ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ: ಸಚಿವ ಖರ್ಗೆ

By Kannadaprabha NewsFirst Published Feb 11, 2024, 10:30 PM IST
Highlights

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ ಜೊತೆಗೆ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ: ಸಚಿವ ಪ್ರಿಯಾಂಕ್ ಖರ್ಗೆ 

ಚಿತ್ತಾಪುರ(ಫೆ.11): ನಮ್ಮ ಸರ್ಕಾರ ಆಳುವ ಸರ್ಕಾರ ಅಲ್ಲ. ಬದಲಿಗೆ ಆಲಿಸುವ ಸರ್ಕಾರವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ವಿಧಾನಸೌಧವನ್ನು‌ ವ್ಯಾಪಾರಸೌಧವನ್ನಾಗಿ ಮಾಡಿದ್ದರು. ಆದರೆ ನಾವು ಅಧಿಕಾರಕ್ಕೆ‌ ಬಂದ ಮೇಲೆ ವಿಧಾನಸೌಧವನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿದ್ದೇವೆ.‌ ನಿನ್ನೆ ನಡೆದ ಸಾರ್ವಜನಿಕರ ಆವಾಹಲು ( ಜನಸ್ಪಂದನ ) ಕಾರ್ಯಕ್ರಮದಲ್ಲಿ ಸುಮಾರು ೨೦,೦೦೦ ಜನರು ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ಸಿಎಂ ಅವರ ಗಮನಕ್ಕೆ ತಂದು, ಪರಿಹಾರ ಕಂಡುಕೊಂಡರು. ಇದು ಜನಪರ ಸರ್ಕಾರವೊಂದರ ಬದ್ಧತೆಯ ಪ್ರತೀಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಕಲಬುರಗಿ ವತಿಯಿಂದ ೨೦೧೯-೨೦ ಸಾಲಿನ ಡಿಎಂಎಫ್ ಯೋಜನೆಯಡಿ ಚಿತ್ತಾಪುರ ತಾಲೂಕಿನ ಸಾವತಖೇಡ ಗ್ರಾಮದಿಂದ ಜೀವನ ಮಾರಡಗಿವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು (ಅಂದಾಜು ಮೊತ್ತ ರು.೨೬೬.೫೫ ಲಕ್ಷ) ನೆರವೇರಿಸಿ ಮಾತನಾಡಿದರು.

ಶಕ್ತಿ ಯೋಜನೆ: ನಿತ್ಯ 60 ಲಕ್ಷ ಮಹಿಳೆಯರ ಪ್ರಯಾಣ, ಸಚಿವ ರಾಮಲಿಂಗಾ ರೆಡ್ಡಿ

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ ಜೊತೆಗೆ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಬಗ್ಗೆ ಬಿಜೆಪಿಯವರು ಏನೇ ಹೇಳಿದರೂ ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದರು.

ರೇಲ್ವೆ ವಲಯ, ನಿಮ್ಝ್ ಸೇರಿದಂತೆ ಹಲವಾರು ಅಭಿವೃದ್ಧಿಪರವಾದ ಯೋಜನೆಗಳು ಮಂಜೂರಾಗಿದ್ದರೂ ಕೂಡಾ ಜಾರಿಗೆ ಬಂದಿಲ್ಲ. ಕಾರಣ, ಕೇಂದ್ರ ಸರ್ಕಾರದ ಹಾಗೂ ಕಲಬುರಗಿ ಸಂಸದರ ನಿರ್ಲಕ್ಷ್ಯತನ ಎಂದು‌ ದೂರಿದರು. ಕೇಂದ್ರ ಸರ್ಕಾರದ ನಿರ್ಲಕ್ಷತನ ಎಷ್ಟು ಮುಂದುವರೆದಿದೆ ಎಂದರೆ ನಮ್ಮ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಅನುದಾನದ ಪಾಲು ಸರಿಯಾಗಿ ಕೊಡುತ್ತಿಲ್ಲ. ಈ ಬಗ್ಗೆ ನಾವು ಕೇಳಲು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿ ಬಂದೆವು ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

click me!