ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

Published : Mar 01, 2019, 10:19 AM IST
ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಸಾರಾಂಶ

ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ| ಕರ್ನಾಟಕದ ಅವಕಾಶವಾದಿ ಸರ್ಕಾರದಿಂದ ಜನರಿಗೆ ಬೇಸರ| ಮೈತ್ರಿ ಪಕ್ಷಗಳ ತಿಕ್ಕಾಟದಿಂದ ರೈತರಿಗೆ ತೀವ್ರ ನಿರಾಸೆ

ಬೆಂಗಳೂರು[ಮಾ.01]: ಕರ್ನಾಟಕದ ಜನರು ಅವಕಾಶವಾದಿ ರಾಜ್ಯ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಗುರುವಾರ ‘ಮೇರಾ ಬೂತ್‌ ಸಬ್‌ ಸೇ ಮಜಬೂತ್‌’ ಕಾರ್ಯಕ್ರಮದ ಅಂಗವಾಗಿ ದೆಹಲಿಯಿಂದ ವಿವಿಧ ರಾಜ್ಯಗಳ ಪಕ್ಷದ ಬೂತ್‌ ಪ್ರಮುಖರೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿ ಬಲ ಹೆಚ್ಚುವ ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡಿನ ಕೊಯಮತ್ತೂರಿನಿಂದ ಪಕ್ಷದ ಸ್ಥಳೀಯ ಮುಖಂಡ ಅರುಣ್‌ ಮುರುಗನ್‌, ದಕ್ಷಿಣ ಭಾರತದಲ್ಲಿ ಮಾಧ್ಯಮಗಳು ಬಿಜೆಪಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಕ್ಷಿಣ ಭಾರತದಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸುವ ವಿಶ್ವಾಸ ನಿಮಗಿದೆಯೇ ಎಂದು ಮೋದಿ ಅವರನ್ನು ಪ್ರಶ್ನಿಸಿದರು.

ಅದಕ್ಕೆ ನಗುತ್ತಲೇ ಉತ್ತರಿಸಿದ ಪ್ರಧಾನಿ, ನಾನು ಯಾವಾಗಲೂ ಆತ್ಮವಿಶ್ವಾಸದಿಂದ ತುಂಬಿರುತ್ತೇನೆ ಎಂಬ ಆರೋಪವೂ ಇದೆ. ಆತ್ಮವಿಶ್ವಾಸ ನನ್ನ ಸ್ವಭಾವದ ಒಂದು ಭಾಗವಾಗಿದೆ. ಮಾಧ್ಯಮಗಳ ಒಂದು ವರ್ಗದಲ್ಲಿ ನಿರ್ದಿಷ್ಟಅಭಿಪ್ರಾಯವಿದೆ. ಚುನಾವಣೆಗೆ ಮೊದಲು ಅವು ನಮ್ಮನ್ನು ಅನುಮಾನದಿಂದಲೇ ನೋಡುತ್ತವೆ. ಸವಾಲು ಎದುರಾಗಿದೆ ಎಂದೇ ಹೇಳುತ್ತವೆ. ಹೀಗಾಗಿ, ನಾವು ಮಾಧ್ಯಮವನ್ನು ದೂಷಿಸುವ ಬದಲು ಅವರ ಅಭಿಪ್ರಾಯವನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಪ್ರತಿಪಕ್ಷ ಹಾಗೂ ಮಾಧ್ಯಮಗಳ ಒಂದು ವರ್ಗದಲ್ಲಿದೆ. ಆದರೆ, 2008ರಲ್ಲಿ ಕರ್ನಾಟಕದಲ್ಲಿ ನಮ್ಮ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಿತು. ಕಳೆದ 2018ರ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಎಂದರು.

ಕರ್ನಾಟಕದ ಜನರು ರಾಜ್ಯದಲ್ಲಿನ ಅವಕಾಶವಾದಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಜೆಡಿಎಸ್‌ಗೆ ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್‌ ಜೊತೆ ಸೇರಿ ಆಡಳಿತ ನಡೆಸುತ್ತಿದೆ. ಖಾತೆಗಳ ಹಂಚಿಕೆ ಮತ್ತಿತರ ವಿಷಯಗಳಿಗಾಗಿ ಉಭಯ ಪಕ್ಷಗಳ ನಡುವೆ ತಿಕ್ಕಾಟ ನಡೆದಿದೆ. ರೈತರ ವಿಷಯದಲ್ಲಿ ತೀವ್ರ ನಿರಾಸೆ ಉಂಟುಮಾಡಿದೆ ಎಂದು ಆಪಾದಿಸಿದರು.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಹೆಚ್ಚಿನ ಬಲ, ಗೆಲುವು ಸಿಗಲಿದೆ. ದಕ್ಷಿಣ ಭಾರತದಲ್ಲೂ ಜನರ ಅಭಿವೃದ್ಧಿ ಆಗಬೇಕು ಎಂಬ ಭಾವನೆಯಿದೆ. ಎಲ್ಲಿ ಅಭಿವೃದ್ಧಿಯ ಆಕಾಂಕ್ಷೆ ಇರುತ್ತದೆಯೊ ಅಲ್ಲಿ ಬಿಜೆಪಿಯೊಂದೇ ಉತ್ತರವಾಗಬಲ್ಲದು ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್