
ಗದಗ (ಮಾ.17) : ರಾಜಕಾರಣ ಇಂದು ಉದ್ಯೋಗವಾಗಿ ಪರಿವರ್ತನೆಯಾಗುತ್ತಿದ್ದು ಇದು ಬೇಸರದ ಸಂಗತಿಯಾಗಿದೆ. ಹೊಸದಾಗಿ ರಾಜಕೀಯಕ್ಕೆ ಬರುವ ಯುವಕರು ತತ್ವ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ(Basavaraj horatti)ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಅವರ 98ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜಕಾರಣದಲ್ಲಿನ ಬೆಳವಣಿಗೆ ಕುರಿತು ಕಳವಳ ವ್ಯಕ್ತಪಡಿಸಿದರು.
ಸಭಾಪತಿಯಾಗಿ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ: ಬಸವರಾಜ ಹೊರಟ್ಟಿ
ದಿ. ಕೆ.ಎಚ್. ಪಾಟೀಲ(KH Patil) ಅವಧಿಯ ರಾಜಕಾರಣ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹೊರಟ್ಟಿ, ಅವರ ಮಾತು ಮತ್ತು ಕೃತಿಗಳು ಇಂದಿಗೂ ಮಾದರಿ. ಅವರ ಮುಂದೆ ಸುಳ್ಳು ಹೇಳಲು ಸಾಧ್ಯವೇ ಇರಲಿಲ್ಲ. ರಾಜ್ಯದಲ್ಲಿ ಬಹುದೊಡ್ಡ ಹೋರಾಟಗಾರರಾಗಿದ್ದರು. ರಾಜಕಾರಣಕ್ಕೆ, ಸ್ನೇಹಕ್ಕೆ ಎಂದಿಗೂ ತೊಡಕು ತಂದು ಕೊಂಡವರಲ್ಲ ಎಂದರು.
ಕಾಂಗ್ರೆಸ್ ಮುಖಂಡ ಎಚ್. ಆಂಜನೇಯ ಮಾತನಾಡಿ, ಎಚ್.ಕೆ. ಪಾಟೀಲರು ಮುಂದಿನ ದಿನಗಳಲ್ಲಿ ಸಿಎಂ ಆಗಬೇಕು ಎನ್ನುವುದು ನನ್ನ ಆಶಯವಾಗಿದೆ. ಕೆ.ಎಚ್. ಪಾಟೀಲರಿಗೆ ಸಿಗದೇ ಇರುವಂತಹ ಅವಕಾಶ ಎಚ್. ಕೆ. ಪಾಟೀಲರಿಗೆ ಸಿಗಲಿ. ಇಂದು ರಾಜಕೀಯ ಕಲುಷಿತವಾಗಿದೆ. ಪ್ರಾಮಾಣಿಕ ರಾಜಕೀಯ ಮಾಯವಾಗಿದೆ, ಕೆ.ಎಚ್. ಪಾಟೀಲರು ಹಾಕಿಕೊಟ್ಟತತ್ವ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲರು ದಿಟ್ಟ, ನಿರ್ಭಿಡೆಯ ನಾಯಕರಾಗಿದ್ದರು. ಅವರಂತವರನ್ನು ಈಗಲೂ ನೋಡಲು ಸಾಧ್ಯವಿಲ್ಲ, ನೇರವಾಗಿ ಮಾತನಾಡುವ ಅವರನ್ನು ಹಲವಾರು ಜನರು ವಿರೋಧಿಸುತ್ತಿದ್ದರು ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಶಾಸಕ ಎಚ್.ಕೆ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ . 5 ಲಕ್ಷ ನಗದು ಸಹಿತ ಕೆ.ಎಚ್. ಪಾಟೀಲ ಪ್ರಶಸ್ತಿಯನ್ನು ನೇತ್ರತಜ್ಞ ಎಂ.ಎಂ. ಜೋಶಿ ಅವರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಚ್.ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ, ಎ.ಎಂ. ಹಿಂಡಸಗೇರಿ, ಎಸ್.ಎಸ್. ಪಾಟೀಲ, ಪ್ರಮೋದ ಹೆಗಡೆ, ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟಿಮನಿ, ಜಿ.ಎಸ್. ಗಡ್ಡದೇವರಮಠ, ವಾಸಣ್ಣ ಕುರುಡಗಿ, ಕೊಟ್ರಪ್ಪ ಬಸೇಗಣ್ಣಿ, ಸಿದ್ದು ಪಾಟೀಲ, ವಿದ್ಯಾಧರ ದೊಡ್ಡಮನಿ, ಹುಮಾಯೂನ್ ಮಾಗಡಿ, ಸಚಿನ್ ಪಾಟೀಲ ಹಲವರು ಇದ್ದರು.
ಧಾರವಾಡಕ್ಕೆ ವಿಜ್ಞಾನ ಕೇಂದ್ರ ಬಂದಿದ್ದು ಸಾರ್ಥಕ : ಬಸವರಾಜ ಹೊರಟ್ಟಿ
ನಾವೆಲ್ಲಾ ಕೆ.ಎಚ್. ಪಾಟೀಲ ಅವರ ಗರಡಿಯಲ್ಲಿ ಬೆಳೆದವರು, ಅಂದು ಯುವ ನಾಯಕರಾಗಿದ್ದೆವು. ದೇವರಾಜ ಅರಸ ಬಲಗೈಯಾಗಿ ಕೆ.ಎಚ್. ಪಾಟೀಲ ಕೆಲಸ ಮಾಡಿದ್ದರು, ಹೊಂದಾಣಿಕೆ ಮಾಡಿಕೊಳ್ಳದ ನಾಯಕರಾಗಿದ್ದರು.
-ಎಚ್.ಎಂ. ರೇವಣ್ಣ ಮಾಜಿ ಶಾಸಕ
ನಾನು ಯುವಕನಾಗಿದ್ದೆ. ಕೆ.ಎಚ್. ಪಾಟೀಲರು ನನಗೆ ರಾಜಕಾರಣದ ಮಾರ್ಗದರ್ಶನ ಮಾಡುತ್ತಿದ್ದು. ಬೈದು ಬುದ್ಧಿ ಹೇಳುತ್ತಿದ್ದರು. ಅವರೇ ಕರೆದು ಕೆಪಿಸಿಸಿಯಲ್ಲಿ ಒಂದು ಮಹತ್ವದ ಸ್ಥಾನ ಕೊಟ್ಟರು.
-ಕೆ.ಎಚ್. ಮುನಿಯಪ್ಪ ಕೇಂದ್ರದ ಮಾಜಿ ಸಚಿವ
ಎಂಎಂ ಜೋಶಿ ಅವರ ಕಣ್ಣಿನ ಸೇವೆ ಅನನ್ಯ. ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಇದಕ್ಕೆ ಖಾಸಗಿ ವೈದ್ಯರ ಶ್ರಮದಾನವು ಕಾರಣ. ಕಾಯಕವೇ ಕೈಲಾಸ ಎಂದು ಜೋಶಿ ಕಾರ್ಯ ನಿರ್ವಹಿಸಿದ್ದಾರೆ.
-ಬಿ.ಕೆ. ಹರಿಪ್ರಸಾದ ವಿಪಕ್ಷ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.