ಬಳ್ಳಾರಿಯಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ..!

By Girish GoudarFirst Published Sep 27, 2022, 11:50 PM IST
Highlights

ರೆಡ್ಡಿ ಸಹೋದರರು ಪ್ರತಿ ಬಾರಿ ಆಪರೇಷನ್ ಕಮಲ್ ಬಗ್ಗೆ ಮಾತನಾಡಿದಾಗಲೆಲ್ಲ ಒಂದಲ್ಲೊಂದು  ರೀತಿಯ ರಾಜಕೀಯ ಬೆಳವಣಿಗಗಳು ನಡೆದಿದೆ ಎನ್ನುವುದಕ್ಕೆ ಹಿಂದಿನ ಘಟನೆಗಳೇ ಸಾಕ್ಷಿ 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಸೆ. 27):  ಗಣಿ ನಾಡು ಬಳ್ಳಾರಿಯಲ್ಲಿ ಮೊತ್ತೊಮ್ಮೆ ಆಪರೇಷನ್ ಕಮಲದ ಸದ್ದು ಕೇಳಿಬರುತ್ತದೆ. ‌ಮೊನ್ನೆ ಶಾಸಕ ಬಿ.ನಾಗೇಂದ್ರ ಸಚಿವ ಶ್ರೀರಾಮುಲುಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ರು. ಇದಕ್ಕೆ ತಿರುಗೇಟು ನೀಡುವಂತೆ ಇವತ್ತು ಶಾಸಕ ಸೋಮಶೇಖರ ರೆಡ್ಡಿ ಬಳ್ಳಾರಿಯ ಮೂರ್ನಾಲ್ಕು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳೋ ಮೂಲಕ ಹೊಸ ಸಂಚಲನವನ್ನು ಮೂಡಿಸಿದ್ದಾರೆ. ಹಿಂದೆ ಇದೇ ರೀತಿ ಬಿಜೆಪಿ ನಾಯಕರ ಹೇಳಿಕೆಗಳನ್ನ ಲಘುವಾಗಿ ಪರಿಗಣಿಸಿದ್ದ 'ಕೈ' ಪಡೆ ಸರ್ಕಾರ ಕಳೆದುಕೊಂಡಿತ್ತು. ಇದೀಗ ಈ ಬಾರಿಯಾದರೂ ಅಲರ್ಟ್ ಆಗುತ್ತಾರಾ ಅಥವಾ ಚುನಾವಣೆ ಹೊತ್ತಿಗೆ ಪ್ರಮುಖ ಅಭ್ಯರ್ಥಿಗಳನ್ನು ಕಳೆದುಕೊಳ್ಳುತ್ತಾರೆ ಅನ್ನೋ ಯಕ್ಷ ಪ್ರಶ್ನೆ ಕಾಡುತ್ತಿದೆ.

ತಿರುಗೇಟು ನೀಡೋ ಭರದಲ್ಲಿ ಸಂಚಲನ ಸೃಷ್ಠಿಸಿದ ಸೋಮಶೇಖರ ರೆಡ್ಡಿ ಹೇಳಿಕೆ

2008 ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪರೇಷನ್ ಬಗ್ಗೆ ಮಾತನಾಡಿದಾಗ ಇಡೀ ಕಾಂಗ್ರೆಸ್ ಪಕ್ಷ ರೆಡ್ಡಿ ಹೇಳಿಕೆಯನ್ನ ಲಘುವಾಗಿ ಪರಿಗಣಿಸಿತ್ತು. ಬಳಿಕ ರೆಡ್ಡಿ ಕೊಟ್ಟ ಹೇಳಿಕೆ ನಿಜವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 2019 ರಲ್ಲಿ ಬಳ್ಳಾರಿಯಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಳ್ಳಾರಿಯಿಂದಲೇ ಆಪರೇಷನ್ ಕಮಲ ನಡೆಯುತ್ತೆ ಎಂದು ಹೇಳಿದಾಗಲೂ ಕಾಂಗ್ರೆಸ್ ನಿದ್ದೆಗೆ ಜಾರಿತ್ತು.‌ ಬಳಿಕ ಅಂದು ಕಾಂಗ್ರೆಸ್ ಶಾಸಕರಾಗಿದ್ದ ಆನಂದ್ ಸಿಂಗ್ ಕೈ ತೊರೆದು ಬಿಜೆಪಿ ಸೇರುವ ಮೂಲಕ ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದರು. ಹೀಗಾಗಿ ಅಂದು ಇಂದು ಮುಂದೆಯೂ ಆಪರೇಷನ್ ಆದ್ರೇ ಅದು ಬಳ್ಳಾರಿಯಿಂದಲೇ ಎನ್ನುವಂತಾಗಿದೆ. ಆಗ ಚುನಾವಣೆ ನಂತರ ನಡೆದ ಆಪರೇಷನ್ ಗಳು ಇದೀಗ ಚುನಾವಣೆ ಮುಂಚೆ ನಡೆಯೋ ಎಲ್ಲ ಲಕ್ಷಣಗಳು ಕಾಣುತ್ತಿವೆ. ಕಳೆದೆರಡು  ತಿಂಗಳ ಹಿಂದೆ ಸಚಿವ ಶ್ರೀರಾಮುಲು ನನ್ನ ಜೊತೆ ಹತ್ತಕ್ಕೂ ಹೆಚ್ಚು ಕೈ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದರು. ಇದರ ಬೆನ್ನಲ್ಲೇ ಇವತ್ತು ಮತ್ತೆ ಜನಾರ್ದನ ರೆಡ್ಡಿ ಸಹೋದರ ಶಾಸಕ ಸೋಮಶೇಖರ ರೆಡ್ಡಿ ಭಾರತ್ ಜೋಡೋ ವೇಳೆ ಬಳ್ಳಾರಿಯ ಮೂರ್ನಾಲ್ಕು  ಶಾಸಕರು ಬಿಜೆಪಿ ಸೇರುತ್ತಾರೆನ್ನು ಸುದ್ದಿ ಮತ್ತೆ ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದಾರೆಯೇ ಅನ್ನೋ ಅನುಮಾನ ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದೆ.

