
ವಿಶೇಷ ವರದಿ
ಬೆಂಗಳೂರು (ಡಿ.29) : 2023ರ ವಿಧಾನಸಭಾ ಚುನಾವಣೆಯ ಪ್ರಚಾರ ತಂತ್ರದ ಭಾಗವಾಗಿ ಜೆಡಿಎಸ್ ನಡೆಸುತ್ತಿರುವ ‘ಪಂಚರತ್ನ ರಥಯಾತ್ರೆ’ ವಿಭಿನ್ನ ಬಗೆಯ ಬೃಹತ್ ಗಾತ್ರದ ಹಾರಗಳ ಮೂಲಕ ಗಮನ ಸೆಳೆಯುತ್ತಿದೆ. ನವೆಂಬರ್ 1ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡುಮಲೆ ಮಹಾಗಣಪತಿ ಸನ್ನಿಧಿಯಲ್ಲಿ ಆರಂಭಗೊಂಡು ಮಳೆಯ ಕಾರಣ ತಾತ್ಕಾಲಿಕವಾಗಿ ಮುಂದೂಡಲಾಗಿದ್ದ ಯಾತ್ರೆಗೆ, ನವೆಂಬರ್ 18ರಂದು ದೇವೇಗೌಡರು ಮುಳಬಾಗಿಲಿನಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದರು.
ಯಾತ್ರೆ 32 ದಿನಗಳನ್ನು ಪೂರೈಸಿದ್ದು, ಹಳೆ ಮೈಸೂರು ಭಾಗದ 6 ಜಿಲ್ಲೆಗಳ 32 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚಾರ ಮಾಡಿದೆ. ರಥಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಲಿಕಾಪ್ಟರ್ನಲ್ಲಿ ಪುಷ್ಪವೃಷ್ಟಿಜೊತೆಗೆ, ಪ್ರಾದೇಶಿಕ ವೈಶಿಷ್ಟ್ಯತೆ ಸಾರುವ ವಸ್ತುಗಳ ಹಾರಗಳನ್ನು ಕ್ರೇನ್ಗಳ ಮೂಲಕ ಹಾಕಿ ಸ್ವಾಗತ ಕೋರಲಾಗುತ್ತಿದೆ.
Pancharatna Yatre: ಬಡವರ ಕಲ್ಯಾಣವೇ ಪಂಚರತ್ನ ಯೋಜನೆಯ ಗುರಿ: ಕುಮಾರಸ್ವಾಮಿ
ಈವರೆಗೆ ಚೆಂಡು ಹೂವು, ಮಲ್ಲಿಗೆ, ಸೇವಂತಿಗೆ, ಕಡಲೆಕಾಯಿ, ಚಕ್ಕೋತ, ಅನಾನಸ್, ಕರ್ಬೂಜಾ, ಮೂಸಂಬಿ, ದ್ರಾಕ್ಷಿ, ಸೇಬು, ಕೊಬ್ಬರಿ, ಗೋಡಂಬಿ, ಕಬ್ಬು, ಮೆಕ್ಕೆಜೋಳ, ಬೆಲ್ಲ, ನುಗ್ಗೆಸೊಪ್ಪು, ಗೆಡ್ಡೆಕೋಸು, ಸೀಮೆ ಬದನೆ, ರುದ್ರಾಕ್ಷಿ, ಭತ್ತ, ರಾಗಿ ತೆನೆ, ಮುತ್ತಿನ ಹಾರ ಸೇರಿದಂತೆ 42ಕ್ಕೂ ಹೆಚ್ಚು ವಿಭಿನ್ನ ವಸ್ತುಗಳ, 495ಕ್ಕೂ ಹೆಚ್ಚು ಹಾರಗಳನ್ನು ಕ್ರೇನ್ಗಳ ಮೂಲಕ ಹಾಕಿ ಜನರು ಅಭಿಮಾನ ಮೆರೆದಿದ್ದಾರೆ. ಬುಧವಾರ ತುಮಕೂರು ಜಿಲ್ಲೆಯ ಕಂಚಿಗಾನಹಳ್ಳಿಯಲ್ಲಿ ಶಾಲಾ ಮಕ್ಕಳ ಬ್ಯಾಗುಗಳಿಂದ ತಯಾರಿಸಿದ ಹಾರ ಹಾಕಲಾಯಿತು. ಹಾರದ ಮೇಲೆ ‘ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಿಸಿ, ಬಡವರ ಮಕ್ಕಳಿಗೂ ಕಾನ್ವೆಂಟ್ ಶಿಕ್ಷಣ ಬೇಕ್ರಯ್ಯ’ ಎಂಬ ಒಕ್ಕಣೆ ಬರೆಯಲಾಗಿತ್ತು.
