ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್

By Kannadaprabha NewsFirst Published Sep 22, 2024, 5:24 PM IST
Highlights

ಮುಂದಿನ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಾನು ಈ ವೇದಿಕೆ ಮೇಲೆ ಮಾತನಾಡುವುದಿಲ್ಲ. ಇಲ್ಲಿ ನಾನೇ ಅಭ್ಯರ್ಥಿ. ನಾನು ಅಧ್ಯಕ್ಷನಾಗಿ ಯಾರಿಗೆ ಟಿಕೆಟ್ ನೀಡುತ್ತೇನೋ ಅವರಿಗೆ ಬೆಂಬಲ ನೀಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. 

ಚನ್ನಪಟ್ಟಣ (ಸೆ.21): ಮುಂದಿನ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಾನು ಈ ವೇದಿಕೆ ಮೇಲೆ ಮಾತನಾಡುವುದಿಲ್ಲ. ಇಲ್ಲಿ ನಾನೇ ಅಭ್ಯರ್ಥಿ. ನಾನು ಅಧ್ಯಕ್ಷನಾಗಿ ಯಾರಿಗೆ ಟಿಕೆಟ್ ನೀಡುತ್ತೇನೋ ಅವರಿಗೆ ಬೆಂಬಲ ನೀಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಪಟ್ಟಣದ ಆದಿಲ್ ಷಾ (ಟಿಪ್ಪು) ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಇಷ್ಟು ಕೆಲಸ ಮಾಡಿರುವ ನಾವು, ಮೂರುವರೆ ವರ್ಷಗಳಲ್ಲಿ ಎಷ್ಟು ಕೆಲಸ ಮಾಡಬಹುದು ಆಲೋಚಿಸಿ. ಚನ್ನಪಟ್ಟಣ ಗೊಂಬೆ ಕಾರ್ಖಾನೆ ಸಮಸ್ಯೆ ಬಗೆಹರಿಸಿದ್ದೇವೆ ಎಂದರು.

ನಿಮ್ಮ ರಾಜಕಾರಣದ ಇತಿಹಾಸದಲ್ಲಿ ಯಾವುದಾದರೂ ರಾಜಕಾರಣಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳಿದ್ದಾರಾ? ಇಲ್ಲವಾದರೆ, ಅವರು ಬಂದು ಮತ ಯಾಕೆ ಕೇಳಬೇಕು?. ನಮಗೆ ನಿಮ್ಮ ಮೇಲೆ ನಂಬಿಕೆ, ವಿಶ್ವಾಸವಿದೆ. ನಾವು ಕೊಟ್ಟ ಮಾತು ತಪ್ಪುವುದಿಲ್ಲ. ಗ್ರಾಮೀಣ ಭಾಗದಲ್ಲಿ ₹300 ಕೋಟಿ, ಪಟ್ಟಣ ಭಾಗದಲ್ಲಿ ₹200 ಕೋಟಿ ರೂಪಾಯಿ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Latest Videos

ಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ಜನರಿಗಾಗಿ: ಡಿ.ಕೆ.ಶಿವಕುಮಾರ್ ವಾಗ್ದಾಳಿ

ನಾನು ನಿಮ್ಮ ಸೇವಕನಾಗಿ ಬಂದಿದ್ದೇನೆ. ನಿಮ್ಮ ಮೇಲೆ ಅಧಿಕಾರ ಚಲಾಯಿಸಲು ಬಂದಿಲ್ಲ. ನಿಮ್ಮ ಮನೆಗೆ ಅವಕಾಶ ಬಂದಿದೆ, ಯಾಮಾರಬೇಡಿ. ಚನ್ನಪಟ್ಟಣದ ಜನರಿಗೆ ಒಳ್ಳೆಯದಾಗಬೇಕು. ಈ ಜನರ ಋಣ ತೀರಿಸಬೇಕು. ಈ ಕ್ಷೇತ್ರದ ಜನರ ಜತೆಗಿನ ಸಂಬಂಧ ಗಟ್ಟಿ ಮಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಅರ್ಜಿ ಕೊಟ್ಟಿರುವ ಎಲ್ಲರಿಗೂ ನೀವೇಶನ ನೀಡುವ ಆಸೆ: ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನ, ಮನೆ ನೀಡಲು ನಮಗೆ ಆಸೆ ಇದೆ. ಸಚಿವ ಜಮೀರ್ ಅಹ್ಮದ್ ಅವರು 5,000 ಮನೆ ಮಂಜೂರು ಮಾಡಿದ್ದಾರೆ. ಈಗ ನಿವೇಶನದ ಬದಲು 500 ಚ.ಅಡಿ ಮನೆ ಕಟ್ಟಿಕೊಡೋಣ ಎಂದು ಹೇಳಿದ್ದಾರೆ. ಜಮೀನ್ ಮತ್ತು ನಾನು ಕೂತು ಸಭೆ ಮಾಡಿ ನಿಮಗೆ ಮನೆ ನೀಡುವ ಕೆಲಸ ಮಾಡುತ್ತೇವೆ. 150 ಎಕರೆ ಜಮೀನನ್ನು ಹುಡುಕಿ ಬಡವರಿಗೆ ಸೈಟ್ ಹಂಚುತ್ತಿದ್ದೇವೆ. ಇನ್ನೂ 150 ಎಕರೆ ಖರೀದಿ ಮಾಡಿ ಜನರಿಗೆ ಸೈಟ್ ಕೊಡುತ್ತೇವೆ ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಸಿಇಓ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದೆ ಬೇರೆ ರಾಜ್ಯಕ್ಕೆ ಹೋಗ್ತಾರೆ: ಸಚಿವ ಜಮೀರ್ ಅಹ್ಮದ್‌

ಸ್ಥಳೀಯ ಕಾರ್ಪೊರೇಟರ್ ಗಳು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಈಗ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಬಿಸಾಕಿದ ತಕ್ಷಣ ಒಡೆದು ಹೋಗಲು ನಮ್ಮದು ಮಣ್ಣಿನ ಮಡಕೆ ಅಲ್ಲ. ಇದು ಬಲಿಷ್ಟವಾದ ಪಂಚ ಲೋಹದ ಪಾತ್ರೆ. ಈ ಭಾಗದಲ್ಲಿ ಇನ್ನೂ ಅನೇಕ ಜನ ನಮ್ಮ ಪಕ್ಷ ಸೇರಲಿದ್ದಾರೆ. ಇನ್ನೂ ಯಾರೆಲ್ಲಾ ಸೇರುತ್ತಾರೆ ಕಾದುನೋಡಿ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

click me!