
ಗಜೇಂದ್ರಗಡ (ಅ.13): ನಮ್ಮಪ್ಪನ ಮೇಲಾಣೆ, ಸಿದ್ರಾಮಣ್ಣ ಸಿಎಂ ಆಗಲ್ಲ ..! ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ನುಡಿದ ಭವಿಷ್ಯವಿದು. ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ರಾಹುಲ್ ಅವರು ಭಾರತ್ ಜೋಡೋ ಯಾತ್ರೆ ಆರಂಭಿಸುವ ಬದಲು ಕಾಂಗ್ರೆಸ್ ಜೋಡೋ ಯಾತ್ರೆ ಆರಂಭಿಸಬೇಕಿತ್ತು. ಸಿದ್ದು, ಡಿಕೆಶಿಯವರು ಎರಡು ಬಾಗಿಲಾದರೆ, ಮೂರನೇ ಬಾಗಿಲಾಗಿ ಖರ್ಗೆ ಆಯ್ಕೆಯಾಗಿದ್ದಾರೆ. ಹೀಗಾಗಿ, ಸಿದ್ರಾಮಣ್ಣ ಸಿಎಂ ಆಗಲ್ಲ ಎಂದರು.
ಸಿದ್ದರಾಮಯ್ಯನವರ ಅವಧಿಯಲ್ಲಿ ಅತಿ ಹೆಚ್ಚು ಡ್ರಗ್ ಮಾಫಿಯಾ ಇತ್ತು. ಸರ್ಕಾರಿ ಶಾಲೆಗಳಲ್ಲಿ ಡ್ರಗ್ಸ್, ಗಾಂಜಾಗಳು ಸಿಗುತ್ತಿದ್ದವು. ಶಿಕ್ಷಕರ ಹಗರಣ, ಪಿಎಸ್ಐ ಹಗರಣಗಳು ನಡೆದದ್ದು ಸಿದ್ದರಾಮಯ್ಯ ಅವರ ಅವಧಿಯಲ್ಲಿ. ಅಲ್ಲದೆ, ಅರ್ಕಾವತಿಯಲ್ಲಿ ಮಾಡಿದ ಹಣದಲ್ಲಿ ನೀವು ಸಿಕ್ಕಿ ಹಾಕೋತೀರಿ. ಇವತ್ತು ಸಿದ್ದರಾಮಯ್ಯನವರ ಮೇಲೆ ಲೋಕಾಯುಕ್ತ ಕೇಸ್ ಆಗಿದೆ. ನೀವು ಆವತ್ತೇ ಜೈಲಿಗೆ ಹೋಗಬೇಕಿತ್ತು. ಡಿಕೆಶಿ ಮಾತ್ರ ತಿಹಾರ ಜೈಲಿಗೆ ಹೋಗಲ್ಲ ಎಂದರು.
ಕಾಂಗ್ರೆಸ್ ಮುಕ್ತ ಭಾರತ ನಿಶ್ಚಿತ: ನಳಿನ್ ಕುಮಾರ್ ಕಟೀಲ್
ಭಯೋತ್ಪಾದನೆ, ಆತಂಕವಾದ ಬೆಳೆಸಿದ್ದೇ ಕ್ರಾಂಗ್ರೆಸ್: ಕಾಂಗ್ರೆಸ್ ಭಯೋತ್ಪಾದನೆ, ಆತಂಕವಾದ ಬೆಳೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಆರೋಪಿಸಿದರು. ಬುಧವಾರ ಸಂಜೆ ಇಲ್ಲಿ ಬಿಜೆಪಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿದ ಅವರು, ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಸೋನಿಯಾ, ವಾದ್ರಾ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ ಎಲ್ಲರೂ ಬೇಲ್ನಲ್ಲಿ ಹೊರಗಿದ್ದಾರೆ ಎಂದರು.