ವಿಭಿನ್ನ ಹಾರಗಳು:
ಕೋಲಾರದಲ್ಲಿ 3 ಟನ್ ತೂಕದ ಟೊಮೆಟೋ ಹಾರ, ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾರಹಳ್ಳಿಯಲ್ಲಿ ಚಕ್ಕೋತ ಹಾರ, ಹಾರೋಹಳ್ಳಿ, ವೆಂಕಟಗಿರಿಕೋಟೆಯಲ್ಲಿ ದ್ರಾಕ್ಷಿ ಹಾರ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ, ಬಿಜ್ಜವಾರದಲ್ಲಿ ಬಜ್ಜಿ ಮೆಣಸಿನಕಾಯಿ ಹಾರ, ಮಂಡ್ಯ, ತುಮಕೂರಿನ ಶಿರಾಗೇಟ್ ಬಳಿ ರಾಗಿ ಹಾರ, ತುರುವೇಕೆರೆಯಲ್ಲಿ ಎಳನೀರು, ಸಿಹಿ ಕುಂಬಳಕಾಯಿ, ಹೊಂಬಾಳೆ ಹಾರ, ತುಮಕೂರಿನ ಬಾಣಸಂದ್ರದಲ್ಲಿ ಡ್ರ್ಯಾಗನ್ ಫä್ರಟ್ಸ್ ಹಾರ, ದೊಡ್ಡರಸಿನಕೆರೆಯಲ್ಲಿ ನವಿಲುಕೋಸು, ನುಗ್ಗೆಸೊಪ್ಪಿನ ಹಾರ, ಮಧುಗಿರಿ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಕೊರಟಗೆರೆಯಲ್ಲಿ ಉದ್ದಿನವಡೆ ಹಾರ, ಪಾವಗಡದಲ್ಲಿ ಅನಾನಸ್ ಹಾರ, ಶಿರಾದ ಕೆಂಚಗಾನಹಳ್ಳಿಯಲ್ಲಿ ಕೊತ್ತಂಬರಿ ಸೊಪ್ಪಿನ ಹಾರ, ರಾಮನಗರದ ಹಜರತ್ ಫಿರೆನ್ ಷಾ ವಾಲಿ ದರ್ಗಾದಲ್ಲಿ ಬೃಹತ್ ಬಾದಾಮಿ ಹಾರ, ಶಿಡ್ಲಘಟ್ಟ, ಕನಕಪುರದಲ್ಲಿ ರೇಷ್ಮೆಗೂಡಿನ ಹಾರ, ಕನಕಪುರದ ಹೆಬ್ಬಾಗಿಲಿನಲ್ಲಿ ಬಾಳೆಗೊನೆ ಹಾರ ಹಾಕಿ ಸ್ವಾಗತ ಕೋರಲಾಗಿದೆ.
