚಾರ ಪ್ರಸ್ತಾಪಿಸಿದ ಸಚಿವರು, ಹೌದಾ ಹಾಗಾದರೆ ಈಗ ಯಾರ ಪರ ಪ್ರತಿಭಟನೆ ಮಾಡುತ್ತಿದ್ದಾರೆ? ಸಂತ್ರಸ್ತ ಹೆಣ್ಣು ಮಕ್ಕಳ ಬಗ್ಗೆ ಅನುಕಂಪ ತೋರಲಿಲ್ಲ, ಅವರಲ್ಲಿ ಕ್ಷಮೆ ಕೇಳಲಿಲ್ಲ, ಅನ್ಯಾಯ ಆದವರಿಗೆ ನಿಮ್ಮ ಪರ ಇದ್ದೇವೆ ಎನ್ನಲಿಲ್ಲ. ಹೆಣ್ಣು ಮಕ್ಕಳ ಜೀವನ ಹಾಳು ಮಾಡಿರುವ ಪ್ರಜ್ವಲ್‌ನ ಕರೆಸುವ ಜವಾಬ್ದಾರಿ ಯಾರದ್ದು? ಆರೋಪಿ ಹೋದ್ರೆ ಅವರಪ್ಪ, ಅಣ್ಣನ್ನ ಕರೆಸಿ ಕೂರಿಸ್ತೀರ? ಕುಮಾರಸ್ವಾಮಿಯೇ ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್‌ನ ಕರೆಸಬೇಕಿತ್ತಲ್ಲ? ಆರೋಪಿ ಪ್ರಜ್ವಲ್ ಕುಮಾರಸ್ವಾಮಿಯ ಅಣ್ಣನ ಮಗ ತಾನೇ? ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು. ರಾಜ್ಯದ ಉಪಮುಖ್ಯಮಂತ್ರಿಗಳು. ಅವರ ಬಳಿ ಸಂತ್ರಸ್ತರು, ಸಂತ್ರಸ್ತರ ಪರ ಇರುವವರು ಭೇಟಿ ಮಾಡಿ ಮಾಹಿತಿ ನೀಡಿದ್ರೆ, ಚರ್ಚೆ ಮಾಡಿದ್ರೆ ತಪ್ಪೇನೂ? ಚರ್ಚೆ ಮಾಡೋದು ಅಪರಾಧನಾ? ತನಿಖೆ ಆಗೋವರೆಗೂ ಕಾಯುವ ತಾಳ್ಮೆ ಜೆಡಿಎಸ್ ನವರಿಗೆ ಇಲ್ಲ. ರಾಜ್ಯದ ಹಲವು ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿದ್ರೆ ಅದು ಕರ್ನಾಟಕದ ತನಿಖೆ ಸಂಸ್ಥೆಯಿಂದ ಮಾತ್ರ. ಸಿಬಿಐ ಮಾಡಿದ ತನಿಖೆಗಳೆಲ್ಲ ಕ್ಲೀನ್ ಚೀಟ್ ಆಗಿವೆ, ಇಲ್ಲ ಮೂಲೆ ಸೇರಿವೆ. ಈ ಹಿಂದೆ ಕುಮಾರಸ್ವಾಮಿಯೇ ರಾಜ್ಯದ ಪೊಲೀಸರನ್ನ ಸಮರ್ಥರು, ದಕ್ಷರು ಎಂದಿದ್ರು. ಈಗ್ಯಾಕೆ ಸಿಬಿಐಗೆ ಕೊಡಬೇಕು ಅಂತಿದ್ದಾರೆ ಕುಮಾರಸ್ವಾಮಿಗೆ ಅಭದ್ರತೆ ಕಾಡ್ತಿದೆ. ಹೀಗಾಗಿ ಶಿವಕುಮಾರ ಅವರನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ತನಿಖೆ ಹಾದಿ ತಪ್ಪಿಸಲು ಕುತಂತ್ರ, ಸಿದ್ದು, ಡಿಕೆಶಿ

ಕುಮಾರಸ್ವಾಮಿ ಈಗ ಚಲುವರಾಯಸ್ವಾಮಿ ಯಾವನ್ರೀ ಅಂತಾರೆ. ಇದಕ್ಕೆ ಏನ್ ಮಾಡೋಕೆ ಆಗುತ್ತೆ. ಡಿಕೆ ಶಿವಕುಮಾರ ಒಕ್ಕಲಿಗ ಸಮುದಾಯದವರು. ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. 136 ಸೀಟು ಗೆಲ್ಲಿಸಿ ಸರ್ಕಾರ ತಂದಿದ್ದಾರೆ. ಇಲ್ಲಿವರೆಗೆ ದೇವೇಗೌಡ್ರು ಜೆಡಿಎಸ್ ಪಕ್ಷವನ್ನ ಉಳಿಸಿ, ಬೆಳೆಸಿಕೊಂಡು ಬಂದಿದ್ರು. ಅದನ್ನ ಮುಂದುರೆಸಲು ಆಗದೆ ಬಿಜೆಪಿ ಜೊತೆ ಮೈತ್ರಿಯಾಗಿದ್ದಾರೆ. ಮೈತ್ರಿಯಲ್ಲಿ ಈಗ ಪ್ರಜ್ವಲ್ ವಿಚಾರದಿಂದ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಡಿಕೆ ಶಿವಕುಮಾರ ಮೇಲೆ ಆರೋಪ ಮಾಡೋದ್ರಿಂದ ಈ ವಿಷಯವನ್ನು ಡೈವರ್ಟ್ ಮಾಡಬಹುದು ಎಂಬ ಪ್ಲಾನ್ ಇರಬೇಕು ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

click me!