
ಹಾವೇರಿ (ಸೆ.24): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಂಗದಲ್ಲಿ ಕೆಲಸ ಮಾಡಿರುವುದರಿಂದ ಸಶಕ್ತ ಭಾರತ ಆಗಿದೆ. ಅವರ ಕೈ ಬಲ ಪಡಿಸಬೇಕು. ಪ್ರಧಾನಿಯಾಗಿ ಅವರು ಒಂದು ದಶಕ ಪೂರೈಸಿದ್ದಾರೆ. ಇನ್ನೊಂದು ದಶಕ ಪೂರೈಸಿದರೆ ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಸೇವಾ ಪಾಕ್ಷಿಕದ ಅಂಗವಾಗಿ ಏರ್ಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಪೋಟೋ ಹಾಗೂ ಬ್ಯಾನರಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ಅಪರೂಪಕ್ಕೆ ಒಬ್ಬ ದೇಶಭಕ್ತ ಸಿಕ್ಕಿದ್ದಾರೆ. ಒಬ್ಬ ದಿಟ್ಟ ನಿಲುವಿನ ನಾಯಕ ದೇಶವನ್ನು ಬಲಿಷ್ಠವಾಗಿ ಕಟ್ಟುವ ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ಇಚ್ಛಾಶಕ್ತಿಯಿಂದ ಅದಕ್ಕೆ ಬೇಕಾದ ಕಾರ್ಯಕ್ರಮ ಹಾಕಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತ ಪ್ರಪಂಚದಲ್ಲಿ ಬಲಿಷ್ಠ ಆಗಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಕಾರಣ ಆಗಿದೆ ಎಂದರು.
ಮೋದಿಯವರು ಬಾಲ್ಯದಿಂದ ಚಾರಿತ್ರ್ಯವಂತ ವ್ಯಕ್ತಿತ್ವ, ಆರ್ಎಸ್ಎಸ್ ಸ್ವಯಂ ಸೇವಕರಾಗಿ ಶಿಸ್ತು ಪಡೆದುಕೊಂಡು ಅದನ್ನು ಪ್ರಧಾನಿಯಾಗಿಯೂ ಉಳಿಸಿಕೊಂಡು ಬಂದಿದ್ದಾರೆ. ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಪ್ರಭಾವಿತರಾಗಿ ಅದರಂತೆ ನಡೆದುಕೊಂಡಿದ್ದಾರೆ. ಮೋದಿಯವರು ಪ್ರಧಾನಿ ಆಗದಿದ್ದರೆ ಏನಾಗುತ್ತಿತ್ತು. ಮೋದಿ ಪ್ರಧಾನಿ ಆಗುವ ಮೊದಲು ಬೆಂಗಳೂರು, ಮುಂಬೈನಲ್ಲಿ ತಿಂಗಳಿಗೊಮ್ಮೆ ಬಾಂಬ್ ಬ್ಕಾಸ್ಟ್ ಆಗುತ್ತಿದ್ದವು, ಜಮ್ಮು ಕಾಶ್ಮೀರ ಭಯೋತ್ಪಾದನೆ ರಾಜ್ಯವಾಗಿತ್ತು. ಪೊಲೀಸರು ರಸ್ತೆ ಮೇಲೆ ಓಡಾಡುವಂತಿರಲಿಲ್ಲ. ಮೋದಿ ಬಂದ ಮೇಲೆ ಪಾಕಿಸ್ತಾನಿಯರು ಒಳ ನುಸುಳುವುದು ನಿಂತಿದೆ. ಇದು ಮೋದಿಯವರ ದೊಡ್ಡ ಸಾಧನೆ ಎಂದರು.
ಪೆಹಲ್ಗಾಮ್ ದಾಳಿಯಾದ ಮೇಲೆ ನೂರಾರು ಭಯೋತ್ಪಾದಕರನ್ನು ನಾಶ ಮಾಡಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಟ್ಟ ನಾಯಕ ನರೇಂದ್ರ ಮೋದಿ. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಶೇ. 12ರಷ್ಟು ಹಣ ದುಬ್ಬರ ಇತ್ತು. ಎಲ್ಲ ವಸ್ತುಗಳ ಬೆಲೆ ಏರಿತ್ತು. ಪೆಟ್ರೊಲ್ ಡಿಸೇಲ್, ಹಾಲು ಬ್ರೇಡ್ ಎಲ್ಲದರ ಬೆಲೆ ಹೆಚ್ಚಳ ಆಗಿತ್ತು. ಅದನ್ನು ನಿಯಂತ್ರಿಸಲು ಜಿಎಸ್ಟಿ ತಂದು ಕ್ರಮ ಕೈಗೊಂಡರು. ದೇಶದಲ್ಲಿ 25 ಕೋಟಿ ಬಡವರನ್ನು ಮೇಲೆ ಎತ್ತುವ ಕೆಲಸ ಮಾಡಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮಾಡಿದ್ದಾರೆ. ಈಗಾಗಲೇ ಮೂರೂವರೆ ಲಕ್ಷ ಕೋಟಿಗಿಂತ ಹೆಚ್ಚು ಹಣ ರೈತರಿಗೆ ಕೊಟ್ಟಿದ್ದಾರೆ. ಕರ್ನಾಟದಲ್ಲಿ ಸುಮಾರು 64 ಲಕ್ಷ ರೈತರಿಗೆ ಹಣ ಜಮೆ ಆಗುತ್ತಿದೆ. ರೈತರಿಗೆ 5 ಲಕ್ಷದವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಬೆಳೆ ನಷ್ಟವಾದಾಗ ಬೆಂಬಲ ಬೆಲೆ ಕೊಡುವ ಕೆಲಸ ಮಾಡಿದ್ದಾರೆ.
