
ಪಟನಾ: ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ರಾಜಕೀಯ ಪಕ್ಷಗಳು ಆಕರ್ಷಕ ಯೋಜನೆಗಳು, ಉಚಿತ ಕೊಡುಗೆಗಳ ಘೋಷಣೆ ಮೂಲಕ ಭರದಿಂದ ಸಿದ್ಧತೆ ನಡೆಸಿವೆ. ಇದೀಗ ಪೋಸ್ಟರ್ಗಳು, ಕರಪತ್ರಗಳನ್ನು ಹಿಂದಿಕ್ಕಿ, ಮತದಾರರನ್ನು ಸೆಳೆಯಲು ಎಟಿಎಂ ಕಾರ್ಡ್ ಮತ್ತು ಚೆಕ್ಬುಕ್ ಮಾದರಿಯ ಪತ್ರಗಳು ಲಗ್ಗೆಯಿಟ್ಟಿವೆ.
ಜನ ಸುರಾಜ್ ಪಕ್ಷದ ನೇತಾರ ಪ್ರಶಾಂತ್ ಕಿಶೋರ್ ಎಟಿಎಂ ಕಾರ್ಡ್ ಹೋಲುವ ‘ಪರಿವಾರ ಲಾಭ ಕಾರ್ಡ್’ ಅನ್ನು ಬಿಡುಗಡೆ ಮಾಡಿದ್ದಾರೆ. ಯುವಕರಿಗೆ ಉದ್ಯೋಗ, ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಪಿಂಚಣಿ, ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, 15ನೇ ವಯಸ್ಸಿನವರೆಗೆ ಉಚಿತ ಶಿಕ್ಷಣ, ರೈತರಿಗೆ ಸಹಾಯಧನ ಮುಂತಾದ ಭರವಸೆಗಳನ್ನು ಈ ಕಾರ್ಡ್ನಲ್ಲಿ ವಿವರಿಸಲಾಗಿದೆ.
ಇತ್ತ ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಸಹ ಮತದಾರರನ್ನು ಸೆಳೆಯಲು ವಿಶೇಷ ತಂತ್ರ ಹೂಡಿದೆ. ಚೆಕ್ಬುಕ್ ಮಾದರಿಯಲ್ಲಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 25 ಲಕ್ಷ ರು.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ವಿಧವೆಯರು, ಅಂಗವಿಕಲರು ಮತ್ತು ವೃದ್ಧರಿಗೆ ಮಾಸಿಕ 1,500 ರು. ಸಹಾಯಧನ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ಗಳು, 200 ಯೂನಿಟ್ ಉಚಿತ ವಿದ್ಯುತ್, ಭೂರಹಿತ ಕುಟುಂಬಗಳಿಗೆ ನಿವೇಶನ ಮತ್ತು ಮಹಿಳೆಯರಿಗೆ ಮಾಸಿಕ 2,500 ರು. ನೀಡುವುದಾಗಿ ಭರವಸೆ ನೀಡಿದೆ. ಎರಡೂ ಪಕ್ಷಗಳು ಮನೆಮನೆಗೆ ಕಾರ್ಡ್ಗಳನ್ನು ತಲುಪಿಸುತ್ತಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆಶ್ವಾಸನೆಗಳನ್ನು ಈಡೇರಿಸುವ ಭರವಸೆ ನೀಡಿವೆ.
ಮತ್ತೊಂದೆಡೆ ಜೆಡಿಯು, ಬಿಜೆಪಿ ನೇತೃತ್ವದ ನಿತೀಶ್ ಕುಮಾರ್ ಸರ್ಕಾರ ಕಳೆದ 2-3 ತಿಂಗಳಿನಿಂದಲೇ ಹೊಸ ಹೊಸ ಗ್ಯಾರಂಟಿ ಜಾರಿಯ, ಗೆದ್ದುಬಂದರೆ ಮತ್ತಷ್ಟು ಗ್ಯಾರಂಟಿ ಜಾರಿಯ ಭರವಸೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.