ಸಿದ್ದರಾಮಯ್ಯನವರೇ ಇಬ್ರೂ ರಾಜೀನಾಮೆ ಕೊಟ್ಟು ಮತ್ತೆ ಸ್ಪರ್ಧಿಸೋಣ ಬರ್ತೀರಾ? ಬಹಿರಂಗ ಸವಾಲೊಡ್ಡಿದ ಜಿ.ಟಿ. ದೇವೇಗೌಡ

By Sathish Kumar KHFirst Published Apr 3, 2024, 11:25 AM IST
Highlights

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯನವರೇ ಇಬ್ರೂ ರಾಜೀನಾಮೆ ಕೊಟ್ಟು ಮತ್ತೆ ಸ್ಪರ್ಧಿಸೋಣ ಬರ್ತೀರಾ? ಆಗ ಯಾರು ಗೆಲ್ಲುತ್ತಾರೆ ಗೊತ್ತಾಗುತ್ತದೆ ಎಂದು ಶಾಸಕ ಜಿ.ಟಿ. ದೇವೇಗೌಡ  ಬಹಿರಂಗ ಸವಾಲೊಡ್ಡಿದ್ದಾರೆ.

ಬೆಂಗಳೂರು (ಏ.03): ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬನ್ನಿ ಬಹಿರಂಗ ಸವಾಲು ಹಾಕ್ತೀನಿ. ಇಬ್ಬರೂ ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪುನಃ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋಣ. ಆವಾಗ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಶಾಸಕ ಜಿ.ಟಿ. ದೇವೇಡೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಸವಾಲು ಹಾಕಿದರು.

'ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹಾಗಾದರೆ, ವರುಣ ಕ್ಷೇತ್ರಕ್ಕೆ ನೀವು ರಾಜೀನಾಮೆ ಕೊಡಿ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡುತ್ತೇನೆ. ಬನ್ನಿ ಇಬ್ಬರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಗೆ ನಿಲ್ಲೋಣ. ಯಾರು ಗೆಲುತ್ತಾರೆ ನೋಡೋಣಾ? ಎಂದು ಬಹಿರಂಗ ಸವಾಲು ಹಾಕಿದರು. 

ಚುನಾವಣಾ ಅಂಗಳದಲ್ಲಿ ನಾಯಕರ ವಾಗ್ಯುದ್ಧ: ಸಿದ್ದು ವರ್ಸಸ್‌ ಅಮಿತ್ ಶಾ ಬರ ಪರಿಹಾರ ಜಟಾಪಟಿ..!

ಸಿಎಂ ಗೆ ಜಿ.ಟಿ. ದೇವೇಗೌಡ ಸವಾಲು: ಸಿದ್ದರಾಮಯ್ಯಗೆ ಅಭಿವೃದ್ಧಿ ಅಂದರೆ ಏನೂ ಅಂತಾ ಗೊತ್ತಿಲ್ಲ. ಅಭಿವೃದ್ಧಿ ಮಾಡದೆ ರಾಜಕೀಯದಲ್ಲಿ ಬೆಳೆದಿದ್ದು ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ. ಚಾಮುಂಡೇಶ್ವರಿ ಉಪ ಚುನಾವಣೆ ವೇಳೆ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಅದಕ್ಕಾಗಿ ಆಗ ನೀವು ಗೆದ್ದಿದ್ದೀರಿ. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಎಷ್ಟು ಸಲ ಪ್ರಯತ್ನ ಪಟ್ಟಿದ್ದೀರಿ. ನನ್ನ ಕಾಯೋಕೆ ದೈವ ಇಲ್ವಾ, ಧರ್ಮ ಇಲ್ವಾ ಅದು ಹೇಗೆ ಸೋಲಿಸ್ತಿರಿ ನೀವು ನನ್ನ? ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದು ಹೋಯ್ತು. ಯಾಕೆ ಪದೇ ಪದೇ ಹೀಗೆ ಮಾತಾಡ್ತಿರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಶಿಕ್ಷಣ ಇಲಾಖೆ ಅಧಿಕಾರಿ, ತಹಶಿಲ್ದಾರರು ಸೇರಿ ವಿವಿಧ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಂಧುಗಳೇ ಇದ್ದಾರೆ. ನೀವು ಎಷ್ಟು ದಿನ ಸಿಎಂ ಆಗಿರ್ತೀರಿ? ಎಷ್ಟು ದಿನ ಅಧಿಕಾರದಲ್ಲಿ ಇರ್ತಿರಾ ನೀವು? ನೋಡೋಣ. ಎಷ್ಟು ನೋವು ಕೊಡ್ತಾ ಇದ್ದಿರಿ ನೀವು ನನಗೆ. ಪದೇ ಪದೇ ಬಂದು ಯಾಕೆ ರೀತಿ ಚುಚ್ಚಿ ಮಾತಾಡ್ತಿರಿ? ಮೌನವಾಗಿ ಮರ್ಯಾದೆಯಿಂದ ಇರಿ. 35 ಸಾವಿರದಿಂದ ನಾನು ನಿಮ್ಮನ್ನು ಸೋಲಿಸಿದ್ದಾಗಲೂ ನಿಮ್ಮ ಬಗ್ಗೆ  ಅಗೌರವದಿಂದ  ಮಾತಾಡಿಲ್ಲ ಎಂದು ವಾಗ್ದಾಳಿ ಮಾಡಿದರು.

ಎಂ.ಲಕ್ಷ್ಮಣ ನಮ್ಮ, ನಿಮ್ಮಲ್ಲರ ಧ್ವನಿಯಾಗಿ ಪಾರ್ಲಿಮೆಂಟಿಗೆ ಹೋಗ್ತಾರೆ, ಗೆಲ್ಲಿಸಿ ಕಳಿಸಿ: ಸಿದ್ದರಾಮಯ್ಯ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಹೆಸರಿಗೆ ಮಾತ್ರ ಶಾಸಕ. ಚಾಮುಂಡೇಶ್ವರಿಯಲ್ಲಿ ಎಲ್ಲಾ ನಿಮ್ಮದೇ ಆಡಳಿತ ನಡೆಯುತ್ತಿದೆ. ನಮ್ಮ ಕ್ಷೇತ್ರದ ಎಲ್ಲ ಗುತ್ತಿಗೆದಾರರು ಕಮೀಷನ್ ಅನ್ನು ನಿಮ್ಮ ಪುತ್ರನಿಗೆ  ಕೊಡಬೇಕು. ನಿಮ್ಮ ಪುತ್ರ ಯತೀಂದ್ರ ನಮ್ಮ‌ ಕ್ಷೇತ್ರದಲ್ಲಿ ಕಮೀಷನ್ ದಂಧೆ ಮಾಡ್ತಿದ್ದಾರೆ. ನಿಮ್ಮದು 60% ಕಮೀಷನ್ ಸರಕಾರವಾಗಿದೆ. ವರುಣಾದಲ್ಲಿ ನೀವು ಬಿಜೆಪಿಯ ದೊಡ್ಡವರ ಬೆಂಬಲ ಪಡೆದು ಗೆದ್ದಿಲ್ವಾ? ಅದು ನಮಗೆ ಗೊತ್ತಿದೆ ಎಂದು ಟೀಕೆ ಮಾಡಿದರು.

click me!