ತಾಕತ್ತಿದ್ದರೆ ಲಕ್ಷಾಂತರ ಶ್ರೀರಾಮ ಸೇವಕರನ್ನು ಬಂಧಿಸಿ: ಅಶ್ವತ್ಥ ನಾರಾಯಣಗೌಡ

By Kannadaprabha NewsFirst Published Jan 4, 2024, 10:15 PM IST
Highlights

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತುಷ್ಟಿಕರಣ ನೀತಿ ಹೆಚ್ಚಾಗಿದೆ. ನಾಡಿನಲ್ಲಿ ಲಕ್ಷಾಂತರ ಜನರು ಶ್ರೀರಾಮ ಸೇವಕರಿದ್ದಾರೆ. ತಾಕತ್ತಿದ್ದರೆ ಅವರನ್ನೆಲ್ಲ ಬಂಧಿಸಿ ನೋಡಿ, ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ಸವಾಲು ಹಾಕಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣಗೌಡ 

ರಾಮನಗರ(ಜ.04):  ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿಯ ಶ್ರೀರಾಮನ ಕರ ಸೇವಕರ ಮೇಲಿನ ಹಳೆಯ ಪ್ರಕರಣಗಳಿಗೆ ಮರುಜೀವ ನೀಡಿ ಬಂಧಿಸುವ ಮೂಲಕ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣಗೌಡ ಬಲವಾಗಿ ಖಂಡಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತುಷ್ಟಿಕರಣ ನೀತಿ ಹೆಚ್ಚಾಗಿದೆ. ನಾಡಿನಲ್ಲಿ ಲಕ್ಷಾಂತರ ಜನರು ಶ್ರೀರಾಮ ಸೇವಕರಿದ್ದಾರೆ. ತಾಕತ್ತಿದ್ದರೆ ಅವರನ್ನೆಲ್ಲ ಬಂಧಿಸಿ ನೋಡಿ, ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ಸವಾಲು ಹಾಕಿದ್ದಾರೆ.

ಮೋದಿ ಗ್ಯಾರಂಟಿಯೆದುರು ಬೇರಾವ ಗ್ಯಾರಂಟಿಯೂ ಇಲ್ಲ: ಕೇಂದ್ರ ಸಚಿವ ಕ್ರಿಶನ್ ಪಾಲ್‌

2015 ರಲ್ಲಿ ರಾಜ್ಯದಲ್ಲಿ ಭಯೋತ್ಪಾದಕ ಸಂಘಟನೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪಿಎಫ್ ಐ , ಎಸ್ ಡಿಪಿಐ, ಕೆಎಫ್ ಡಿ ಸಂಘಟನೆಗಳು ಹಿಜಾಬ್ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತಿದ ಸಿಎಫ್ ಐ ( campus front of India) ಸಂಘಟನೆಗಳ ದೇಶದ್ರೋಹಿ , ದೇಶ ವಿರೋಧಿ, ಕೊಲೆ ಆರೋಪ ಇದ್ದ ಎಲ್ಲಾ ಕೇಸ್ ಗಳನ್ನು ವಾಪಸ್ ತೆಗೆದುಕೊಳ್ಳುತೀರಿ. 2009 ಮೈಸೂರಿನ ಉದಯಗಿರಿ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ ನಡೆದ ಕೋಮುಗಲಭೆಯಲ್ಲಿ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಕೇಸಿನಲ್ಲಿ ಭಾಗಿಯಾಗಿದ್ದ ಕೆಎಫ್ ಡಿ ಸಂಘಟನೆಯ 250 ಜನರ ಮೇಲಿದ್ದ ಮೊಕದ್ದಮೆಯನ್ನು ವಾಪಸ್ ಪಡೆಯುತ್ತೀರಿ. 2010 ರಲ್ಲಿ ಶಿವಮೊಗ್ಗ ಮತ್ತು ಹಾಸನ ಪಿ ಎಫ್ ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಮೇಲಿದ್ದ ಕೇಸನ್ನೂ ವಾಪಸ್ ಪಡೆಯುತ್ತೀರಿ, ಮೈಸೂರಿನ ಶಾಸಕ ತನ್ವೀರ್ ಸೇಠ್ ಡಿಜೆಹಳ್ಳಿ ಕೆಜಿಹಳ್ಳಿ ಕೇಸ್ ನಲ್ಲಿ ಭಾಗಿಯಾಗಿದ್ದ ಗೂಂಡಾಗಳ ಮೇಲಿರುವ ಕೇಸನ್ನು ವಾಪಸ್ ಪಡೆಯಲು ಪತ್ರ ಬರೆಯುತ್ತಾರೆ ಎಂದು ಟೀಕಿಸಿದರು.

