ಖರ್ಗೆ, ಪರಮೇಶ್ವರರನ್ನು ಮುಗಿಸಿರುವ ಸಿದ್ಧರಾಮಯ್ಯ, ಡಿಕೆಶಿಯನ್ನು ಕೂಡಾ ಮುಗಿಸ್ತಾರೆ: ಕಟೀಲು

By Suvarna NewsFirst Published Mar 20, 2023, 10:19 PM IST
Highlights

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು‌ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಭಟ್ಕಳಕ್ಕೆ ಭೇಟಿ ನೀಡಿದ್ದ‌ ನಳಿನ್, ಆಂಜನೇಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಉತ್ತರ ಕನ್ನಡ (ಮಾ.20): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು‌ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಭಟ್ಕಳಕ್ಕೆ ಭೇಟಿ ನೀಡಿದ್ದ‌ ನಳಿನ್, ಆಂಜನೇಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಟ್ಕಳ ಶಂಶುದ್ಧೀನ್ ಸರ್ಕಲ್‌ನಿಂದ ಪ್ರಾರಂಭಗೊಂಡ ವಿಜಯ ಸಂಕಲ್ಪ ಯಾತ್ರೆ ಭಟ್ಕಳ ನಗರದಾದ್ಯಂತ ಸಾಗಿತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸುನೀಲ್ ನಾಯ್ಕ್ ಸಾಥ್ ನೀಡಿದರು. ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿದ ನಳಿನ್, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯಸಂಕಲ್ಪ ಯಾತ್ರೆ ಪ್ರಾರಂಭದ ಬಳಿಕ ಪ್ರಜಾಧ್ವನಿ, ಪಂಚರತ್ನ ಅಡಗಿ ಹೋಗಿ, ಊರಿಗೆ ಹೋಗಿದೆ. ಬಿಜೆಪಿ ಸಭೆ, ಸಮಾವೇಶ, ಸರಕಾರದ ಸೌಲಭ್ಯಗಳ ವಿತರಣೆ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ನಡೆಸುತ್ತಿದೆ. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪಿಎಫ್‌ಐ ನಿಷೇಧ ಮಾಡುವ ಮೂಲಕ ದೇಶದ ರಕ್ಷಣೆಗೆ ಆದ್ಯತೆ ನೀಡಲಾಗಿದೆ.

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ 3 ಜನರ ಹೋರಾಟ ನಡೆಯುತ್ತಿದ್ದು, ಆಂತರಿಕ ಕಲಹ ಪ್ರಾರಂಭವಾಗಿದೆ.‌ ಸಿದ್ಧರಾಮಯ್ಯ ಖರ್ಗೆ, ಪರಮೇಶ್ವರ ಅವರನ್ನು ಮುಗಿಸಿದ್ದು, ಡಿಕೆಶಿಯನ್ನು ಕೂಡಾ ಮುಗಿಸ್ತಾರೆ. ಸಿದ್ಧರಾಮಯ್ಯನವರಿಗೆ ಕ್ಷೇತ್ರವೇ ಇಲ್ಲ, ವರುಣಾ, ಬಾದಾಮಿ, ಕೋಲಾರದಲ್ಲಿ ಸೋತಿನ ಭೀತಿ ಎದುರಾಗಿದೆ.‌ ಕಾಂಗ್ರೆಸಿನವರಿಗೆ ಹೀನಾಯ ಸ್ಥಿತಿ ಬಂದಿದ್ದು, ಎಲ್ಲಿ ನಿಂತ್ರೆ ಗೆಲ್ತದೆ ಅಂತಾ ನೋಡೊ ನತದೃಷ್ಠ ಸ್ಥಿತಿ ಬಂದಿದೆ.‌ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕರ ಸ್ಥಿತಿ ಹೀಗಾದ್ರೆ ಕಾರ್ಯಕರ್ತರ ಸ್ಥಿತಿ ಹೇಗಿರಬೇಡ..? ಕಾಂಗ್ರೆಸ್ಸಿನವರಿಗೆ ಸರಕಾರ ಬರಲ್ಲ ಎಂದು ಗ್ಯಾರಂಟಿಯಿದೆ, ಅದಕ್ಕೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡ್ತಿದ್ದಾರೆ.‌ ಸುದೀರ್ಘ ಆಡಳಿತವಿದ್ದಾಗಲೂ ಕರೆಂಟ್ ನೀಡದವರು ಈಗ ಗ್ಯಾರಂಟಿ ಕಾರ್ಡ್ ನೀಡಲು ಹೊರಟಿದ್ದಾರೆ ಎಂದರು.

