ಬಿಜೆಪಿ ಪಕ್ಷಕ್ಕೆ ಹೊಸ ಯುವಕರು ಬರಬೇಕು: ನಳಿನ್‌ ಕುಮಾರ್‌ ಕಟೀಲ್‌

By Govindaraj SFirst Published Mar 14, 2024, 5:23 AM IST
Highlights

ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಪಕ್ಷದ ಯಾರೇ ಕಾರ್ಯಕರ್ತರಿಗೂ ಲೋಕಸಭೆಯ ಟಿಕೆಟ್‌ ನೀಡಿದರೂ ಖುಷಿ ಇದೆ. 

ಮಂಗಳೂರು (ಮಾ.14): ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಪಕ್ಷದ ಯಾರೇ ಕಾರ್ಯಕರ್ತರಿಗೂ ಲೋಕಸಭೆಯ ಟಿಕೆಟ್‌ ನೀಡಿದರೂ ಖುಷಿ ಇದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕ್ಯಾ.ಬೃಜೇಶ್‌ ಚೌಟ ಅವರ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಯಾ. ಬೃಜೇಶ್‌ ಚೌಟ ಅವರನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದು, ಅವರ ಗೆಲುವಿಗಾಗಿ ಶ್ರಮಿಸುತ್ತೇನೆ. ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಅವರಿಗೆ ಬೆಂಬಲ ನೀಡಬೇಕು ಎಂದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಸುದೀರ್ಘ 15 ವರ್ಷಗಳ ಕಾಲ ಸೇವೆ ಸಲ್ಲಿಸುವ ಭಾಗ್ಯ ದೊರೆತಿದೆ. ನನ್ನ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಪಕ್ಷ ಗುಡಿಸು ಅಂದ್ರೆ ಗುಡಿಸ್ತೀನಿ, ಒರೆಸು ಅಂದ್ರೆ ಒರೆಸ್ತೀನಿ: ನಳಿನ್ ಕುಮಾರ್ ಕಟೀಲ್

ಯುವಕರು ಬರಬೇಕು: ಪಕ್ಷಕ್ಕೆ ಹೊಸ ಯುವಕರು ಬರಬೇಕು. ಹಿರಿಯರು ಯುವನಾಯಕರನ್ನು ಗುರುತಿಸಿ ಅವಕಾಶ ನೀಡುತ್ತಿದ್ದಾರೆ. ಕ್ಯಾ.ಬೃಜೇಶ್‌ ಚೌಟ ಅವರನ್ನು ಪಕ್ಷ ಗುರುತಿಸಿ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಅವಕಾಶ ನೀಡಿದೆ. ಅವರ ಗೆಲುವಿಗೆ ಒಟ್ಟಾಗಿ ಶ್ರಮಿಸಲಿದ್ದೇವೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಲೋಕಸಭಾ ಚುನಾವಣೆಲ್ಲಿ ಗೆಲವಿನ ಅಂತರ 3 ಲಕ್ಷ ಮತ ಇರಲಿ: ಚುನಾವಣೆಯಲ್ಲಿ ಪ್ರತಿ ಬೂತ್‌ ಗೆಲುವು ನಮ್ಮದಾಗಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ 2.74 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದು, ಈ ಬಾರಿ ಬೂತ್‌ಗಳ ಸಂಖ್ಯೆಯೂ ಜಾಸ್ತಿಯಾಗಿದ್ದು, ಗೆಲವಿನ ಅಂತರ 3 ಲಕ್ಷ ಗುರಿ ಇರಬೇಕು ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಮಂಗಳೂರಿನ ಸಂಘನಿಕೇತನದಲ್ಲಿ ದ.ಕ. ಬಿಜೆಪಿ ಬೂತ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಂಗಳೂರಿಗೆ ಇನ್ನೊಂದು ವಿಮಾನ ನಿಲ್ದಾಣ: ದ.ಕ.ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಕೇಂದ್ರದಿಂದ ಮಂಜೂರುಗೊಂಡ ಬಗ್ಗೆ ಪ್ರಸ್ತಾಪಿಸಿದ ನಳಿನ್‌ ಕುಮಾರ್‌, ಮುಂದಿನ ವರ್ಷ ಮಂಗಳೂರಿನಲ್ಲಿ ಇನ್ನೊಂದು ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ ಎಂದರು. ಕಳೆದ 15 ವರ್ಷದಲ್ಲಿ ಗೂಂಡಾಗಿರಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಸದೆ ರಾಜಕಾರಣ ಮಾಡಿದ್ದೇನೆ. 2024ರಲ್ಲಿ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡಲು ಒಂದಾಗಿ ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 7 ಕೋಟಿ ಕನ್ನಡಿಗರ ಆತ್ಮವಾದ ವಿಧಾನಸೌಧ ಪ್ರಜಾತಂತ್ರದ ದೇಗುಲ. ಅಲ್ಲಿಯೇ ಪಾಕ್‌ ಪರ ಘೋಷಣೆ ಕೂಗಿದಾಗ ಸರ್ಕಾರ ಅದನ್ನು ಹಗುರವಾಗಿ ಪರಿಗಣಿಸಿದ್ದು ನೋವು ತಂದಿದೆ. ಪ್ರಸಕ್ತ ಉಗ್ರವಾದಿಗಳು, ರಾಷ್ಟ್ರ ವಿರೋಧಿಗಳು ರಾಜಾರೋಷವಾಗಿ ಬೀದಿಗಿಳಿದು ಕೆಲಸ ಮಾಡುತ್ತಿದ್ದಾರೆ. ಅಪಪ್ರಚಾರಗಳಿಗೆ ಕಿವಿಗೊಡದೆ ಗಟ್ಟಿಯಾಗಿ ನಿಂತು ಮೋದಿ ಕೈಬಲಡಿಸುವಲ್ಲಿ ಶ್ರಮಿಸಬೇಕು ಎಂದರು.

ಪ್ರಧಾನಿ ಮೋದಿ ಆಡಳಿತದ ಪಿಕ್ಚರ್‌ ಇನ್ನೂ ಬಾಕಿ ಇದೆ: ದೇವೇಂದ್ರ ಫಡ್ನವಿಸ್‌

ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಅಧ್ಯಕ್ಷತೆ ವಹಿಸಿ, ಜಿಲ್ಲೆಯಲ್ಲಿ 1,875 ಬೂತ್‌ಗಳಿದ್ದು, 61 ಮಹಾಶಕ್ತಿ ಕೇಂದ್ರಗಳಿವೆ, 8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಪ್ರಮುಖರ ನೇಮಕ ಮಾಡಲಾಗಿದೆ ಎಂದರು. ಶಾಸಕ ಉಮಾನಾಥ ಕೋಟ್ಯಾನ್‌ ಪ್ರಾಸ್ತಾವಿಕ ಮಾತನಾಡಿ, ತಾವರೆ ಚಿನ್ನೆ ನಮ್ಮ ಅಭ್ಯರ್ಥಿಯಾಗಿದ್ದು, ಮೂರನೇ ಬಾರಿ ಮೋದಿ ಪ್ರಧಾನಿ ಮಾಡಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು. ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದ್ದು, ಮೋದಿ ನಾಯಕತ್ವ ಪ್ರಪಂಚಕ್ಕೆ ಅಗತ್ಯವಿದೆ ಎಂದರು.

click me!