ವೀರಶೈವ ಅಧಿವೇಶನ ಬಗ್ಗೆ ಅಸಮಾಧಾನ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

By Kannadaprabha NewsFirst Published Dec 29, 2023, 12:30 AM IST
Highlights

ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಭಾಗವಹಿಸಲಿಲ್ಲ. ಇದರಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು (ಡಿ.29): ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಭಾಗವಹಿಸಲಿಲ್ಲ. ಇದರಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಲ್ಇ ಸೊಸೈಟಿ ಅಧ್ಯಕ್ಷ ಪ್ರಭಾಕರ ಕೋರೆ ಅವರ 50ನೇ ವಿವಾಹ ವಾರ್ಷಿಕೋತ್ಸವ ಮತ್ತು ವಿಜಯಪುರದಲ್ಲಿ ತಮ್ಮ‌ ನೇತೃತ್ವದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮಗಳು ಪೂರ್ವನಿಗದಿಯಾಗಿದ್ದವು. 

ಹೀಗಾಗಿ, ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಭಾಗವಹಿಸಲು ಆಗಲಿಲ್ಲ ಎಂದು ತಿಳಿಸಿದರು. ಅಧಿವೇಶನದಲ್ಲಿ ಜಾತಿ ಗಣತಿ ಕುರಿತು ನಿರ್ಣಯ ಅಂಗೀಕರಿಸಲಾಗಿದೆ. ಲಿಂಗಾಯತರಲ್ಲಿ ಇರುವ 60-70 ಒಳಪಂಗಡಗಳೆಲ್ಲವೂ ಒಂದೇ ಸೂರಿನಡಿ ಬರಬೇಕು. ಹೀಗಾದರೆ ಮಾತ್ರ ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯ ಲಾಭ ಸಿಗುತ್ತದೆ. ಇದನ್ನೇ ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ ಎಂದು ಹೇಳಿದರು.

ಸತ್ಯದ ತಳಹದಿ ಸರ್ವರ ಒಳಿತು ಇರುವುದೇ ಧರ್ಮ: ಮಾಜಿ ಶಾಸಕ ಸಿ.ಟಿ.ರವಿ

ಜಾರಕಿಹೊಳಿ ಸ್ಪರ್ಧಿಸಿದರೆ ಜಯ: ಲೋಕಸಭಾ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನಗಳನ್ನು ಗಳಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಸತೀಶ್‌ ಜಾರಕಿಹೊಳಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದು ಈ ಬಾರಿ ಕಣಕ್ಕಿಳಿದರೆ ನೂರಕ್ಕೆ ನೂರು ಜಯಗಳಿಸಲಿದ್ದಾರೆ. ಪಕ್ಷ ಸೂಚಿಸಿದರೆ ಜಾರಕಿಹೊಳಿಯೂ ಸ್ಪರ್ಧೆ ಮಾಡಬೇಕಾಗುತ್ತದೆ, ಎಂ.ಬಿ.ಪಾಟೀಲ್‌ ಸಹ ಕಣಕ್ಕಿಳಿಯಬೇಕಾಗುತ್ತದೆ ಎಂದು ತಿಳಿಸಿದರು.

ಕೊಲೆ ಕೇಸಲ್ಲಿ ಮೌಲ್ವಿ ಹೆಸರು ಕೈಬಿಟ್ಟಿಕ್ಕೆ ಯತ್ನಾಳ್ ಟೀಕೆ: ನಗರದ ರೌಡಿಶೀಟರ್‌ ಹೈದರ್‌ ನದಾಫ್‌ ಕೊಲೆ ಪ್ರಕರಣದಲ್ಲಿ ಮೌಲ್ವಿ ತನ್ವೀರ್ ಹಾಶ್ಮಿ ಪ್ರಮುಖ ಆರೋಪಿಯಾಗಿದ್ದರೂ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಕೈಬಿಟ್ಟಿದ್ದಾರೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದು, ಇದಕ್ಕೆ ದೊಡ್ಡ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ 2023ರ ಮೇ 6ರಂದು ನಡೆದ ರೌಡಿಶೀಟರ್ ಹೈದರ್ ನದಾಫ್ ಕೊಲೆ ಪ್ರಕರಣದಲ್ಲಿ ಮೌಲ್ವಿ ತನ್ವೀರ್ ಹಾಶ್ಮಿ ಪ್ರಮುಖ ಆರೋಪಿ. ಚಾರ್ಜ್‌ಶೀಟ್‌ನಿಂದ ಅವರ ಹೆಸರು ಕೈಬಿಟ್ಟಿದ್ದು ಏಕೆ ಎಂದು ಯತ್ನಾಳ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಶ್ನಿಸಿದ್ದರು. ಜತೆಗೆ, ಯಾರ ಒತ್ತಡದ ಮೇಲೆ ಮೌಲ್ವಿ ಹೆಸರು ಕೈಬಿಡಲಾಗಿದೆ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದರು.

ರಾಜ್ಯದ ಅಭಿವೃದ್ಧಿಯಲ್ಲಿ ರಾಜಕಾರಣಿಗಳ ಭಾವನೆ ಒಂದೇ ಆಗಿರಬೇಕು: ಸಚಿವ ಕೆ.ಜೆ.ಜಾರ್ಜ್‌

ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಂ.ಬಿ.ಪಾಟೀಲ್‌, ರೌಡಿಶೀಟರ್‌ ಹೈದರ್ ಕೊಲೆಯಲ್ಲಿ ಯಾರ ಪಾತ್ರವಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೈದರ್ ಕೊಲೆ ನಡೆದಿರುವುದು ರಾಜಕೀಯ ಕಾರಣಗಳಿಂದ ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ತನಿಖೆ ಮಾಡಿ ನಿರ್ಣಯ ತೆಗೆದುಕೊಂಡಿದ್ದಾರೆ. ಪ್ರಕರಣಲ್ಲಿ ಯಾರ ಪಾತ್ರ ಇಲ್ಲವೋ, ಅವರ ಹೆಸರು ಆರೋಪಪಟ್ಟಿಯಿಂದ ಕೈಬಿಟ್ಟಿದ್ದಾರೆ. ಬಹುಶಃ ಯತ್ನಾಳ್‌ಗೆ ಕಾನೂನು ಮೇಲೂ ಗೌರವ ಇಲ್ಲವೆನಿಸುತ್ತದೆ. ಚಾರ್ಜ್‌ಶೀಟ್‌ನಲ್ಲಿ ಹೆಸರು ತೆಗೆಯುವಂತೆ ಸರ್ಕಾರ ನಿರ್ಣಯ ಕೈಗೊಂಡಿಲ್ಲ. ಯತ್ನಾಳ ವಿರುದ್ಧವೂ ಸಾಕಷ್ಟು ಎಫ್‌ಐಆರ್‌, ಜಾರ್ಜ್‌ಸೀಟ್‌ ಇಲ್ಲವೇ ಎಂದು ಎಂ.ಬಿ.ಪಾಟೀಲ ಪ್ರಶ್ನಿಸಿದರು.

click me!