ರಾಮನಗರ: ಮೋದಿ ಭಾವಚಿತ್ರ ವಿರೂಪ, ರೊಚ್ಚಿಗೆದ್ದ ಬಿಜೆಪಿಗರಿಂದ ಆಕ್ರೋಶ

By Kannadaprabha NewsFirst Published Jan 4, 2024, 10:45 PM IST
Highlights

ವಿರೂಪಗೊಂಡಿದ್ದ ಮೋದಿ ಅವರ ಭಾವಚಿತ್ರವನ್ನು ಉದ್ದೇಶ ಪೂರ್ವಕವಾಗಿ ಬದಲಾಯಿಸಲಾಗಿಲ್ಲ, ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇದೆ ಎಂದು ಧಿಕ್ಕಾರ ಕೂಗಿದರು. ಈ ವೇಳೆ ಕೆಲವು ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ವೆಂಕಟೇಶ್ ಅವರ ಭಾವ ಚಿತ್ರಗಳನ್ನು ವಿರೂಪಗೊಳಿಸಲೆತ್ನಿಸಿದರು. ಮಹಿಳಾ ಕಾರ್ಯಕರ್ತೆಯೊಬ್ಬರು ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ(ಜ.04):  ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ ವಿರೋಧಿಸಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು.ಪಶು ಇಲಾಖೆಗೆ ಸೇರಿದ ಚಿಕಿತ್ಸಾ ವಾಹನದ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ವಿರೂಪಗೊಂಡಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಚಳವಳಿ ಮತ್ತೊಂದು ಸ್ವರೂಪ ಪಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.

ನಗರದ ಶ್ರೀ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಬಿಜೆಪಿ ಕಾರ್ಯಕರ್ತರು, 30 ವರ್ಷಗಳ ಹಿಂದಿನ ಕೇಸೊಂದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಶ್ರೀಕಾಂತ್ ಎಂಬುವರನ್ನು ಬಂಧಿಸಿದ್ದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದರು.

ಮೋದಿ ಗ್ಯಾರಂಟಿಯೆದುರು ಬೇರಾವ ಗ್ಯಾರಂಟಿಯೂ ಇಲ್ಲ: ಕೇಂದ್ರ ಸಚಿವ ಕ್ರಿಶನ್ ಪಾಲ್‌

ಇದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಪಶು ಇಲಾಖೆಯ ಚಿಕಿತ್ಸಾ ವಾಹನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಶುಪಾಲನ ಖಾತೆ ಸಚಿವ ವೆಂಕಟೇಶ್ ಅವರ ಹೊಚ್ಚ ಹೊಸ ಚಿತ್ರಗಳಿದ್ದವು. ಜೊತೆಗೆ ಮಾಸಿ ಹೋಗಿ ವಿರೂಪಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವೂ ಇತ್ತು. ಇದನ್ನು ಕಂಡ ಕಾರ್ಯಕರ್ತರು ತಮ್ಮ ಪಕ್ಷದ ನಾಯಕ ಹಾಗೂ ಪ್ರಧಾನಿ ಮೋದಿ ಅವರನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಅರ್ಧಕ್ಕೆ ನಿಲ್ಲಿಸಿ, ಆಂಬುಲೆನ್ಸ್ ತಡೆದು ನಿಲ್ಲಿಸಿದರು.