ಜೆಡಿಎಸ್‌ನಲ್ಲಿ ಹಾಸನದ ಸೀಟ್ ಯಾರಿಗೆ ಕೊಡೋದು ಎಂದು ಕುಟುಂಬದಲ್ಲಿ ಗಲಭೆ ಪ್ರಾರಂಭವಾಗಿದೆ. ಇದರಿಂದ ಪಂಚರತ್ನ ಪೂರ್ಣ ಪಂಚರ್ ಆಗಿದೆ. ಶರ್ಟ್ ಹೊಲಿಸಿ ಮುಖ್ಯಮಂತ್ರಿಯಾಗುವ ಕನಸು ಹೊತ್ತವರಿಗೆ ಮುಂದಿನ ಚುನಾವಣೆಯಲ್ಲಿ ಮುಖಭಂಗವಾಗುತ್ತದೆ. ರಾಜ್ಯದ ಕರಾವಳಿ ಭಾಗಗಳಲ್ಲಂತೂ ಕಾಂಗ್ರೆಸ್ ಮುಕ್ತ ಕರಾವಳಿಯಾಗುತ್ತೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಭಾರತವನ್ನ ಹೀಯಾಳಿಸಲಾಗ್ತಿತ್ತು: ಲಕ್ಷ್ಮಣ ಸವದಿ

ಇನ್ನು ಉರಿಗೌಡ, ನಂಜೇಗೌಡ ವಿವಾದ ವಿಚಾರ ಸಂಬಂಧಿಸಿ ಪ್ರತಿಕ್ರಯಿಸಿದ ನಳಿನ್, ಕಾಂಗ್ರೆಸ್ ಸರಕಾರ ಹತ್ತಾರು ಇತಿಹಾಸ ತಿರುಚಿದೆ. ಉರಿಗೌಡ, ನಂಜೇಗೌಡರ ವಿಚಾರದಲ್ಲೂ ನಡೆದಿರಬಹುದು. ಈ ಬಗ್ಗೆ ಹೇಳಿಕೆ ನೀಡಲು ನಾನು ಇತಿಹಾಸ ತಜ್ಞನಲ್ಲ. ಇತಿಹಾಸದ ವಿಚಾರದ ಬಗ್ಗೆ ಚರ್ಚೆಗಳಾಗಲೀ, ಸತ್ಯಾಸತ್ಯತೆಗಳು ಹೊರಗೆ ಬರಲಿ ಎಂದರು.

ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಬಿಜೆಪಿ ಸಮಾವೇಶ ಮಾಡುವುದಿಲ್ಲ: ನಳಿನ್‌ ಕುಮಾರ್ ಕಟೀಲ್

ಗೋಹತ್ಯಾ ನಿಷೇಧವನ್ನು ಸರಕಾರ ಜಾರಿಗೆ ತಂದಿದೆ. ಆದರೆ, ಪ್ರಸ್ತುತ ನ್ಯಾಯಾಲಯದಲ್ಲಿದ್ದು, ಆದೇಶ ಬರಬೇಕಿದೆ ಚುನಾವಣೆಯ ಕೊನೇ ಸಂದರ್ಭದಲ್ಲಿ ಬಿಜೆಪಿಯಿಂದ ಅಭಿವೃದ್ಧಿ ಮಾಡಲಾಗ್ತಿಲ್ಲ, ಈ ಹಿಂದೆಯಿಂದಲೂ ಮಾಡಲಾಗ್ತಿದೆ. ಸರಕಾರ ಈ ಹಿಂದೆಯೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.‌ ಸರಕಾರಿಂದ ಅನುದಾನ ಬಿಡುಗಡೆ ಹಿನ್ನೆಲೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗ್ತಿದೆ ಎಂದು ಹೇಳಿದ ನಳಿನ್, ರಾಹುಲ್ ಗಾಂಧಿ ರಿಟೈರ್ಡ್ ಮೋಡ್‌ಗೆ ಹೊರಟಿದ್ದಾರೆ. ಹತ್ತು ವರ್ಷ ಮೊದಲೇ ಯುವ ಕ್ರಾಂತಿ ಸಮಾವೇಶವನ್ನು ಮಾಡಿದ್ದರೆ ಉತ್ತಮವಾಗಿತ್ತು ಎಂದು ವ್ಯಂಗ್ಯವಾಡಿದರು.

click me!