'ಇದುವರೆಗಿನ ರಾಜಕಾರಣ ತಾತ್ಕಾಲಿಕ.. ನನ್ನ ಅಸಲಿ ಪಾಲಿಟಿಕ್ಸ್ 2023ಕ್ಕೆ ಶುರು'

By Suvarna NewsFirst Published Dec 21, 2020, 2:45 PM IST
Highlights

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮತ್ತೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಇದರ ಮಧ್ಯೆ ಒಂದು ಹೇಳಿಕೆಯಿಂದ ರಾಜ್ಯ ರಾಜಕಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ.

ಬೆಂಗಳೂರು, (ಡಿ.21): ಇದುವರೆಗಿನ ರಾಜಕಾರಣ ತಾತ್ಕಾಲಿಕವಾಗಿ ಮಾಡಿದ್ದೇನೆ. ನನ್ನ ನಿಜವಾದ ರಾಜಕಾರಣ 2023ಕ್ಕೆ ಶುರುವಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. 

ಇಂದು (ಸೋಮವಾರ) ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೊರೋನಾದಿಂದಾಗಿ ಪಕ್ಷದ ಕಾರ್ಯಚಟುವಟಿಗಳಿಗೆ ಹಿನ್ನಡೆಯಾಗಿದೆ. 2023ಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ನನ್ನ ಗುರಿ ಎಂದು ಹೇಳಿದರು. ಜೊತೆಗೆ, ಯಾವ ಪಕ್ಷದ ಜೊತೆಗೂ ವಿಲೀನದ ಪ್ರಸ್ತಾಪವೇ ಇಲ್ಲ ಮತ್ತೊಮ್ಮೆ ಸ್ಪಷ್ಟಡಿಸಿದರು.

ಅಂದು ನಾನು ಜೆಡಿಎಸ್ ಬಗ್ಗೆ ಹೇಳಿದ್ದು ಈಗ ಸಾಬೀತಾಗಿದೆ: ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ತಾಜ್ ವೆಸ್ಟ್ ‌ಎಂಡ್‌ನಲ್ಲಿದ್ದು ಅಧಿಕಾರ ಮಾಡಿದೆ ಅಂತಾರೆ. ನನ್ನ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತಾಡುವುದು ಬೇಡ. ನಾನು ಬಿಜೆಪಿ ಬಿ ಟೀಮ್ ಆಗಿದ್ದರೆ ಸರ್ಕಾರ ಮಾಡುತ್ತಿರಲಿಲ್ಲ. ಕಾಂಗ್ರೆಸ್ ಜೊತೆ ಸೇರಿ ನಾನು ಸರ್ಕಾರ ಮಾಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

'ನನ್ನ ಋಣದಲ್ಲಿ ಸಿದ್ದರಾಮಯ್ಯ'
ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು. ನಾನು ಅವರ ಋಣದಲ್ಲಿಲ್ಲ, ಅವರೇ ನನ್ನ ಋಣದಲ್ಲಿದ್ದಾರೆ. ಅವರು ಡಿಸಿಎಂ ಆಗುವಾಗ ನನ್ನ ಕೊಡುಗೆ ಅಪಾರವಾಗಿದೆ. ನನ್ನ ಬಗ್ಗೆ ಮಾತಾಡುವಾಗ ಅವರು ಎಚ್ಚರಿಕೆಯಿಂದಿರಬೇಕು ಎಂದು ಗುಡುಗಿದರು.

ನನ್ನನ್ನು ಸಿಎಂ ಮಾಡುವಲ್ಲಿ ಸಿದ್ದರಾಮಯ್ಯ ದುಡಿಮೆಯಿಲ್ಲ. 2004ರಲ್ಲಿ ಅವರನ್ನ ಅಧಿಕಾರಕ್ಕೆ ತರಲು ನನ್ನ ದುಡಿಮೆ ಇದೆ. ನನ್ನ ದುಡ್ಡನ್ನು ಬಳಸಿ ಡಿಸಿಎಂ ಮಾಡಿದ್ದೇನೆ ಎಂದು ಹೇಳಿದರು.

'ಬೇರೆ ಪಕ್ಷದ ಜೊತೆ ವಿಲೀನ ಇಲ್ಲ'
ಜೆಡಿಎಸ್ ಪಕ್ಷವನ್ನು ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ನಾನು ಬದುಕಿರುವವರೆಗೆ ಬೇರೆ ಪಕ್ಷದ ಜೊತೆ ವಿಲೀನ ಇಲ್ಲ.ಅಧಿಕಾರದ ಆಸೆಯಿಂದ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಕಾಂಗ್ರೆಸ್‌ನ ಸದ್ಯದ ಬೆಳವಣಿಗೆಯನ್ನು ಕಂಡು ನಾನು ಅನಿವಾರ್ಯವಾಗಿ ಕೆಲವು ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.

click me!