ಬಿಜೆಪಿ ನಡೆಸುತ್ತಿರುವ ದುರಾಡಳಿತದ ವಿರುದ್ಧ ರಾಹುಲ್‌ ಹೋರಾಟ: ಈಶ್ವರ ಖಂಡ್ರೆ

ಪಿಚ್ಚರ್ ಈಗ ಶುರುವಾಗಿದೆ, ಕಾದು ನೋಡಿ

ರೆಡ್ಡಿ ಸಹೋದರರು ಪ್ರತಿ ಬಾರಿ ಆಪರೇಷನ್ ಕಮಲ್ ಬಗ್ಗೆ ಮಾತನಾಡಿದಾಗಲೆಲ್ಲ ಒಂದಲ್ಲೊಂದು  ರೀತಿಯ ರಾಜಕೀಯ ಬೆಳವಣಿಗಗಳು ನಡೆದಿದೆ ಎನ್ನುವುದಕ್ಕೆ ಹಿಂದಿನ ಘಟನೆಗಳು ಸಾಕ್ಷಿಯಾಗಿವೆ. ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಮೊನ್ನೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ಮಾತನಾಡುವಾಗ ಸಚಿವ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ್ದರು. ಅವರ ಹೇಳಿಕೆ‌ ಮೀಸಲಾತಿಗಾಗಿ  ಮಾತಿನ ಭಾರಾಟೆಗೆ ಎನ್ನಬಹುದು.  ಆದ್ರೇ, ರೆಡ್ಡಿ ಹೇಳಿಕೆಯನ್ನ ನಿರ್ಲಕ್ಷ್ಯ ಮಾಡಬಾರದು ಎನ್ನುವದು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿರೋ ಮಾತಾಗಿದೆ..

ಯಾರು ಏನು ಮಾಡ್ತಾರೆ ನೋಡೋಣ?

ಈ ಮಧ್ಯೆ ಭಾರತ್ ಜೋಡೋ ಕಾರ್ಯಕ್ರಮದ ನಿಮಿತ್ತ ಬಳ್ಳಾರಿಗೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾರು ಏನು ಮಾಡ್ತಾರೋ ಮಾಡಲಿ ನೋಡೋಣ. ನಮಗೂ ಏನು ಮಾಡಬೇಕು ಅನ್ನೋದು ಗೊತ್ತಿದೆ ಎಂದಿದ್ದಾರೆ.  ಶಾಸಕರಾದ ಭೀಮಾನಾಯ್ಕ್, ಆನಂದ ಸಿಂಗ್, ನಾಗೇಂದ್ರ ಬೇರೆ ಪಕ್ಷದಿಂದ ಬಂದವರೇ ಆದ್ರೇ ಸದ್ಯಕ್ಕೆ ಕೆಲವರು  ಇಲ್ಲಿದ್ದಾರೆ. ಸಮಯ ಬಂದಾಗ ನಮ್ಮ ಅಸ್ತ್ರಗಳನ್ನು ಬಳಕೆ ಮಾಡ್ತೇವೆ ಎಂದಿದ್ದಾರೆ.. ಒಟ್ಟಾರೆ ರಾಜಕೀಯ ನಾಯಕರ ಹೇಳಿಕೆಗಳು ಮಾತ್ರ ಎಲ್ಲೋ ಒಂದು ಕಡೆ ಆಪರೇಷನ್ ಕಮಲ ನಡೆಯುತ್ತಿರೋದಕ್ಕೆ ಪುಷ್ಪಿ ನೀಡುವಂತಿದೆ.
 

click me!