ಸಚಿವ ಸ್ಥಾನ ವಂಚಿತರಿಗೂ ಹೊಸ ಜವಾಬ್ದಾರಿ : ಬೊಮ್ಮಾಯಿ

By Kannadaprabha NewsFirst Published Aug 5, 2021, 7:27 AM IST
Highlights
  • ರಾಜ್ಯದ ಜನತೆಯ ಸಮಸ್ಯೆಗೆ ಸ್ಪಂದಿಸಿ, ಉತ್ತಮ ಆಡಳಿತ ನೀಡುವ ಉದ್ದೇಶ
  • ಅನುಭವ ಹಾಗೂ ಹೊಸ ಉತ್ಸಾಹ ಶಕ್ತಿಯ ಸಮ್ಮಿಶ್ರಣದೊಂದಿಗೆ ಸಚಿವ ಸಂಪುಟ ರಚನೆ 
  • ಕೆಲವು ಹಿರಿಯರನ್ನು ಕೈಬಿಡಲಾಗಿದ್ದು, ಅವರಿಗೆ ಹೊಸ ಜವಾಬ್ದಾರಿ

 ಬೆಂಗಳೂರು (ಆ.05):  ರಾಜ್ಯದ ಜನತೆಯ ಸಮಸ್ಯೆಗೆ ಸ್ಪಂದಿಸಿ, ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಅನುಭವ ಹಾಗೂ ಹೊಸ ಉತ್ಸಾಹ ಶಕ್ತಿಯ ಸಮ್ಮಿಶ್ರಣದೊಂದಿಗೆ ಸಚಿವ ಸಂಪುಟ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೆಲವು ಹಿರಿಯರನ್ನು ಕೈಬಿಡಲಾಗಿದ್ದು, ಅವರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಹೈಕಮಾಂಡ್‌ ತೀರ್ಮಾನಿಸಿದೆ. ಪಕ್ಷವನ್ನು ಬಲಗೊಳಿಸಲು ಅವರಿಗೆ ಜವಾಬ್ದಾರಿ ನೀಡಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇಲ್ಲದಿರುವುದು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಸಚಿವರಾಗದಿರುವುದು ವರಿಷ್ಠರ ತೀರ್ಮಾನ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಜತೆ ಮಾತನಾಡಿದ್ದಾರೆ. ಅಲ್ಲದೇ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಬಿ.ವೈ.ವಿಜಯೇಂದ್ರ ಜತೆ ಮಾತುಕತೆ ನಡೆಸಿದ್ದಾರೆ. ಸಮಗ್ರವಾಗಿ ಚಿಂತನೆ ನಡೆಸಿ ನೂತನ ಸಚಿವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಆಯವುದೇ ಗೊಂದಲವಾಗಲಿ, ಒತ್ತಡವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭಿನ್ನಮತ ನೋಡಿದ್ರೆ ಮಧ್ಯಂತರ ಚುನಾವಣೆ ಎದುರಾಗಬಹುದು: ಸಿದ್ದು ಸ್ಪೋಟಕ ಹೇಳಿಕೆ

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡಲಾಗಿದೆ. ಗೃಹ ಸಚಿವ ಅಮಿತ್‌ ಶಾ ಮಾರ್ಗದರ್ಶನ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜಕೀಯ ಚತುರತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರ್ಶೀವಾದ ಸಚಿವ ಸಂಪುಟಕ್ಕೆ ಇದೆ. ರಾಜ್ಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಿಶ್ವಾಸ ಗಳಿಸಿ ಒಳ್ಳೆಯ ಆಡಳಿತ ನೀಡಲು ತೀರ್ಮಾನಿಸಿದ್ದೇವೆ ಎಂದರು.

ಸಚಿವ ಸ್ಥಾನದಿಂದ ವಂಚಿತರಾಗಿರುವವರನ್ನು ಸಮಾಧಾನಪಡಿಸಲಾಗುವುದು. 34 ಮಂದಿಗೆ ಮಾತ್ರ ಸಚಿವ ಸಂಪುಟದಲ್ಲಿ ಅವಕಾಶ ಲಭ್ಯ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಅಲ್ಲದೇ, ಕೆಲವರನ್ನು ಕೈ ಬಿಡಲಾಗಿದೆ. ಮುನಿಸಿಕೊಂಡಿರುವ ವಿಚಾರವಾಗಿ ಸಮಾಧಾನ ಮಾಡಲಾಗುವುದು ಎಂದು ಹೇಳಿದರು.

click me!