ಎನ್‌ಡಿಎಗೆ 400 ಸ್ಥಾನದ ಬಗ್ಗೆ ವಿಪಕ್ಷಗಳಿಗೇ ವಿಶ್ವಾಸ: ಪ್ರಧಾನಿ ಮೋದಿ

By Kannadaprabha NewsFirst Published Feb 12, 2024, 12:30 AM IST
Highlights

ಕಾಂಗ್ರೆಸ್ ಪಕ್ಷವು ಧರ್ಮ, ಜಾತಿ ಹಾಗೂ ಭಾಷೆಯ ವಿಚಾರದಲ್ಲಿ ಜನರನ್ನು ವಿಭಿಜಿಸುವ ಲೂಟಿಕೋರ ಪಕ್ಷವಾಗಿದೆ. ಲೂಟಿ ಹಾಗೂ ವಿಭಜನೆಯೇ ಕಾಂಗ್ರೆಸ್‌ ಪಕ್ಷದ ಮಂತ್ರ. ಆದರೆ ಇದು ಜನರಿಗೆ ಗೊತ್ತು. ಹೀಗಾಗಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದ ಪ್ರಧಾನಿ ಮೋದಿ

ಜಬುವಾ(ಮ.ಪ್ರ.)(ಫೆ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಮತ್ತು ಒಟ್ಟಾರೆ ಎನ್‌ಡಿಎ ಮೈತ್ರಿಕೂಟ 400 ಸ್ಥಾನ ಗೆಲ್ಲುವುದು ಖಚಿತ. ಈ ವಿಷಯವನ್ನು ಸ್ವತಃ ವಿಪಕ್ಷಗಳ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಲ್ಲದೆ, ಕಾಂಗ್ರೆಸ್ ಪಕ್ಷವು ಧರ್ಮ, ಜಾತಿ ಹಾಗೂ ಭಾಷೆಯ ವಿಚಾರದಲ್ಲಿ ಜನರನ್ನು ವಿಭಿಜಿಸುವ ಲೂಟಿಕೋರ ಪಕ್ಷವಾಗಿದೆ. ಲೂಟಿ ಹಾಗೂ ವಿಭಜನೆಯೇ ಕಾಂಗ್ರೆಸ್‌ ಪಕ್ಷದ ಮಂತ್ರ. ಆದರೆ ಇದು ಜನರಿಗೆ ಗೊತ್ತು. ಹೀಗಾಗಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

Latest Videos

ನರೇಂದ್ರ ಮೋದಿ-ಅಮಿತ್ ಶಾ ಇಬ್ಬರೂ ದೇಶ ಮುನ್ನಡೆಸುವ ಜೋಡೆತ್ತುಗಳು: ಸುತ್ತೂರು ಶ್ರೀಗಳು ಬಣ್ಣನೆ

ಮಧ್ಯಪ್ರದೇಶದ ಜಬುವಾದಲ್ಲಿ ಭಾನುವಾರ 7500 ಕೋಟಿ ರು. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿ, ಬಳಿಕ ಬುಡಕಟ್ಟು ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಈ ಬಾರಿ ಮತದಾರರು ಪ್ರತಿ ಬೂತ್‌ನಲ್ಲೂ ಕಳೆದ ಬಾರಿ ಬಿದ್ದಿದ್ದಕ್ಕಿಂತ 370 ಹೆಚ್ಚುವರಿ ಮತ ಬೀಳುವುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಮೂಲಕ 543 ಸದಸ್ಯಬಲದ ಲೋಕಸಭೆಯಲ್ಲಿ ಬಿಜೆಪಿ 370 ಸ್ಥಾನ ಗೆಲ್ಲುವುದನ್ನು ಖಚಿತಪಡಿಸಬೇಕು ಎಂದು ಕರೆ ನೀಡಿದರು.

ಈ ಬಾರಿ ಬಿಜೆಪಿಯ ಕಮಲದ ಚಿಹ್ನೆ ಏಕಾಂಗಿಯಾಗಿ 370 ಸ್ಥಾನಗಳ ಗಡಿಯನ್ನು ದಾಟುವ ವಿಶ್ವಾಸ ನನಗಿದೆ. ಅಷ್ಟೇ ಏಕೆ ಸಂಸತ್ತಿನಲ್ಲಿ ವಿಪಕ್ಷಗಳ ನಾಯಕರು ಕೂಡಾ ಎನ್‌ಡಿಎ ‘ಅಬ್‌ ಕೀ ಬಾರ್‌ 400 ಪಾರ್‌’ ಎನ್ನುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುವ ಮೂಲಕ ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಬಾಯ್ತಪ್ಪಿ ಆಡಿದ ಮಾತುಗಳನ್ನು ಉಲ್ಲೇಖಿಸಿ ಹೇಳಿದರು.

ಹಲವು ತಲೆಮಾರುಗಳ ಕನಸು ಕಳೆದ 10 ವರ್ಷಗಳಲ್ಲಿ ನನಸು: ಮೋದಿ

ಇದೇ ವೇಳೆ ನಾನು ಜಬುವಾಕ್ಕೆ ಲೋಕಸಭಾ ಚುನಾವಣೆಗೆ ಮತ ಕೇಳಲು ಬಂದಿಲ್ಲ, ಬದಲಾಗಿ ಓರ್ವ ಸೇವಕನಾಗಿ ಇತ್ತೀಚೆಗೆ ಮುಗಿದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಪಕ್ಷವನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ ಹೇಳಲು ಬಂದಿದ್ದೇನೆ. ನಮ್ಮ ಡಬಲ್‌ ಎಂಜಿನ್‌ ಸರ್ಕಾರ ಮಧ್ಯಪ್ರದೇಶದಲ್ಲಿ ಡಬಲ್‌ ಸ್ಪೀಡ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದೇ ವೇಳೆ ವಿಪಕ್ಷ ಕಾಂಗ್ರೆಸ್‌ ಬಡವರು, ರೈತರು ಮತ್ತು ಬುಡಕಟ್ಟು ಸಮುದಾಯವನ್ನು ದೀರ್ಘ ಕಾಲದಿಂದ ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕರಿಗೆ ಚುನಾವಣೆ ಸಮಯದಲ್ಲಿ ಮಾತ್ರವೇ ಹಳ್ಳಿಗಳು, ಬಡವರು ಮತ್ತು ರೈತರು ನೆನಪಾಗುತ್ತಾರೆ ಎಂದು ಕಿಡಿಕಾರಿದರು.

click me!