
ಕಾರವಾರ (ಡಿ.28) : ವಿವಿಧ ಕಾರಣಗಳಿಗೆ ಬಿಜೆಪಿ ಕಡೆ ವಾಲಿರುವ ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ಹಾಗೂ ಅವರನ್ನು ರಾಜಕೀಯವಾಗಿ ಮುಂಚೂಣಿಗೆ ತರಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಶಿರಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಧ್ಯಮ ಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕಾಂಗ್ರೆಸ್(Congress) ಪಕ್ಷದ ಶಕ್ತಿಯೇ ಹಿಂದುಳಿದ ವರ್ಗದ ಮತದಾರರಾಗಿದ್ದಾರೆ. ಆದರೆ, ಕೆಲವು ಪ್ರಮಾಣದಲ್ಲಿ ಕಾಲಕ್ರಮೇಣ ಅವರು ಬಿಜೆಪಿ(BJP) ಕಡೆ ವಾಲಿದ್ದಾರೆ. ಅಂತಹ ಮತದಾರರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಕಾರ್ಯಕ್ರಮ ರೂಪಿಸಿದೆ. ಈಗಾಗಲೇ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಹಿರಿಯರು, ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸಿ ಸಂಘಟನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಮತದಾರರನ್ನು ಮುಂಚೂಣಿಗೆ ತರಲು ಕ್ರಮ ತೆಗೆದುಕೊಳ್ಳುವ ಜತೆ ಪದಾಧಿಕಾರಿ ಸ್ಥಾನ ನೀಡಲು ಚಿಂತನೆ ನಡೆದಿದೆ ಎಂದರು.
ಎಲ್ಲ ಜಿಲ್ಲೆಯಲ್ಲೂ ಕಾಂಗ್ರೆಸ್ ಒಬಿಸಿ ಸಮಾವೇಶ: ಮಧು ಬಂಗಾರಪ್ಪ
ಒಬಿಸಿ(OBC) ಪುನರ್ ರಚನೆ, ಪದಾಧಿಕಾರಿಗಳ ನೇಮಕ ಶೀಘ್ರದಲ್ಲೇ ಮಾಡಲಾಗುವುದು. ಇದರ ಜತೆ ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ಒಬಿಸಿ ಸಮಾವೇಶ ಸಂಘಟಿಸಲು ತೀರ್ಮಾನಿಸಲಾಗಿದೆ. ಜ.15ರಿಂದ ಫೆ.28ರೊಳಗೆ ಆ ಸಮಾವೇಶ ಪೂರ್ಣಗೊಂಡ ನಂತರ ರಾಜ್ಯ ಸಮಾವೇಶ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ(S Bangarappa) ಅವರು ಒಬಿಸಿ ಮತದಾರರಿಗಾಗಿ ಸಾಕಷ್ಟು ಕಾರ್ಯ ಮಾಡಿದ್ದರು. ಈಗ ಮತ್ತೆ ಆ ಕಾಲ ಸನ್ನಿಹಿತವಾಗಿದೆ ಎಂದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ರಕ್ಷಣೆ, ಯುವ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರ ಜತೆ ಒಬಿಸಿ ಅಭಿವೃದ್ಧಿ ಸಂಬಂಧ ಕಾರ್ಯಕ್ರಮ ಕೂಡಾ ಇದೆ. ಕಾಂಗ್ರೆಸ್ ಜಾರಿಗೊಳಿಸಿದ್ದ ಎಲ್ಲ ಭಾಗ್ಯ ಯೋಜನೆಗಳನ್ನು ಇದು ಒಳಗೊಂಡಿದೆ ಎಂದರು. ಬಿಜೆಪಿಗರು ಅರಣ್ಯ ಅತಿಕ್ರಮಣದಾರರು ಜಾಮೀನು ಪಡೆದು ತಿರುಗುವಂಥ ಸ್ಥಿತಿ ತಂದಿದ್ದಾರೆ. ಅನ್ನ ಕೊಡುವ ರೈತರನ್ನು ಭೂಕಳ್ಳರಂತೆ ಬಿಂಬಿಸಲಾಗುತ್ತಿದೆ. ವಸತಿ ರಹಿತರಿಗೆ ಮನೆ ನೀಡಲಾಗಿಲ್ಲ. ಭಾವನಾತ್ಮಕ ವಿಷಯ ತಂದು ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ ಎಂದರು.
Haveri: ಮಾರ್ಚ್ನಲ್ಲಿ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಾವೇಶ: ಮಧು ಬಂಗಾರಪ್ಪ
ಹಿಂದುತ್ವದ ಅಜೆಂಡಾ ಇಟ್ಟು ಚುನಾವಣೆ(Assembly election)ಗೆ ಬರುವ ಬಿಜೆಪಿಗೆ ಈ ಬಾರಿ ಜನರೇ ಪಾಠ ಕಲಿಸಲಿದ್ದಾರೆ ಎಂದರು. ಈ ವೇಳೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪದಾಧಿಕಾರಿಗಳಾದ ಎಸ್.ಕೆ.ಭಾಗವತ, ಜೆ.ಡಿ.ನಾಯ್ಕ, ಬಿ.ಆರ್.ನಾಯ್ಕ, ಸುಮಾ ಉಗ್ರಾಣಕರ, ಬಸವರಾಜ ದೊಡ್ಮನಿ, ಸತೀಶ ನಾಯ್ಕ, ಜಗದೀಪ ತೆಂಗೇರಿ, ಜಗದೀಶ ಗೌಡ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.