ಜನರ ಆರೋಗ್ಯಕ್ಕಾಗಿ ಆಯುಷ್ಮಾನ ಭಾರತ ಯೋಜನೆ ತಂದು ಪ್ರತಿಯೊಬ್ಬರೂ ಆರೋಗ್ಯವಂತಾಗರಬೆಕು ಎಂದು ಮಾಡಿದ್ದಾರೆ. ಕರ್ನಾಟಕದಲ್ಲಿ 2 ಕೋಟಿ ಜನ ಇದರ ಲಾಭ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ನಾಲ್ಕು ಕೋಟಿ ಮನೆ ನಿರ್ಮಿಸಿದ್ದಾರೆ. ಜಲಜೀವನ್ ಮಿಷನ್ ಮೂಲಕ ಪ್ರತಿ ಮನೆಗೂ ನೀರು ಬರುವಂತೆ ಮಾಡಿದ್ದಾರೆ. ಹೆಣ್ಣು ಮಕ್ಕಳ ಆರೋಗ್ಯ ಹಾಳಾಗಬಾರದು ಎಂದು ಹಳ್ಳಿಗಳಿಗೂ ಅಡುಗೆ ಅನಿಲ ಕೊಟ್ಟಿದ್ದಾರೆ. ಪ್ರತಿ ಮನೆಗೆ ಸೋಲಾರ್ ವಿದ್ಯುತ್ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆಗೆ ಶೌಚಾಲಯ, ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ 80 ಕೋಟಿ ಜನರಿಗೆ ಕೊಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿ ರಾಜ್ಯ ಸರ್ಕಾರದ ಅಕ್ಕಿಯಲ್ಲ ಹೆಸರು ಮಾತ್ರ ರಾಜ್ಯ ಸರ್ಕಾರದ್ದು, ಅಕ್ಕಿ ಕೇಂದ್ರ ಸರ್ಕಾರದ್ದು ಎಂದರು. ಈ ಸಂದಂರ್ಭದಲ್ಲಿ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಗುತ್ತಲ ಪಟ್ಟಣದ ಪ್ರಮುಖರು ಇದ್ದರು.
ಜಿಎಸ್ಟಿ ಕಡಿಮೆ ಮಾಡುವ ಮುಖಾಂತರ ಗೊಬ್ಬರದ ಧಾರಣೆ, ಯಂತ್ರೋಪಕರಣ, ಟ್ರ್ಯಾಕ್ಟರ್, ರೈತರಿಗೆ ಬೇಕಾಗುವ ಎಲ್ಲ ವಸ್ತುಗಳ ಬೆಲೆ ಕಡಿಮೆ ಆಗುತ್ತವೆ. ಗೋಧಿ, ಅಕ್ಕಿ, ಮೊಸರು, ಹಾಲು, ದಿನನಿತ್ಯ ಬಳಸುವ ವಸ್ತುಗಳ ಧಾರಣೆ ಕಡಿಮೆಯಾಗುತ್ತದೆ. ನುಡಿದಂತೆ ನಡೆದಿರುವುದು ಪ್ರಧಾನಮಂತ್ರಿ ಮೋದಿಯವರು. ಹಲವಾರು ವಸ್ತುಗಳಿಗೆ ಶೂನ್ಯ ತೆರಿಗೆ ಮಾಡಿದ್ದಾರೆ. ಇನ್ನು ಕೆಲವು ವಸ್ತುಗಳಿಗೆ ಶೇ.5ರಷ್ಟು ತೆರಿಗೆ ಮಾಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ತೆರಿಗೆ ಸ್ಲ್ಯಾಬ್ 12, 18, 28 ಇತ್ತು. ಮೋದಿಯವರು ಬಡವರ ಪರವಾಗಿ ರೈತರು, ಹೆಣ್ಣುಮಕ್ಕಳ ಪರವಾಗಿ ಎಲ್ಲ ರಂಗದಲ್ಲಿ ಕೆಲಸ ಮಾಡಿರುವುದರಿಂದ ಸಶಕ್ತ ಭಾರತ ಆಗಿದೆ.
- ಬಸವರಾಜ ಬೊಮ್ಮಾಯಿ, ಸಂಸದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.