
ಪ್ಯಾರಿಸ್: ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿರುವ ವಿಶ್ವಪ್ರಸಿದ್ಧ ಲೌವ್ರ್ ವಸ್ತುಸಂಗ್ರಹಾಲಯ ಭಾನುವಾರ ಬೆಳಿಗ್ಗೆ ಅಚ್ಚರಿ ಮೂಡಿಸುವಂತಹ ಹಗಲು ದರೋಡೆಗೆ ನಡೆದಿದೆ. ಪ್ರತಿ ದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಈ ವಸ್ತುಸಂಗ್ರಹಾಲಯವು ಭಾನುವಾರ ಸುಮಾರು 30,000 ಜನರ ಭೇಟಿಯನ್ನು ನಿರೀಕ್ಷಿಸುತ್ತಿತ್ತು. ಆದರೆ ಬೆಳಗಿನ ಜಾವ ನಡೆದ ಘಟನೆ, ಲೌವ್ರ್ನ ದೀರ್ಘ ಇತಿಹಾಸದಲ್ಲಿ ಮತ್ತೊಂದು ಕುಖ್ಯಾತ ಘಟನೆಗೆ ಸೇರ್ಪಡೆಗೊಂಡಿದೆ.
ಬೆಳಗಿನ ಸಮಯದಲ್ಲಿ ಸ್ಕೂಟರ್ಗಳಲ್ಲಿ ಬಂದ, ಶಸ್ತ್ರ ಸಜ್ಜಿತ ಅಪರಿಚಿತ ಸಂಖ್ಯೆಯ ಕಳ್ಳರು, ಲೌವ್ರ್ನ ಪ್ರಮುಖ ಅಪೊಲೊ ಗ್ಯಾಲರಿಗೆ ನುಗ್ಗಿದರು. ಕೇವಲ ಏಳು ನಿಮಿಷಗಳಲ್ಲಿ, ನೆಪೋಲಿಯನ್ ಮತ್ತು ಸಾಮ್ರಾಜ್ಞಿಯ ಅಮೂಲ್ಯ ಆಭರಣ ಸಂಗ್ರಹವನ್ನು ದೋಚಿದ ಈ ಕೃತ್ಯ ಹಾಲಿವುಡ್ ಚಲನಚಿತ್ರದ ದೃಶ್ಯವನ್ನು ನೆನಪಿಸುವಂತಿತ್ತು. ಫ್ರಾನ್ಸ್ನ ಆಂತರಿಕ ಸಚಿವ ಲಾರೆಂಟ್ ನುನೆಜ್ ಈ ದರೋಡೆ ಘಟನೆಗೆ ದೃಢಪಡಿಸಿ, ಇದನ್ನು ಪ್ರಮುಖ ದರೋಡೆ (Major Robbery) ಎಂದಿದ್ದಾರೆ.
ನುನೆಜ್ ಹೇಳಿಕೆಯ ಪ್ರಕಾರ, ಕಳ್ಳರು ಕಟ್ಟಡದ ಹೊರಗಿನಿಂದ ಬ್ಯಾಸ್ಕೆಟ್ ಲಿಫ್ಟ್ ಬಳಸಿ ಒಳನುಗ್ಗಿ, ಕಿಟಕಿಗಳನ್ನು ಡಿಸ್ಕ್ ಕಟರ್ಗಳಿಂದ ಕತ್ತರಿಸಿ ಗ್ಯಾಲರಿಗೆ ಪ್ರವೇಶಿಸಿದರು. ಕೇವಲ ಏಳು ನಿಮಿಷಗಳ ಒಳಗೆ ಅಮೂಲ್ಯ ಆಭರಣಗಳನ್ನು ದೋಚಿದರು. ಈ ಕಾರ್ಯಾಚರಣೆಗೆ ಮುಂಚಿತವಾಗಿ ಮೂವರು ಅಥವಾ ನಾಲ್ವರು ಸದಸ್ಯರು ಸ್ಥಳದ ಬಗ್ಗೆ ಸರ್ವೆ ನಡೆಸಿದ್ದರೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ನಂತರ, ವಸ್ತುಸಂಗ್ರಹಾಲಯವನ್ನು ದಿನದ ಮಟ್ಟಿಗೆ ಮುಚ್ಚಲಾಗಿದ್ದು, ತಕ್ಷಣವೇ ತನಿಖೆ ಪ್ರಾರಂಭವಾಯಿತು.