ಜ.22ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಈ ದೇಶದ ಸಮೃದ್ಧಿಯ ಸಂಕೇತ. ಈ ಮಹತ್ಕಾರ್ಯವನ್ನು ವಿಶಾಲ ಹೃದಯದಿಂದ ನೋಡಬೇಕು. ಜಗತ್ತಿನ ಹಲವಾರು ರಾಷ್ಟ್ರಗಳು ಅಯೋಧ್ಯೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮೋದಿ ಗೆಲ್ಲಿಸಿ -ಭಾರತ ಉಳಿಸಿ ಅಭಿಯಾನಕ್ಕೆ ಮಾಜಿ ಸಿಎಂ ಎಚ್‌ಡಿಕೆಗೆ ಆಹ್ವಾನ

ಶ್ರೀರಾಮ ಮಂದಿರ ನಿರ್ಮಾಣ ಸಂವಿಧಾನದ 370ನೆಯ ವಿಧಿ ರದ್ದು , ಯೂನಿಫಾರಂ ಸಿವಿಲ್ ಕೋಡ್, ತ್ರಿವಳಿ ತಲಾಕ್ ಇವೆಲ್ಲವೂ ಬಿಜೆಪಿಯ ಚುನಾವಣೆಯ ಪ್ರಣಾಳಿಕೆ , ಬಿಜೆಪಿಯ ಚುನಾವಣಾ ಪ್ರಣಾಳಿಕೆಗೆ ಈ ದೇಶದ ಜನ ಮನ್ನಣೆ ಕೊಟ್ಟಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ಈ ದೇಶದ ಜನ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಘೋಷ ವಾಕ್ಯದೊಂದಿಗೆ ಬಿಜೆಪಿ ರಾಜ್ಯದಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಇದೇ ರೀತಿ ರಾಜ್ಯದಲ್ಲಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಒಂದು ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಅಶ್ವತ್ಥ ನಾರಾಯಣಗೌಡ ಎಚ್ಚರಿಸಿದ್ದಾರೆ.

ರಾಮ ಮಂದಿರದ ಉದ್ಘಾಟನೆ ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಬಾಲಿಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗೋದ್ರಾ ರೀತಿ ಗಲಭೆ ಆಗುವ ಮಾಹಿತಿಯಿದ್ದರೆ ಗೃಹ ಸಚಿವರ ಮೂಲಕ ಕೇಂದ್ರಕ್ಕೆ ಪತ್ರ ಬರೆಯಲಿ. ಅದನ್ನು ಬಿಟ್ಟು ಬಹಿರಂಗವಾಗಿ ಹೇಳುವ ಉದ್ದೇಶ ಏನು? ನಿಮಗೆ (ಬಿ.ಕೆ.ಹರಿಪ್ರಸಾದ್) ಗಲಭೆ ಸೃಷ್ಟಿಸುವ ಭಯೋತ್ಪಾದಕರ ಸಂಪರ್ಕ ಇದೆಯಾ? ಗಲಭೆ ಸೃಷ್ಟಿಸುವವರು ನಿಮಗೆ ಮಾಹಿತಿ ನೀಡಿದ್ದಾರಾ? ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣಗೌಡ ತಿಳಿಸಿದ್ದಾರೆ. 

click me!