‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌' ಮೈಲಾರಲಿಂಗೇಶ್ವರ ಕಾರ್ಣಿಕ ಹೇಳಿದ್ದು ನಿಜವಾಯ್ತು!

By Kannadaprabha NewsFirst Published May 21, 2023, 5:04 AM IST
Highlights

 ‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌’ ಎಂಬ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ದಿಟವಾಗಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ (ಮೇ.21) : ‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌’ ಎಂಬ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ದಿಟವಾಗಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.

ಹೌದು, ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ನಾಡಿನ ರಾಜಕಾರಣ ಸೇರಿದಂತೆ, ಪ್ರತಿಯೊಂದು ಕ್ಷೇತ್ರದ ಭವಿಷ್ಯ ಸಾರುವ ಸತ್ಯದ ನುಡಿ ಎನ್ನುವುದು ಭಕ್ತರ ನಂಬಿಕೆ. 2023ನೇ ಸಾಲಿನಲ್ಲಿ ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಎಂದು ಗೊರವಯ್ಯ ಭವಿಷ್ಯ ನುಡಿದಿದ್ದನು. ಹಳೆ ಸರ್ಕಾರದ ವ್ಯವಸ್ಥೆ ಸಂಪೂರ್ಣ ಹಳಸಿ ಹೋಗಿ ರಾಜ್ಯದ ಜನ ಕೂಡಾ ರೋಸಿ ಹೋಗಿದ್ದರು. ಕಂಬಳಿ ಎಂಬುದು ವಿಜಯದ ಸಂಕೇತವಾಗಿದ್ದು, ಮತ್ತೆ ಈ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗುತ್ತಾರೆಂದು ವಿಶ್ಲೇಷಿಸಲಾಗಿತ್ತು. ಆ ಮಾತು ಈಗ ಸತ್ಯವಾಗಿದೆ.

ನೀರಿನ ಸಮಸ್ಯೆ ವಾರದೊಳಗೆ ಪರಿಹರಿಸಿ: ಪ್ರಲ್ಹಾದ್ ಜೋಶಿ ಖಡಕ್ ಸೂಚನೆ...

ಚುನಾವಣೆಗೂ ಮುನ್ನ ಸಿದ್ದರಾಮಯ್ಯ(Siddaramaiah) ಮೈಲಾರ ಕಾಗಿನೆಲೆ ಕನಕ ಗುರುಪೀಠದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಆಗ ಮೈಲಾರಲಿಂಗೇಶ್ವರ ದರ್ಶನ ಪಡೆಯುವ ಜತೆಗೆ ವಿಶೇಷ ಪೂಜೆ ಕೂಡಾ ಸಲ್ಲಿಸಲಾಗಿತ್ತು. ಆಗ ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಂಡಾರದ ಪ್ರಸಾದ ನೀಡಿದ್ದರು.

ಡಿಕೆಶಿ ಕಾಪ್ಟರ್‌ ಕಾಣಿಕೆ:

ಕಳೆದ 2018ರಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಇಂಧನ ಖಾತೆ ಸಚಿವರಾಗಿದ್ದ ಡಿ.ಕೆ. ಶಿವಕುಮಾರ(DK Shivakumar) ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಆಲಿಸಲು ಕಾಪ್ಟರ್‌ ಮೂಲಕ ಆಗಮಿಸಿದ್ದರು. ಆ ಕಾಪ್ಟರ್‌ ದೇವಸ್ಥಾನ ಸೇರಿದಂತೆ ಕಾರ್ಣಿಕ ನುಡಿಯುವ ಡೆಂಕಣ ಮರಡಿಯ ಮೇಲೆ ಹಾರಾಡಿತ್ತು. ಕಾರ್ಣಿಕ ನುಡಿ ಹೇಳುವ ಡೆಂಕಣ ಮರಡಿಯಲ್ಲಿ ಢಮರುಗ ಬಾರಿಸಿ ಕಾರ್ಣಿಕ ನುಡಿ ಆಲಿಸಿದ್ದರು.

