
ಚಳ್ಳಕೆರೆ (ಏ.10): ರಾಜ್ಯದ ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡಿ ಸುಭಿಕ್ಷ ಮಾಡಲು ಮಹಾನ್ ಯೋಜನೆಯನ್ನು ಜೆಡಿಎಸ್ ರೂಪಿಸಿದ್ದು, ಇದನ್ನು ಸಾಕಾರಗೊಳಿಸಲು ಜೆಡಿಎಸ್ಗೆ ರಾಜ್ಯದಲ್ಲಿ 130 ಸ್ಥಾನ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ರೈತರೂ ಸೇರಿ ಎಲ್ಲಾ ವರ್ಗದ ಜನರ ಹಿತ ಕಾಯುವಲ್ಲಿ ವಿಫಲವಾಗಿವೆ. ಯಾವ ಸರ್ಕಾರವೂ ಮಾಡದ ರೈತ ಸಾಲ ಮನ್ನಾವನ್ನು ನಾನು ಮಾಡಿದೆ.
ಜೆಡಿಎಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ 26 ಲಕ್ಷ ರೈತ ಕುಟುಂಬಗಳ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದೇನೆ. ತಾಲೂಕಿನ 19 ಸಾವಿರ ರೈತರ 160 ಕೋಟಿ ರು. ಸಾಲ ಮನ್ನಾ ಮಾಡಿದ್ದೇನೆ. ಉಚಿತ ಶಿಕ್ಷಣ, ಆರೋಗ್ಯ, ಸರ್ಕಾರದ ಯೋಜನೆಗಳು ಬಡ ಜನರಿಗೆ ತಲುಪುವ ಕಾರ್ಯ ಮಾಡುತ್ತಾ ಬಂದಿದ್ದೇನೆ. ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದೇನೆ. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ರೈತರಿಗೆ ನೀಡಬೇಕಾದ 18 ಸಾವಿರ ಕೋಟಿ ರು. ಸಾಲವನ್ನು ಇನ್ನೂ ಮನ್ನಾ ಮಾಡಿಲ್ಲ, ರೈತರ ಬಗ್ಗೆ ಕೇವಲ ಪ್ರಚಾರ ಮಾಡುತ್ತಾ ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರಾಜ್ಯದಲ್ಲಿ ಪಂಚರತ್ನ ರಥ ಯಾತ್ರೆಯ ಮೂಲಕ ಜನಜಾಗೃತಿ ಮಾಡುತ್ತಿದ್ದು, ಜನರು ಈ ಬಾರಿ ಜೆಡಿಎಸ್ಗೆ ಅಧಿಕಾರ ಕೊಡುವ ಸಂಕಲ್ಪ ಮಾಡಿದ್ದಾರೆಂದರು.
ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗ್ತಿದ್ದವರು ನೀವು: ಸಿದ್ದುಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಮಾಜಿ ಪ್ರಧಾನಮಂತ್ರಿ ದೇವೇಗೌಡ್ರರು 92ನೇ ವಯಸ್ಸಿನಲ್ಲೂ ರಾಷ್ಟ್ರ ಮತ್ತು ರಾಜ್ಯದ ಹಿತದ ಬಗ್ಗೆ ಚಿಂತನೆ ನಡೆಸುತ್ತಾರೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಅವರ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಾರೆ ಎಂದರು. ಇದಕ್ಕೂ ಮುನ್ನ ಜೆಡಿಎಸ್ನ ಸಾವಿರಾರು ಕಾರ್ಯಕರ್ತರು ಕುಮಾರಸ್ವಾಮಿಗೆ ಕೋಸು, ಹೂ, ಈರುಳ್ಳಿ, ಈಚಲಕಾಯಿ, ಸಾಲ ಮನ್ನಾ ಮಾಡಿದ ಆದೇಶ ಪ್ರತಿಗಳ ಹಾರವನ್ನು ಹಾಕಿ ಪಟಾಕಿ ಸಿಡಿಸಿ ವೇದಿಕೆಗೆ ಬರಮಾಡಿಕೊಂಡರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ರಾಷ್ಟ್ರೀಯ ಪಕ್ಷಗಳಿಗೇ ಅಧಿಕಾರಕ್ಕೆ ಬರುವ ಗ್ಯಾರೆಂಟಿಯೇ ಇಲ್ಲ: ಮುಖ್ಯಮಂತ್ರಿ ಚಂದ್ರು
ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ಕುಮಾರ್ ಮಾತನಾಡಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ, ಮಾಜಿ ಶಾಸಕ ಜಿ.ಬಸವರಾಜ ಮಂಡಿಮಠ, ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಅಧ್ಯಕ್ಷ ಎಚ್.ಆನಂದಪ್ಪ, ಹಿರಿಯೂರು ಅಭ್ಯರ್ಥಿ ಎಂ.ರವೀಂದ್ರ, ಹನುಮಂತಪ್ಪ, ಎಲೆಭದ್ರಣ್ಣ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಕವಿತಾ ನಾಯಕಿ, ತಿಪ್ಪಮ್ಮ, ನಿರ್ಮಲ, ಸಿ.ಎಂ.ವಿಶುಕುಮಾರ್, ನಾಗವೇಣಿ, ಟಿ.ವಿಜಯಕುಮಾರ್, ರವಿಕುಮಾರ್, ಎಸ್.ಟಿ.ವಿಜಯ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.