ಫ್ರೆಂಚ್ ದಿನಪತ್ರಿಕೆ ಲೆ ಪ್ಯಾರಿಸಿಯನ್ ಪ್ರಕಾರ, ಅಪರಾಧಿಗಳು ನಿರ್ಮಾಣ ಕಾರ್ಯದಲ್ಲಿದ್ದ ಸೀನ್ ನದಿ ಮುಂಭಾಗದ ಮೂಲಕ ಪ್ರವೇಶಿಸಿದರು. ನಂತರ ಸರಕು ಲಿಫ್ಟ್ ಮೂಲಕ ಅಪೊಲೊ ಗ್ಯಾಲರಿಯ ಗುರಿ ಕೋಣೆಯನ್ನು ತಲುಪಿ, ಕಿಟಕಿಗಳನ್ನು ಒಡೆದು, ನೆಪೋಲಿಯನ್ ಮತ್ತು ಸಾಮ್ರಾಜ್ಞಿಯ ಆಭರಣ ಸಂಗ್ರಹದಲ್ಲಿದ್ದ ಒಂಬತ್ತು ಅಮೂಲ್ಯ ರತ್ನಗಳನ್ನು ದೋಚಿದರು. ಇವುಗಳಲ್ಲಿ ಒಂದು ತುಣುಕು, ಸಾಮ್ರಾಜ್ಞಿ ಯುಜೀನಿಯದ್ದೆಂದು ನಂಬಲ್ಪಟ್ಟಿದ್ದು, ವಸ್ತುಸಂಗ್ರಹಾಲಯದ ಹೊರಗೆ ಹಾನಿಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸರು ತಕ್ಷಣವೇ ವಸ್ತುಸಂಗ್ರಹಾಲಯದ ಬಾಗಿಲುಗಳು ಹಾಗೂ ಸುತ್ತಮುತ್ತಲಿನ ರಸ್ತೆಗಳು ಮುಚ್ಚಿದ ಪರಿಣಾಮ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಯಾಯಿತು. ಸ್ಥಳದಿಂದ ಹೊರಬರಲು ಕಾಯುತ್ತಿದ್ದ ಪ್ರವಾಸಿಗರು ಗುಂಪುಗೂಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಲೌವ್ರ್ ವಸ್ತುಸಂಗ್ರಹಾಲಯದಲ್ಲಿ ಇದು ಮೊದಲ ದರೋಡೆ ಅಲ್ಲ. 1911ರಲ್ಲಿ ನಡೆದ ಮೋನಾಲಿಸಾ ಕಳ್ಳತನ ಘಟನೆ ಇತಿಹಾಸದಲ್ಲೇ ಪ್ರಸಿದ್ಧವಾಗಿದೆ. ವಸ್ತುಸಂಗ್ರಹಾಲಯದ ಮಾಜಿ ಉದ್ಯೋಗಿ ವಿನ್ಸೆಂಜೊ ಪೆರುಗ್ಗಿಯಾ ಚಿತ್ರವನ್ನು ಚೌಕಟ್ಟಿನಿಂದ ತೆಗೆದು, ತನ್ನ ಕೋಟ್ ಅಡಿಯಲ್ಲಿ ಅಡಗಿಸಿಕೊಂಡು ಹೊರನಡೆದಿದ್ದ. ಎರಡು ವರ್ಷಗಳ ನಂತರ ಫ್ಲಾರೆನ್ಸ್ನಲ್ಲಿ ಆ ಚಿತ್ರವನ್ನು ಪತ್ತೆ ಹಚ್ಚಲಾಯಿತು.
ಫ್ರಾನ್ಸ್ ಸಂಸ್ಕೃತಿ ಸಚಿವೆ ರಚಿಡಾ ದಾಟಿ, “ಈ ಬೆಳಿಗ್ಗೆ ವಸ್ತುಸಂಗ್ರಹಾಲಯದ ಉದ್ಘಾಟನೆಯ ವೇಳೆ ದರೋಡೆ ನಡೆದಿದೆ. ಯಾವುದೇ ಗಾಯಗಳ ವರದಿಯಾಗಿಲ್ಲ. ನಾನು ಸ್ಥಳದಲ್ಲೇ ಇದ್ದು ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.