
ನವದೆಹಲಿ (ಡಿ.14): ‘ಸಂವಿಧಾನವು ಆರ್ಎಸ್ಎಸ್ನ ನಿಯಮಗಳ ಪುಸ್ತಕವಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದಿದ್ದರೆ ಈಗಾಗಲೇ ಸಂವಿಧಾನವನ್ನು ಬದಲಿಸುವ ಕೆಲಸದಲ್ಲಿ ತೊಡಗಿರುತ್ತಿತ್ತು’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ತಮ್ಮ ಮೊದಲ ಭಾಷಣದಲ್ಲೇ ಆಡಳಿತ ಪಕ್ಷದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಲೋಕಸಭೆಯಲ್ಲಿ ನಡೆದ ಸಂವಿಧಾನದ ಕುರಿತ ಚರ್ಚೆಯ ವೇಳೆ ಮಾತನಾಡಿದ ವಯನಾಡು ಸಂಸದೆ ಪ್ರಿಯಾಂಕಾ, ‘ಸಂವಿಧಾನವು ನ್ಯಾಯ, ಒಗ್ಗಟ್ಟು ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವ ಕವಚವಾಗಿದೆ. ಆದರೆ ಇದನ್ನು ಬದಲಿಸಲು ಬಿಜೆಪಿ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಪ್ರಧಾನಿಯವರು ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳುತ್ತಾರೆ. ಆದರೆ ಸಂಭಲ್ ಹಾಗೂ ಹಾಥ್ರಸ್ನಲ್ಲಿ ನ್ಯಾಯಕ್ಕಾಗಿ ಕೂಗು ಕೇಳಿಬಂದಾಗ ಅವರ ಹಣೆಯಲ್ಲಿ ಒಂದೇ ಒಂದು ನೆರಿಗೆ ಮೂಡಲಿಲ್ಲ’ ಎಂದರು.
ಅಂತೆಯೇ, ‘ಭಾರತದ ಸಂವಿಧಾನವು ಸಂಘದ ವಿಧಾನ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಂಡಿಲ್ಲ. ಸಂವಿಧಾನ ಏಕತೆಯ ಸಂದೇಶ ಸಾರಿದರೆ, ಬಿಜೆಪಿ ಮಾತ್ರ ವಿಭಜಕ ರಾಜಕೀಯದಲ್ಲಿ ತೊಡಗಿದೆ’ ಎಂದು ಕಿಡಿಕಾರಿದರು. ಕಳೆದ ಲೋಕಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಈಗಾಗಲೇ ಸಂವಿಧಾನವನ್ನು ಬದಲಿಸುವ ಕೆಲಸ್ಕಕೆ ಕೈ ಹಾಕಿರುತ್ತಿದ್ದರು ಎಂದು ಆರೋಪಿಸಿದ ಅವರು, ‘ಸತ್ಯವೇನೆಂದರೆ, ದೇಶದ ಜನ ಸಂವಿದಾನವನ್ನು ಕಾಪಿಟ್ಟುಕೊಳ್ಳುತ್ತಾರೆ ಎಂಬುದನ್ನು ಮನಗಂಡಿರುವುದರಿಂದಲೇ ಬಿಜೆಪಿ ಸಂವಿಧಾನದ ಜಪ ಮಾಡುತ್ತಿದೆ’ ಎಂದರು.
ಕೊಳವೆಬಾವಿ ಮುಚ್ಚದಿದ್ದರೆ ಶಿಕ್ಷೆ ಸೇರಿ 11 ವಿಧೇಯಕ: ಬೈಕ್, ಕಾರಿಗೆ ಹೆಚ್ಚುವರಿ ಕರ
ಈ ವೇಳೆ, ಜಾತಿ ಗಣತಿ ಹಾಗೂ ಮೀಸಲಾತಿಯ ಬಗ್ಗೆ ಮಾತನಾಡಿದ ಪ್ರಿಯಾಂಕಾ, ‘ಜನರು ಹಾಗೂ ಪ್ರತಿಪಕ್ಷಗಳೆಲ್ಲ ಜಾತಿ ಗಣತಿಗೆ ಆಗ್ರಹಿಸುತ್ತಿದ್ದರೆ, ಅವರು (ಬಿಜೆಪಿ) ಮಾತ್ರ ಮಂಗಳಸೂತ್ರ ಕಸಿಯಲಾಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದರು’ ಎಂದು ಅವರು, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಬಳಸಿದ್ದ ಮಂಗಳಸೂತ್ರ ಅಸ್ತ್ರವನ್ನು ನೆನಪಿಸಿದರು. ಜತೆಗೆ, ‘ಸರ್ಕಾರ ಲ್ಯಾಟರಲ್ ಎಂಟ್ರಿ ಹಾಗೂ ಖಾಸಗೀಕರಣದ ಮೂಲಕ ಮೀಸಲು ನೀತಿಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.