ಸ್ವಾಮಿ ಸನ್ನಿಧಾನದಲ್ಲಿ ಆಡಂಬರಕ್ಕೆ ಆದ್ಯತೆ ಇಲ್ಲ. ಡಿ.ಕೆ. ಶಿವಕುಮಾರ ಪಾದಯಾತ್ರೆ ಮೂಲಕ ಬಂದು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಬೇಕು ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್‌ ಅಂದು ಹೇಳಿಕೆ ನೀಡಿದ್ದರು.

ಅಂದಿನ ಶಾಸಕರಾಗಿದ್ದ ಪಿ.ಟಿ. ಪರಮೇಶ್ವರ ನಾಯ್ಕ(PT Parameshwar naik) ಡಿ.ಕೆ. ಶಿವಕುಮಾರ ಹೆಸರಿನಲ್ಲಿ ಮೈಲಾರಲಿಂಗೇಶ್ವರನಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ, ಅವರಿಗೆ ಬಂದಿರುವ ಎಲ್ಲ ಸಂಕಷ್ಟಗಳು ಬೇಗನೆ ಪರಿಹಾರವಾಗಿ, ದೋಷ ಮುಕ್ತವಾಗಲಿ ಎಂದು ಪೂಜೆ ಸಲ್ಲಿಸಿದ್ದರು. ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಅಲ್ಲದೇ ಮೈಲಾರ ಪುಣ್ಯಕ್ಷೇತ್ರದಲ್ಲಿ ಕಾಪ್ಟರ್‌ ಹಾರಾಡಿದಕ್ಕೆ ಡಿ.ಕೆ. ಶಿವಕುಮಾರ ಅವರು ಸ್ವಾಮಿಗೆ ಬೆಳ್ಳಿಯ ಕಾಪ್ಟರ್‌ನ್ನು ಕಾಣಿಕೆಯಾಗಿ ಸಲ್ಲಿಸಿದ್ದರು.

ಡಿಕೆಶಿಗೆ ಭಂಡಾರ ಪ್ರಸಾದ:

ಇತ್ತೀಚೆಗೆ ಮೈಲಾರ ಹತ್ತಿರದ ಹೊಳಲು ಗ್ರಾಮದಲ್ಲಿ ವಿಧಾನಸಭಾ ಚುನಾವಣೆ(Karnataka assembly election 2023) ಪ್ರಚಾರಕ್ಕೆ ಬಂದಿದ್ದ ವೇಳೆ, ಮೈಲಾರಲಿಂಗೇಶ್ವರ ಸ್ವಾಮಿ ದರ್ಶನ ಪಡೆಯುವ ಜತೆಗೆ ವಿಶೇಷ ಪೂಜೆ ಕೂಡಾ ಸಲ್ಲಿಸಿದ್ದರು.

 

ಅಂಬಲಿ ಹಳಸಿತು, ಕಂಬಳಿ ಹಾಸೀತಲೇ ಪರಾಕ್: ಗೊರವಯ್ಯ ಭವಿಷ್ಯವಾಣಿ

ಆ ವೇಳೆ ದೇವಸ್ಥಾನದ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ್‌ ಡಿ.ಕೆ. ಶಿವಕುಮಾರ ಅವರಿಗೆ ಭಂಡಾರ ಪ್ರಸಾದ ನೀಡಿ ಆಶೀರ್ವಾದ ಮಾಡಿದ್ದರು. ಅದರ ಫಲವಾಗಿ ಈಗ ಡಿ.ಕೆ. ಶಿವಕುಮಾರ ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಇಬ್ಬರೂ ಮೈಲಾರಲಿಂಗೇಶ್ವರ ದರ್ಶನಕ್ಕೆ ಆಗಮಿಸಿದ್ದರು. ಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಇಬ್ಬರಿಗೂ ಸ್ವಾಮಿಯ ಭಂಡಾರ ಪ್ರಸಾದ ನೀಡಿದ್ದೇವೆ.

ಗುರು ವೆಂಕಪ್ಪಯ್ಯ ಒಡೆಯರ್‌, ವಂಶ ಪಾರಂಪರ್ಯ ಧರ್ಮದರ್ಶಿ, ಮೈಲಾರಲಿಂಗೇಶ್ವರ ದೇವಸ್ಥಾನ, ಮೈಲಾರ

click me!