
ತೀರ್ಥಹಳ್ಳಿ (ಮಾ.10): 2024ರೊಳಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ ಆಶ್ವಾಸನೆಯಂತೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಆದ್ಯತೆಯನ್ನು ನೀಡಿದೆ. ಜನಪರವಾದ ಈ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ತಾಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸರ ಗ್ರಾಮದಲ್ಲಿ ₹68 ಲಕ್ಷ ವೆಚ್ಚದ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಅಶುದ್ಧವಾದ ಕುಡಿಯುವ ನೀರಿನಿಂದಾಗಿ ಶೇ.80 ಭಾಗ ಕಾಯಿಲೆಗಳು ಜನರನ್ನು ಬಾದಿಸುತ್ತಿವೆ. ಈ ಸಮಸ್ಯೆ ನಿವಾರಿಸಲು ತಾಲೂಕಿನ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ₹500 ಕೋಟಿ ಅನುದಾನ ನೀಡಿದೆ ಎಂದರು.
ಈ ಹಿಂದೆ ಕುಡಿಯಲು ಗದ್ದೆಯಲ್ಲಿರುವ ಗುಮ್ಮಿ ಕೆರೆಯ ನೀರನ್ನು ಬಳಸಲಾಗುತ್ತಿತ್ತು. ಆದರೆ, ಈಗ ಜನರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧೀಕೃತ ನೀರು ಅನಿವಾರ್ಯವಾಗಿದೆ. ವಿದ್ಯುತ್ ಮತ್ತು ಕಾರ್ಮಿಕರ ಸಮಸ್ಯೆಯಿಂದ ನೀರನ್ನು ಒದಗಿಸುವ ಸಮಸ್ಯೆಯೂ ಎದುರಾಗಿದೆ. ಈ ಸಲುವಾಗಿ ತಾಲೂಕಿನ 36 ಗ್ರಾಪಂಗಳಿಗೆ ಶಾಶ್ವತವಾಗಿ ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸಲು ಬಹುಗ್ರಾಮ ಯೋಜನೆಯಡಿ ₹344 ಕೋಟಿ ಅನುದಾನ ಮಂಜೂರಾಗಿದೆ. ಜನರ ಆರೋಗ್ಯ ಸುಧಾರಿಸಿದರೆ ಜನಪ್ರತಿನಿಧಿಗಳಾದ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪವಾರ್, ಉಪಾಧ್ಯಕ್ಷ ಜಯಣ್ಣ, ಸದಸ್ಯ ಗುರುಮೂರ್ತಿ, ತಾಪಂ ಮಾಜಿ ಸದಸ್ಯರಾದ ಟಿ.ಮಂಜುನಾಥ್ ಹಾಗೂ ಭಾರತಿ ಸುರೇಶ್, ಗಿರೀಶ್ ಭಂಡಾರಿ ಇದ್ದರು.
ತುಮಕೂರಲ್ಲಿ ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ಇಲ್ವೇನ್ರಿ?: ಸಚಿವ ರಾಮಲಿಂಗಾರೆಡ್ಡಿ
ಸಿದ್ಧಾಂತಕ್ಕೆ ಬದ್ಧರಾಗಿದ್ದ ಕೋಣಂದೂರು ಲಿಂಗಪ್ಪ: ರಾಜಕೀಯ ಕ್ಷೇತ್ರದಲ್ಲಿ ಸಿದ್ಧಾಂತ ಇಸಂ ಮುಂತಾದ ಎಲ್ಲ ಶಬ್ದಗಳು ಭಾಷಣಕ್ಕೆ ಸೀಮಿತವಾಗಿವೆ. ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರಂತೆ ಕೋಣಂದೂರು ಲಿಂಗಪ್ಪ ಕೂಡ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೋಣಂದೂರು ಲಿಂಗಪ್ಪ ಅಭಿನಂದನಾ ಸಮಿತಿ ವತಿಯಿಂದ ಲಿಂಗಪ್ಪ ಅವರಿಗೆ 90ನೇ ವರ್ಷದ ಅಭಿನಂದನೆ ಮತ್ತು ಸಾಹಿತಿ ಡಾ. ಜೆ.ಕೆ.ರಮೇಶ್ ಸಂಪಾದಿಸಿದ ಕೋಲಿಂ ಎಂಬ ಕೌತುಕ ಅಭಿನಂದನಾ ಗ್ರಂಥದ ದ್ವಿತೀಯ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೆಕ್ಯುಲರ್ ಎಂಬ ಪದವೇ ಮೋಸದಿಂದ ಕೂಡಿದೆ. ಜಾತಿಯೇ ಪ್ರಧಾನವಾಗಿದ್ದು, ಜಾತ್ಯತೀತತೆ ಎಂಬುದು ಈಗ ಹಳಸಲು ಪದವಾಗಿದೆ. ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಬಡವರ ಪರ ಅಭ್ಯರ್ಥಿ ಎಂಬ ಮಾತಿತ್ತು. ಪ್ರಸ್ತುತ ಚುನಾವಣೆ ಮಾಡುವ ತಾಕತ್ತು ಇದೆಯೇ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಲಿಂಗಪ್ಪ ಅವರು ಬಿಟ್ಟ ಜಾಗಕ್ಕೆ ನಾವು ಬಂದವರು. ಆ ಸಂದರ್ಭದಲ್ಲಿ ಅವರು ಆಕ್ಟೀವ್ ಆಗಿದ್ದರೆ ನಮಗೆ ಅವಕಾಶವೇ ಇರುತ್ತಿರಲಿಲ್ಲ ಎಂದೂ ಹೇಳಿದರು.
ಬಿಜೆಪಿ ಅಧಿಕಾರಾವಧಿಯಲ್ಲಿ 6 ಕಡೆ ಬಾಂಬ್ ಸ್ಫೋಟವಾಗಿದೆ: ಸಚಿವ ರಾಮಲಿಂಗಾರೆಡ್ಡಿ
ಲಿಂಗಪ್ಪ ಅವರನ್ನು ಅಭಿನಂದಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೊಳಗಾದವರ ಬಗೆಗೆ ಕಾಳಜಿಯನ್ನು ಹೊಂದಿರುವ ಶ್ರೀಯುತರು ರಾಜಕೀಯ ಕ್ಷೇತ್ರದ ಅಪ್ಪಟ ಚಿನ್ನದಂತಹ ವ್ಯಕ್ತಿಯಾಗಿದ್ದಾರೆ. ಸದನದಲ್ಲಿ ಇವರು ತಮಗೆ ಅನಿಸಿದ್ದನ್ನು ನಿರ್ಭಯವಾಗಿ ಪ್ರತಿಪಾದಿಸುತ್ತಿದ್ದ ರೀತಿ ಅನುಕರಣೀಯ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಜಾತಿ, ಹಣ ಯಾವುದರ ಪ್ರಭಾವವೂ ಇಲ್ಲದ ಅವರನ್ನು ಗೆಲ್ಲಿಸಿದ್ದ ಈ ಕ್ಷೇತ್ರದ ಮತದಾರರ ಪ್ರಭುದ್ಧತೆಯೂ ಮೆಚ್ಚುವಂತಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.