ಇಂದಿರಾಗಾಂಧಿ ಕಾಲದಲ್ಲಿ ಭಯೋತ್ಪಾದನೆ ಹುಟ್ಟಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಭಯೋತ್ಪಾದನೆ ಬಂದ್ ಆಗಿದೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ಭಿಕ್ಷುಕರ ದೇಶವನ್ನಾಗಿಸಿತ್ತು. ಆದರೆ ಬಿಜೆಪಿ ಭಾರತವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದೆ. ಇಡೀ ಜಗತ್ತೇ ಭಾರತವನ್ನು ತಿರುಗಿ ನೋಡುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನೇ 6 ಗಂಟೆ ನಿಲ್ಲಿಸಿ ನಮ್ಮ ವಿದ್ಯಾರ್ಥಿಗಳನ್ನು ರಕ್ಷಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಪಿಎಫ್ಐ ಕೇಸ್ ಹಿಂದಕ್ಕೆ: ಸಿದ್ದರಾಮಯ್ಯ ಸರ್ಕಾರವಿದ್ದಾಗ ಭಯೋತ್ಪಾದಕರಿಗೆ ಬೆಂಗಾವಾಲಾಗಿ ನಿಂತಿದ್ದರು. ಅವರ ಮೇಲೆ ಹಾಕಿದ್ದ ಪ್ರಕರಣಗಳನ್ನು ಹಿಂಪಡೆದಿದ್ದರು. ಆದರೆ ಮೋದಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿತು ಎಂದು ಹೇಳಿದರು. ವೀರಶೈವ-ಲಿಂಗಾಯತ ಸಮುದಾಯ ಒಡೆಯಲು ಮುಂದಾಗಿದ್ದು ಸಿದ್ದರಾಮಯ್ಯ ಎಂದು ಹರಿಹಾಯ್ದ ಅವರು, ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಮೀಸಲಾತಿ ಕೊಡಲಿಲ್ಲ. ಎಸ್ಸಿ-ಎಸ್ಟಿಗೆ ಮೀಸಲಾತಿ ಕೊಟ್ಟಿದ್ದು ಬಿಜೆಪಿ ಎಂದು ಕಟೀಲ ಹೇಳಿದರು.
ಬಿಜೆಪಿ ಪರ ಅಲೆ: ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ. 2023ರ ಚುನಾವಣೆಯಲ್ಲಿ ಬಿಜೆಪಿಗೆ ಬರೋಬ್ಬರಿ 140ಕ್ಕೂ ಅಧಿಕ ಸ್ಥಾನ ದೊರೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಟೀಲ್, ಕಳಸಾ-ಬಂಡೂರಿಗೆ ಬಿಜೆಪಿ ಸರ್ಕಾರವೇ ಅಂತ್ಯ ಹಾಡುತ್ತದೆ. ಈ ಭಾಗದ ಜನರ ಬಹುವರ್ಷಗಳ ಬೇಡಿಕೆ ಈಡೇರಿಸುತ್ತದೆ ಎಂದರು. ಇದಕ್ಕೂ ಮೊದಲು ರೋಣ ಕ್ರಾಸ್ನಿಂದ ಗವಿಮಠದ ವರೆಗೆ ಬೈಕ್ ರಾರಯಲಿ ನಡೆಸಲಾಯಿತು, ಹುತಾತ್ಮ ರೈತರ ವೀರಗಲ್ಲಿಗೆ ಬಿಜೆಪಿ ಮುಖಂಡರು ನಮನ ಸಲ್ಲಿಸಿ ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದರು.
SC-ST Reservation: ಸಿದ್ದರಾಮಯ್ಯಗೆ ಮೀಸಲಾತಿ ಕೊಡೋ ಯೋಗ್ಯತೆ ಇರಲಿಲ್ಲ: ಕಟೀಲ್
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ್, ರಾಮಣ್ಣ ಲಮಾಣಿ, ಬಸವರಾಜ ಕುಂದಗೋಳಮಠ, ಎಸ್.ಬಿ. ದಾನಪ್ಪಗೌಡರ, ಅಣ್ಣಪ್ಪ ಬಾಗಿ, ಶಂಕರಗೌಡ ರಾಯನಗೌಡ್ರ, ಷಣ್ಮುಖ ಗುರಿಕಾರ, ಪ್ರಭುಗೌಡ ಇಬ್ರಾಹಿಂಪುರ, ಅಂದಾನಯ್ಯ ಹಿರೇಮಠ, ರಾಯನಗೌಡ ಪಾಟೀಲ್, ಸಿದ್ದನಗೌಡ ಪಾಟೀಲ್(ಅಡ್ನೂರ) ಸೇರಿದಂತೆ ಹಲವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.