ವಿರೂಪಗೊಂಡಿದ್ದ ಮೋದಿ ಅವರ ಭಾವಚಿತ್ರವನ್ನು ಉದ್ದೇಶ ಪೂರ್ವಕವಾಗಿ ಬದಲಾಯಿಸಲಾಗಿಲ್ಲ, ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇದೆ ಎಂದು ಧಿಕ್ಕಾರ ಕೂಗಿದರು. ಈ ವೇಳೆ ಕೆಲವು ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ವೆಂಕಟೇಶ್ ಅವರ ಭಾವ ಚಿತ್ರಗಳನ್ನು ವಿರೂಪಗೊಳಿಸಲೆತ್ನಿಸಿದರು. ಮಹಿಳಾ ಕಾರ್ಯಕರ್ತೆಯೊಬ್ಬರು ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಯತ್ನಿಸಿ ವಿಫಲರಾದರು. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು. ಕೆಲ ಕಾರ್ಯಕರ್ತರು ವಾಹನದ ಮೇಲೇರಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಪ್ರತಿಭಟನೆಯ ಮಾಹಿತಿ ಪಡೆದ ಪಶುಪಾಲನಾ ಇಲಾಖೆ ಡಿಡಿ ಅವರು ಸ್ಥಳಕ್ಕೆ ಧಾವಿಸಿದರು. ಸದರಿ ವಾಹನವನ್ನು ಔಟ್ ಸೋರ್ಸ್ ಮಾಡಲಾಗಿದ್ದು, ತಮ್ಮ ಅಧಿಕಾರ ಇಲ್ಲ ಎಂದು ಸಮಜಾಯಿಷಿ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮುಖಂಡರು ಮತ್ತು ಕಾರ್ಯಕರ್ತರು ಜವಾಬ್ದಾರಿ ಇಲ್ಲ ಎಂದ ಮೇಲೆ ಏಕೆ ಬಂದಿದ್ದೀರಿ? ಎಂದು ತರಾಟೆ ತೆಗೆದುಕೊಂಡರು.

ಮೋದಿ ಗೆಲ್ಲಿಸಿ -ಭಾರತ ಉಳಿಸಿ ಅಭಿಯಾನಕ್ಕೆ ಮಾಜಿ ಸಿಎಂ ಎಚ್‌ಡಿಕೆಗೆ ಆಹ್ವಾನ

ಇಲಾಖೆಯ ಕಾರ್ಯಕ್ರಮ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯಾಗಿದೆ, ಪಿಎಂ, ಸಿಎಂ ಮತ್ತು ಇಲಾಖೆಯ ಚಿತ್ರಗಳನ್ನು ಅಳವಡಿಸಲಾಗಿದೆ. ರಾಜ್ಯ ಸರ್ಕಾರದ ಲಾಂಛನವಿದೆ. ಅಂದರೆ ವಾಹನ ಸರ್ಕಾರದ ಸ್ವತ್ತು. ಇಲಾಖೆಯ ಅಧಿಕಾರಿಯಾಗಿ ಹೊಣೆಯಿಂದ ಜಾರಿಕೊಳ್ಳಲು ಯತ್ನಿಸುತ್ತಿದ್ದೀರಿ ಎಂದು ಕಾರ್ಯಕರ್ತರು ಏರು ದನಿಯಲ್ಲಿ ವಿರೋಧ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈ ಮೀರುವ ಸೂಚನೆ ಅರಿತ ಪೊಲೀಸರು ಸದರಿ ಅಧಿಕಾರಿಯವರನ್ನು ಅವರ ವಾಹನದಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.

ಈ ವೇಳೆ ಕೆಲವು ಕಾಲ ಪ್ರತಿಭಟನಾ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸಕಾಲಿಕ ಕ್ರಮ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥನಾರಾಯಣ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್, ಪ್ರಧಾನ ಕಾರ್ಯದರ್ಶಿ ರುದ್ರದೇವರು, ರಾಮನಗರ ನಗರ ಘಟಕದ ಅಧ್ಯಕ್ಷ ಪಿ.ಶಿವಾನಂದ, ಬಿಜೆಪಿ ಪ್ರಮುಖರಾದ ಗೌತಂಗೌಡ, ಪ್ರಸಾದ್ ಗೌಡ, ಎಸ್.ಆರ್.ನಾಗರಾಜ್, ಚಂದ್ರಶೇಖರ ರೆಡ್ಡಿ, ಜಿ.ವಿ.ಪದ್ಮನಾಭ, ಮುರುಳೀಧರ, ಸುರೇಶ್, ಬಿ.ನಾಗೇಶ್, ವಿನೋಧ್ ಭಗತ್, ವಿ.ರಾಜು, ರಾಮಾಂಜನಿ, ಕೆ.ಪಿ.ಜಯರಾಂ, ಸಂಜಯ್ ಜೈನ್, ಚಂದನ್ ಮೋರೆ, ಲೀಲಾವತಿ,ಪುಷ್ಪಾವತಿ, ಜೆಡಿಎಸ್ ಮುಖಂಡ ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

click me!