ಮದ್ದೂರಿನ ತೂಬಿನಕೆರೆ ಗೇಟ್ನಲ್ಲಿ ಜೋಳದ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಮರಳಗಾಲ, ಮಂಡ್ಯ, ಗುರುದೇವನಹಳ್ಳಿ, ಸಾತನೂರು ವೃತ್ತದಲ್ಲಿ ಕಬ್ಬಿನ ಜಲ್ಲೆ ಹಾರ, ಮೇಲುಕೋಟೆಯ ಸುಂಕಾ ತೊಣ್ಣೂರಿನಲ್ಲಿ ಚೆರ್ರಿ ಹಣ್ಣಿನ ಹಾರ, ಹುಲಿಕೆರೆಯಲ್ಲಿ ಬೃಹತ್ ರುದ್ರಾಕ್ಷಿ ಹಾರ, ಕೆ.ಆರ್.ಪೇಟೆಯ ಹೊಸಹೊಳಲು, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರದ ಉಪ್ತುಕುಂಟೆಯಲ್ಲಿ ಕನಕಾಂಬರ, ಸೇಬಿನ ಹಾರ, ನಾಗಮಂಗಲದ ಹೊನ್ನಾವರ, ಬಿಂಡಿಗನವಿಲೆ, ಕೆ.ಆರ್.ಪೇಟೆಯಲ್ಲಿ ಕೊಬ್ಬರಿ ಹಾರ, ನಾಗಮಂಗಲದ ಬೆಳ್ಳೂರಿನಲ್ಲಿ ಎಲೆಕೋಸಿನ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಭತ್ತದ ಹಾರ, ಚನ್ನಪಟ್ಟಣದಲ್ಲಿ ಬೊಂಬೆಗಳ ಹಾರ, ಕೆ.ಆರ್.ಪೇಟೆ, ಮಳವಳ್ಳಿಯ ಹಲಗೂರು, ಕಿರುಗಾವಲಿನಲ್ಲಿ ಬೆಲ್ಲದ ಹಾರ, ಭಾರತಿನಗರದಲ್ಲಿ ಮೆಕ್ಕೆಜೋಳದ ಹಾರ, ದೊಡ್ಡರಸಿನಕೆರೆಯಲ್ಲಿ ಎಳನೀರು, ನವಿಲುಕೋಸು, ನುಗ್ಗೆಸೊಪ್ಪಿನ ಹಾರ ಹಾಕಿ ಅಭಿಮಾನ ತೋರಲಾಯಿತು.
ಬಿಜೆಪಿ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ: ಎಚ್ಡಿಕೆ
ಕುಶಲ ಕರ್ಮಿಗಳಿಗೆ ಕೆಲಸ:
ಮಂಡ್ಯದ ಹುಲಿಕೆರೆಯಲ್ಲಿ ಅಭಿಮಾನಿಗಳು ನೀಡಿದ ರುದ್ರಾಕ್ಷಿ ಮಾಲೆಯನ್ನು ಸಿದ್ಧಗಂಗಾ ಮಠದ ಶಿವೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಚರಣಗಳಿಗೆ ಕುಮಾರಸ್ವಾಮಿ ಅವರು ಸಮರ್ಪಣೆ ಮಾಡಿದರು. ಕಬ್ಬು, ರಾಗಿ, ಬೆಲ್ಲ ಸೇರಿದಂತೆ ವಿಭಿನ್ನ ಹಾರಗಳ ತಯಾರಿಕೆಗೆ ಕನಿಷ್ಠ 30 ಸಾವಿರದಿಂದ 1 ಲಕ್ಷ ರುಪಾಯಿವರೆಗೂ ಖರ್ಚಾಗುತ್ತಿದ್ದು, ಹಾರ ತಯಾರಿಸುವ ಕುಶಲ ಕರ್ಮಿಗಳಿಗೂ ಇದರಿಂದ ಕೆಲಸ ಸಿಕ್ಕಿದಂತಾಗಿದೆ. ಜೆಸಿಬಿ, ಕ್ರೇನ್ಗಳ ಮಾಲಿಕರಿಗೂ ಆದಾಯ ಬರುತ್ತಿದೆ ಎನ್ನುವುದು ಜೆಡಿಎಸ್ ನಾಯಕರ ಅಭಿಮತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.